ಕರ್ನಾಟಕ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅದಲ್ಲದೇ ನಿರೀಕ್ಷೆಯಂತೆ ಡಿ. ಕೆ. ಶಿವಕುಮಾರ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ, ಮಂಗಳೂರಿನ ಶಾಸಕ ಯು. ಟಿ. ಖಾದರ್ ಅವರನ್ನು ಸ್ಪೀಕರ್ ಹುದ್ದೆಗೆ ನೇಮಿಸಿದ್ದು ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೇವಲ ಇಬ್ಬರು ಕಾಂಗ್ರೆಸ್ ಶಾಸಕರಲ್ಲಿ ಇವರೂ ಒಬ್ಬರು. ಹೀಗಿರುವಾಗ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಬಲವರ್ಧನೆ ಮಾಡಬೇಕಿದ್ದ ಖಾದರ್ಗೆ ಸ್ಪೀಕರ್ ಸ್ಥಾನ ನೀಡಿದ್ದು ಚರ್ಚೆಗೆ ಕಾರಣವಾಗಿದೆ.
ಸ್ಪೀಕರ್ ಸ್ಥಾನದ ನಿರೀಕ್ಷೆಯನ್ನು ಯಾರೂ ಇಟ್ಟುಕೊಂಡಿರಲಿಕ್ಕಿಲ್ಲ. ಆದರೆ ಚುನಾವಣಾ ಫಲಿತಾಂಶ ಬಂದ ಬೆನ್ನಲ್ಲೇ ರಾಜಕೀಯ ವಿಶ್ಲೇಷಕರು ಸ್ಪೀಕರ್ ಹುದ್ದೆ ಅಲಂಕರಿಸಬಹುದಾದ ಸಂಭವನೀಯರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೆ ಯಾರೂ ಸಹ ಖಾದರ್ ಹೆಸರನ್ನು ಪ್ರಸ್ತಾಪಿಸಿಯೇ ಇರಲಿಲ್ಲ. ಹಲವು ಹಿರಿಯ ಶಾಸಕರ ಬಳಿ ಕಾಂಗ್ರೆಸ್ ನಾಯಕರು ಸ್ಪೀಕರ್ ಸ್ಥಾನದ ಆಫರ್ ನೀಡಿದರೂ, ಅವರೆಲ್ಲರೂ ಅದನ್ನು ತಿರಸ್ಕರಿಸಿರುವುದಾಗಿ ಕೆಲವು ಸುದ್ದಿ ಮೂಲಗಳಿಂದ ತಿಳಿದುಬಂದಿದೆ! ಅದಕ್ಕೆ ಕಾರಣ, ‘ಕರ್ನಾಟಕ ರಾಜ್ಯದ ಸ್ಪೀಕರ್ ಆದವರು ಮುಂದಿನ ಚುನಾವಣೆಯಲ್ಲಿ ಸೋಲುತ್ತಾರೆ’ ಎಂಬ ಮೂಢನಂಬಿಕೆ!
2009 ರಿಂದ ಸ್ಪೀಕರ್ ಆದವರಿಗೆ ಸೋಲು!
ಕಳೆದ ಒಂದು ದಶಕದಿಂದ ರಾಜ್ಯ ವಿಧಾನಸಭೆಯ ಸ್ಪೀಕರ್ ಹುದ್ದೆ ಅಲಂಕರಿಸಿದವರು, ತಾವು ಎದುರಿಸಿರುವ ಮುಂದಿನ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದಾರೆ. 2009 ರಿಂದ ಸ್ಪೀಕರ್ ಹುದ್ದೆ ಅಲಂಕರಿಸಿರುವ ಕೆ. ಜೆ. ಬೋಪಯ್ಯ (2009-13), ಕಾಗೋಡು ತಿಮ್ಮಪ್ಪ (2013-16), ಕೆ. ಬಿ. ಕೋಳೀವಾಡ (2016-18) ಕೆ. ಆರ್. ರಮೇಶ್ ಕುಮಾರ್ (2018-19) ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ (2019-23) ತಾವು ಎದುರಿಸಿದ ಮುಂದಿನ ಚುನಾವಣೆಯಲ್ಲಿ ಸೋತಿದ್ದಾರೆ. ಇದೇ ಕಾರಣದಿಂದ ಹಿರಿಯ ಶಾಸಕರು ಯಾರೂ ಸ್ಪೀಕರ್ ಹುದ್ದೆಗೆ ಕಣ್ಣಿಟ್ಟಿರಲಿಲ್ಲ. ಹಾಗಾಗಿ ಈ ಪಟ್ಟ ಖಾದರ್ಗೆ ಒಲಿದಿದೆ ಎನ್ನಲಾಗಿದೆ!
ಖಾದರ್ ಅನ್ನು ಕಟ್ಟಿ ಹಾಕುವ ಪ್ರಯತ್ನ?
ಯು. ಟಿ. ಖಾದರ್ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು (ಉಳ್ಳಾಲ) ವಿಧಾನಸಭೆಯ ಶಾಸಕರು. ಸತತ ತಂದೆ ಯು. ಟಿ. ಫರೀದ್ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿಯೇ ಮುಂದುವರೆದುಕೊAಡು ಬಂದಿರುವ ಖಾದರ್, 2007ರಲ್ಲಿ ಮೊದಲ ಬಾರಿಗೆ ಶಾಸಕರಾದರು ಹಾಗೂ ಅಲ್ಲಿಂದ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿರುವ ಅವರು, ಈ ಬಾರಿಯ ಚುನಾವಣೆಯಲ್ಲೂ ಗೆದ್ದು ಸತತ 5ನೇ ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸದ್ಯ ಆ ಕ್ಷೇತ್ರದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದಿರುವ ಖಾದರ್ಗೆ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಹುದ್ದೆಯನ್ನು ನೀಡಿ, ಅವರನ್ನು ಚುನಾವಣಾ ರಾಜಕೀಯದಿಂದ ಹೊರತರುವ ಪ್ರಯತ್ನ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಮೂಢನಂಬಿಕೆಗೆ ಫುಲ್ಸ್ಟಾಪ್ ಹಾಕ್ತಾರಾ ಯು. ಟಿ. ಖಾದರ್?
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭಾರೀ ಗೆಲುವು ದಾಖಲಿಸಿದರೂ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 13 ಕ್ಷೇತ್ರಗಳಲ್ಲಿ ಅವರು ಗೆಲುವಿನ ನಗೆ ಕಂಡದ್ದು ಕೇವಲ ಎರಡರಲ್ಲಿ. ಅವುಗಳ ಪೈಕಿ ಒಂದು ಮಂಗಳೂರು (ಉಳ್ಳಾಲ). ಈ ಭಾರಿಯ ಚುನಾವಣೆಯಲ್ಲಿ 20 ಸಾವಿರಕ್ಕೂ ಅಧಿಕ ಮತಗಳ ಅಂತರದಿAದ ಗೆದ್ದು ಬೀಗಿದ್ದ ಖಾದರ್, ಈ ಕ್ಷೇತ್ರದಲ್ಲಿ ತನ್ನ ಖದರ್ ಏನು ಎಂಬುದನ್ನು ಸಾಬೀತುಪಡಿಸಿದ್ದರು. ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರವಾಗಿರುವ ಉಳ್ಳಾಲದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ಹಾಗಾಗಿ ಏನೇ ಆದರೂ ಮುಂದಿನ ಚುನಾವಣೆಯಲ್ಲೂ ಗೆಲುವು ಖಾದರ್ ಪಾಲಾಗಿ ಸ್ಪೀಕರ್ ಆದವರು ಚುನಾವಣೆಯಲ್ಲಿ ಸೋಲುತ್ತಾರೆ ಎಂಬುವುದು ಕೇವಲ ಮೌಢ್ಯ ಅನ್ನೋದನ್ನು ಖಾದರ್ ಸಾಧಿಸಿ ತೋರಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕು!
ಯು. ಟಿ. ಖಾದರ್ – ಕರ್ನಾಟಕ ರಾಜ್ಯದ ಮೊದಲ ಅಲ್ಪಸಂಖ್ಯಾತ ಸ್ಪೀಕರ್!
ಶಾಸಕ ಯು. ಟಿ. ಖಾದರ್ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆದ ಮೊದಲ ಅಲ್ಪಸಂಖ್ಯಾತ ಶಾಸಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದುವರೆಗೆ ಇಬ್ಬರು ಮಹಿಳಾ ಸ್ಪೀಕರ್ಗಳನ್ನೂ ಪಡೆದಿರುವ ರಾಜ್ಯ ವಿಧಾನಸಭೆ, ಈ ಬಾರಿ ಮೊದಲ ಮುಸ್ಲಿಂ ಸ್ಪೀಕರ್ಅನ್ನು ಪಡೆದಿದೆ. ಅದಲ್ಲದೇ, ರಾಜ್ಯ ವಿಧಾನಸಭಾ ಸ್ಪೀಕರ್ ಪಟ್ಟ ಅಲಂಕರಿಸಿರುವ ಕಿರಿಯ ಶಾಸಕ ಎಂಬ ಖ್ಯಾತಿಯೂ ಖಾದರ್ ಪಾಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಜ್ಯ ವಿಧಾನಸಭೆಯ ಸ್ಪೀಕರ್ ಆದ ಕೇವಲ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಮೈಸೂರು ರಾಜ್ಯವಾಗಿದ್ದ ಸಂದರ್ಭ ದ.ಕ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದ ಶಾಸಕ ಬಂಟ್ವಾಳ ವೈಕುಂಠ ಬಾಳಿಗ (1962-68) ಸ್ಪೀಕರ್ ಆಗಿದ್ದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಶಕ್ತಿ ತುಂಬುವವರು ಯಾರು?
ಸ್ಪೀಕರ್ ಆದವರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಪಕ್ಷದ ಪರವಾಗಿಯೂ ವಾದ ಮಂಡಿಸಬಾರದು. ಹೀಗಿರುವಾಗ, ದ.ಕ – ಉಡುಪಿ ಭಾಗದಲ್ಲಿ ಕಾಂಗ್ರೆಸ್ ಧ್ವನಿ ಆಗಬೇಕಿದ್ದ ಖಾದರ್ ಅನ್ನು ಸ್ಪೀಕರ್ ಆಗಿ ನೇಮಿಸಿರುವ ಕಾಂಗ್ರೆಸ್ ತಪ್ಪು ನಿರ್ಧಾರ ತೆಗೆದುಕೊಂಡಿದೆ ಎಂಬ ಅಭಿಪ್ರಾಯಗಳೂ ಕೇಳಲು ಸಿಗುತ್ತಿವೆ. ಶೇ.50 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿರುವ ಜಿಲ್ಲೆಗಳಿಂದ ಯಾರಾದರೂ ಒಬ್ಬರನ್ನು ಸ್ಪೀಕರ್ ಆಗಿ ನೇಮಿಸಿದರೆ ಸೂಕ್ತ ಆಗ್ತಿತ್ತು.
ಉಸ್ತುವಾರಿ ಆಯ್ಕೆಯೂ ಈಗ ಬಲು ಕಷ್ಟ!
ಸಾಮಾನ್ಯವಾಗಿ ಯಾವ ಜಿಲ್ಲೆಯಿಂದ ಸಚಿವರನ್ನು ಆಯ್ಕೆ ಮಾಡಿರುತ್ತಾರೋ, ಅದೇ ಸಚಿವರನ್ನು ಅವರ ಜಿಲ್ಲೆಯ ಅಥವಾ ನೆರೆಯ ಜಿಲ್ಲೆಯ ಉಸ್ತುವಾರಿಯನ್ನು ಸರ್ಕಾರ ನೀಡುತ್ತೆ. ಕೇವಲ ಇಬ್ಬರು ಕಾಂಗ್ರೆಸ್ ಶಾಸಕರು ಇರುವ ದಕ್ಷಿಣ ಕನ್ನಡ ಜಿಲ್ಲೆಗೆ ಯಾರನ್ನು ಉಸ್ತುವಾರಿ ಮಾಡಲಾಗುತ್ತದೆ ಎಂಬ ಪ್ರಶ್ನೆ ಎದುರಾಗಿದೆ. ಸಚಿವರಾದವರು ಮಾತ್ರ ಉಸ್ತುವಾರಿ ವಹಿಸಲು ಸಾಧ್ಯ. ಮೊದಲ ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಅಶೋಕ್ ರೈ ಗೆ ಯಾವ ಖಾತೆಯನ್ನೂ ನೀಡುವುದು ಸಂಶಯ. ಅದಲ್ಲದೇ ಪಕ್ಕದ ಉಡುಪಿ ಜಿಲ್ಲೆಯಲ್ಲೂ ಕಾಂಗ್ರೆಸ್ ಪಕ್ಷದಿಂದ ಯಾರೂ ಶಾಸಕರಾಗಿಲ್ಲ. ಹಾಗಾಗಿ ಈ ಎರಡು ಜಿಲ್ಲೆಗಳಿಗೆ ಯಾವ ಜಿಲ್ಲೆಯ ಶಾಸಕರನ್ನು ಉಸ್ತುವಾರಿ ಸಚಿವರಾಗಿ ನೇಮಿಸಲಾಗುತ್ತದೆ ಎಂಬ ಕುತೂಹಲ ಕರಾವಳಿಗರಲ್ಲಿ ಮನೆ ಮಾಡಿದೆ.