ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಶನಿವಾರ ಅಸ್ತಿತ್ವಕ್ಕೆ ಬಂದಿದೆ. ಸದನ ಕಲಾಪ ನಡೆಸಲು ಸ್ಪೀಕರ್ ಹುದ್ದೆ ಅನಿವಾರ್ಯ ಮತ್ತು ಮುಖ್ಯವೂ ಆಗಿದೆ. ಸೋಮವಾರದಿಂದ ಮೂರು ದಿನಗಳ ಕಾಲ ಮೊಟ್ಟ ಮೊದಲ ವಿಧಾನಸಭೆ ಅಧಿವೇಶನವೂ ನಡೆಯುತ್ತಿದೆ. ಹಂಗಾಮಿ ಸ್ಪೀಕರ್ ಆಗಿ ಕರಾವಳಿ ಭಾಗದ ಹಿರಿಯ ಶಾಸಕ ವಿ. ಆರ್. ದೇಶಪಾಂಡೆ ಅವರನ್ನು ನೇಮಿಸಲಾಗಿದೆ. ಆದರೆ ನೂತನ ಸ್ಪೀಕರ್ ಸ್ಥಾನದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಿರಿಯ ಕಾಂಗ್ರೆಸ್ ನಾಯಕರು ಹಿಂದೇಟು ಹಾಕುತಿದ್ದು, ಇದಕ್ಕೆ ಕಾರಣ ಆ ಹುದ್ದೆಗೆ ಅಂಟಿಗೊಂಡಿರುವ ಭಯ ಎನ್ನಲಾಗುತ್ತಿದೆ.
ಈ ಹಿಂದೆ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಮುಖ್ಯ ಮಂತ್ರಿ ಹುದ್ದೆ ಕಳೆದುಕೊಳ್ಳುತ್ತಾರೆ ಎಂಬ ಕಳಂಕ ಅಂಟಿ ಕೊಂಡಿತ್ತು. ನಂತರ ಸಿದ್ದರಾಮಯ್ಯ , ಯಡಿಯೂರಪ್ಪ ಭೇಟಿ ನೀಡಿ ಆ ಕಳಂಕ ದೂರವಾಗಿದೆ. ಆದರೆ ಇದೀಗ ಸ್ಪೀಕರ್ ಆದವರು ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬ ನಂಬಿಕೆ ಶಾಸಕರಲ್ಲಿ ಬಲವಾಗಿ ಬೇರೂರಿದೆ. ಇದಕ್ಕೆ ಕಾರಣ 2004ರಿಂದ ಸ್ಪೀಕರ್ ಸ್ಥಾನ ಅಲಂಕರಿಸಿದವರು ತಮ್ಮ ರಾಜಕೀಯ ಜೀವನದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಸ್ಪೀಕರ್ ಆಗಿದ್ದ ನಾಯಕರು ನಿರಂತರವಾಗಿ ಚುನಾವಣೆಯಲ್ಲಿ ಸೋತಿದ್ದಾರೆ. ಇದೇ ಕಾರಣಕ್ಕೆ ಅವರ ರಾಜಕೀಯ ಜೀವನವೂ ಕೊನೆಗೊಂಡಿದೆ.
ಹಿಂದಿದ್ದ ಸ್ಪೀಕರ್ ಗಳ ರಾಜಕೀಯ ಏಳುಬೀಳುಗಳನ್ನು ನೋಡುವುದಾದರೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಗೆಲುವಿನ ನಿರೀಕ್ಷೆ ಹೊಂದಿದ್ದ ಕಾಗೇರಿ ಅವರ ಸೋಲು ಪಕ್ಷಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಸ್ವತಃ ಕಾಗೇರಿ ಅವರೂ ಇದನ್ನು ನಿರೀಕ್ಷಿಸಿರಲಿಲ್ಲ. ಪ್ರಬಲ ನಾಯಕರಾಗಿದ್ದ ಅವರಿಗೆ ತಮ್ಮ ಶಕ್ತಿಯ ಮೇಲೆಯೇ ಪ್ರಶ್ನೆಯನ್ನು ಹುಟ್ಟುಹಾಕುವಂತೆ ಮಾಡಿದೆ.
2004ರಲ್ಲಿ ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ಕೃಷ್ಣ ಅವರು 2008ರ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು. 2013ರಲ್ಲಿ ಸ್ಪೀಕರ್ ಹುದ್ದೆ ಅಲಂಕರಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಅವರು 2018ರ ಚುನಾವಣೆಯಲ್ಲಿ ಸೋಲು ಕಂಡರು. ಐದು ಬಾರಿ ಆಯ್ಕೆಯಾಗಿದ್ದ ಹಿರಿಯ ಶಾಸಕ ಕೆ. ಬಿ. ಕೋಳಿವಾಡ 2016ರಲ್ಲಿ ಸ್ಪೀಕರ್ ಆಗಿದ್ದರು. ಅವರು ಸಹ 2018ರಲ್ಲಿ ಚುನಾವಣೆಯಲ್ಲಿ ಪರಭಾವಗೊಂಡರು. ನಂತರದ 2019ರ ಉಪ ಚುನಾವಣೆಯಲ್ಲೂ ಕೋಳಿವಾಡ ಸೋಲು ಕಂಡರು.
2018ರಲ್ಲಿ ಕಾಂಗ್ರೆಸ್ – ಜೆಡಿಎಸ್ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಸಹ ಈ ಬಾರಿ ಚುನಾವಣೆಯಲ್ಲಿ ಸೋತಿದ್ದಾರೆ. ಅಲ್ಲದೇ, ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಖಚಿತ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಉತ್ತಮ ಜನಬೆಂಬಲವೂ ವ್ಯಕ್ತವಾಗಿತ್ತು. ಆದರೆ ಚುನಾವಣೆಯಲ್ಲಿ ತೀವ್ರ ಸೋಲು ಅನುಭವಿಸಿದರು. ಇದು ಕಾಂಗ್ರೆಸ್ ಪಕ್ಷಕ್ಕೂ ತೀವ್ರ ಅಘಾತವನ್ನು ಉಂಟು ಮಾಡಿತ್ತು. ಏಕೆಂದರೆ ಪ್ರಭಾವಿ ಲಿಂಗಾಯಿತ ನಾಯಕರಾಗಿದ್ದ ಶೆಟ್ಟರ್ ಟಿಕೆಟ್ ನಿರಾಕರಣೆಯ ಬೆನ್ನಲ್ಲೇ ಕಾಂಗ್ರೆಸ್ ಸೇರಿ ಟಿಕೆಟ್ ಪಡೆದುಕೊಂಡಿದ್ದರು. ಶೆಟ್ಟರ್ ಅವರಿಗೆ ಮೊದಲ ಪಟ್ಟಿಯಲ್ಲೇ ಸಚಿವ ಸ್ಥಾನ ನೀಡುವ ನಿರೀಕ್ಷೆಯೂ ಇತ್ತು ಆದರೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ.
ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕೂಡ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ.
ಈ ಸೋಲುಗಳ ಹಿನ್ನೆಲೆಯಲ್ಲಿ ಸ್ಪೀಕರ್ ಹುದ್ದೆ ಅಲಂಕರಿಸಲು ಕಾಂಗ್ರೆಸ್ ಹಿರಿಯ ನಾಯಕರು ಮುಂದೆ ಬರುತ್ತಿಲ್ಲ. ಹಿರಿಯ ದಲಿತ ನಾಯಕ ಡಾ. ಜಿ. ಪರಮೇಶ್ವರ ಅವರನ್ನು ಸ್ಪೀಕರ್ ಹುದ್ದೆಗೆ ಯೋಜಿಸಲಾಗಿತ್ತು. ಆದರೆ, ಈ ಪ್ರಸ್ತಾಪವನ್ನು ಅವರು ತಿರಸ್ಕರಿಸಿ ಸಂಪುಟ ಸಚಿವರಾದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಇದೀಗ ಟಿ. ಬಿ. ಜಯಚಂದ್ರ, ಎಚ್. ಕೆ. ಪಾಟೀಲ್ , ಡಾ. ಹೆಚ್. ಸಿ. ಮಹದೇವಪ್ಪ , ವೈ. ಎನ್. ಗೋಪಾಲ ಕೃಷ್ಣ ಮತ್ತು ತನ್ವೀರ್ ಸೇಠ್ ಅವರಲ್ಲಿ ಯಾರಿಗಾದರೂ ಸ್ಪೀಕರ್ ಹುದ್ದೆ ನೀಡಲು ಪಕ್ಷ ಯೋಜಿಸುತ್ತಿದೆ. ಆದರೆ ಇವರು ಯಾರೂ ಕೂಡ ಸ್ಪೀಕರ್ ಆಗಲು ತಯಾರಿಲ್ಲ ಎಂದು ಮೂಲಗಳು ತಿಳಿಸಿವೆ.