ವರಕವಿ ಬೇಂದ್ರೆಯವರದು ಹೊಸ ದರ್ಶನಾಪೇಕ್ಷೆಯ ಅನ್ವೇಷಣಾ ದೃಷ್ಟಿ. ಜೀವನದ ಮೂಲ ನೆಲೆಗಳನ್ನು ಅದರ ತಾತ್ವಿಕತೆಯನ್ನು ಶೋಧಿಸುವ ಹಾದಿಯಲ್ಲಿ ಅವರಿಗೆ ಅತ್ಯಂತ ಸ್ಥೂಲವಾಗಿ ಕಾಣವುದು ಬೆಳಕು . ಮೂಲದಲ್ಲಿ ಜೀವನ ಪ್ರೀತಿ ಪ್ರೇಮ ಒಲವು ಈ ಮೂಲ ಸ್ಥೂಲಗಳ ನಡುವಿನ ಬಾಳಿನ ಕಡಲಲ್ಲಿ ಬರುವ ಲೆಕ್ಕವಿರದಷ್ಟು ದುಖಃದ ಬಂಡೆಗಳು ಎಲ್ಲಿ? ಹೇಗೆ ? ಬಂದು ತಾಗುವುದೋ ಹೇಳಲು ಬಾರದು. ಅದಕ್ಕಾಗಿ ಸಂಯಮ ಅನಿವಾರ್ಯ.
ಆಗ ಮೂಡಿಬಂದ “ನಾನೂ ನಕ್ಕೇನ ” ಎಂಬ ಸ್ವಸಾಂತ್ವನ “ಅಳು ನುಂಗಿ ನಗುವೊಮ್ಮೆ” ಎಂಬ ಪರಸಾಂತ್ವನದ ಊರು ಗೋಲು ಎಲ್ಲವಾಗುತ್ತದೆ. ಇಂಥಹ ತಾತ್ವಿಕತೆಯೊಂದು ಅವರ ನನ್ನ ಕೈ ಹಿಡಿದಾಕೆ! ಕವಿತೆಯಲ್ಲಿ ಮೂಡಿ ಬಂದಿದೆ.
ನನ್ನ ಕೈಯ ಹಿಡಿದಾಕೆ !
ನನ್ನ ಕೈ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
ನಾನು ನಕ್ಕೇನ
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ
ಹುದುಲಾಗ ಸಿಕ್ಕೇನ
ಜಗದಾಗ ಯಾವ್ಯಾವ ನೆರಳು ಬೆಳಕಿನಾಗ
ಹಗಲಿರುಳು ಇದ್ದಾವ
ಎದ್ದೇನ ಬಿದ್ದೇನ ಕತ್ತಲು ಬಿಸಲೇನ
ನಕ್ಕಾವಾ ಗೆದ್ದವಾ
ಹುಸಿನಗುತ ಬಂದೇವ ನಸುನಗುತ ಬಾಳೋಣ
ತುಸುನಗುತ ತೆರಳೋಣ
ಬಡ ನೂರು ವರುಷಾನ ಹರುಷದಿ ಕಳೆಯೋಣ
ಯಾಕಾರೆ ಕೆರಳೋಣ
ಬಡತನ ಒಡೆತನ ಕಡೆತನ ಕುಳಿದಾವೇನ
ಎದೆ ಹಿಗ್ಗು ಕಡೆಮುಟ್ಟ
ಬಾಳಿನ ಕಡಲಾಗ ಅದನ ಮುಳಗಿಸಬ್ಯಾಡ
ಕಡಗೋಲು ಹಿಡಿಹುಟ್ಟ
ನನ್ನ ಕೈ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
ನಾನೂನು ನಕ್ಕೇನ
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ
ಹುದುಲಾಗ ಸಿಕ್ಕೇನ
ತನ್ನೊಂದಿಗೆ ಬದುಕಿನ ಎನೆಲ್ಲ ಆಗು ಹೋಗುಗಳ ತೆರೆ ತೊರೆಗಳ ಹೊಡೆತಕ್ಕೆ ಸಿಕ್ಕಿ ಒದ್ದಾಡಿ ಘಾಸಿಗೊಂಡು ನಿರಾಸೆಯಲ್ಲಿ ತತ್ತರಿಸಿದ ಮಡದಿಗೆ ಕವಿ ಹೇಳುವ ಸಾಂತ್ವನ ಸಮಾಧಾನ. ಇದು, ಮೇಲು ನೋಟಕ್ಕೆ ದಂಪತಿಗಳಿಬ್ಬರ ಸಂವಾದದಂತೆ ಕಂಡರೂ ಈ ಮಿತಿಯನ್ನು ದಾಟಿದ ಅರ್ಥ ವಿಸ್ತಾರವೇ ಇಲ್ಲಿಯ ವೈಶಿಷ್ಟ್ಯ ಇಲ್ಲಿ ಪ್ರತಿನುಡಿಯ ಕೊನೆಯಲ್ಲಿ ಕವಿ ಹೇಳುವ “ನಾನೂನು ನಕ್ಕನ” “ಹುದಲಾಗಿ ಸಿಕ್ಕನ ” “ನನಕ್ಕವಾ ಗೆದ್ದಾವಾ!” “ಯಾಕಾರೆ ಕೆರಳೋಣ ಕಡೆ ಗೋಲು ಹಿಡಿಹುಟ್ಟ ! ಎಂಬ ಸಾಲುಗಳು ನಮ್ಮನ್ನು ಮತ್ತೆ ಮತ್ತೆ ಚಿಂತಿಸಲು ಹಚ್ಚುವಂಥವು. ಈ ಏಳು ಬಿಳಿನ ಜೀವನದಲ್ಲಿ ಅಗತ್ಯವಾಗಿ ಬೇಕಾಗುವ ಆಶಾವಾದಿ ಆಶಯ ಮತ್ತು ಅದಕ್ಕೆ ಪೂರಕ ಕ್ರಿಯೆಗಳ ಕುರಿತು ಈ ನುಡಿಗಳು ನಮಗೆ ಜೀವನವನ್ನು ಹಿರಿದಾಗಿಸಿಕೊಳ್ಳುವ ನಿಟ್ಟಿನಲ್ಲಿ ಆತ್ಮ ವಿಮರ್ಶೆಗೆ ಅವಕಾಶ ಮಾಡಿಕೊಡುತ್ತಿದೆ. ಸೂಚ್ಯ ಸಲಹೆಗಳೂ ಅಗುತ್ತದೆ.
ಕಾರಣ ಇಲ್ಲಿ ಮುಖ್ಯವಾಗಿ ಆಲೋಚಿಸಬೇಕಾದ ಸೂಕ್ಷ್ಮತೆ ಮತ್ತು ಸತ್ಯವೇನೆಂದರೆ ಮನುಷ್ಯ ಒಂಟಿ ಜೀವಿಯಲ್ಲ . (ಒಂಟಿಯಾಗಬಾರದು ) ಪರಸ್ಪರಾವಲಂಬಿತ ಎಂಬುವುದು ಮನುಷ್ಯರೆಲ್ಲರೂ ಬೇರೆಯಾಗುದಿಲ್ಲ: ಬೆರೆಯುವುದು. ಬೆರೆತು ಅರಿತು ” ಬೇಳೆಯಾಗದೆ ಇಂಡಿಗಾಳಿನಂತೆ ” ಕೂಡಿ ಬಾಳುವುದು, ಹೀಗೆ ಕೂಡಿ ಬಾಳಿದಾಗ ಪರಸ್ಪರ ದುಃಖಕ್ಕೆ ಸಾಂತ್ವನ ಸಾಧ್ಯ .ಸಂತೋಷಕ್ಕೆ ನಗುವು ನಲಿವು ಸಾಧ್ಯ. ನಾವು ಆಗ ಮಾತ್ರ ಜೀವನದ ಹಗಲು-ಇರಳು, ನೆರಳು-ಬೆಳಕು, ಕತ್ತಲು ಬಿಸಿಲು, ಬಡತನ ಒಡೆತನ, ಇವನೆಲ್ಲವುಗಳ ಪರಿಣಾಮಗಳನ್ನು ಪರಸ್ಪರ ಅವಲಂಬಿತ ಸಮೂಹ ಸಂವೇದನೆಗಳಗೆ ಹಾಸಿ ಸೋಸಿ ಪರಸ್ಪರರೂ ಬದುಕಿನಲ್ಲಿ ಪಡೆಯಲು ಸಾಧ್ಯ
‘ತಾಳುವಿಕೆಯಲ್ಲಿ ಬಾಳುವಿಕೆ – ಬೇಂದ್ರೆಯವರ ನಿಲುವು ಇದಕ್ಕೆ ಪೂರಕ ಆಧಾರವಾಗಿ ಬೇಕಾದದ್ದು ನಮ್ಮೆಲ್ಲರಲ್ಲೂ ಇರಬೇಕಾದ ಜೀವನದ ಒಲವು, ನೋವು ದುಃಖಗಳಿಗಿಂತ ಪ್ರೀತಿ ಸ್ನೇಹ ಒಲವುಗಳು ನಮ್ಮೆಲ್ಲರ ಬದುಕಿನಲ್ಲಿ ತುಂಬಿ ಬರಬೇಕು, ಬದುಕಿನ ಭೌತಿಕ ವಸ್ತು ವಿಷಯ ಸಂಗತಿಗಳು ಅನಿತ್ಯವಾದವುಗಳು, ಕಡೆತನಕ ಉಳಿಯಲಾರವು,
ಭೌತಿಕದಾಚೆಗಿನ ಎಲ್ಲೆಯಲ್ಲೂ ಜೀವನ ಹಿಗ್ಗುತ್ತ ಹೋಗಬೇಕು. ಅಲ್ಲಿಯ ವರೆಗೆ ಉಳಿದು ಬರುವುದು ಜೀವನದ ಪ್ರೀತಿ ಸ್ನೇಹ ಒಲವುಗಳೇ. ಜೀವನದ ಮೂಲ ಮತ್ತು ಮುಖ್ಯವಾದ ಅಸ್ತಿತ್ವಗಳು. ಅದಕ್ಕಾಗಿ ಕಷ್ಟದಲ್ಲೂ ಒಲವಿಗಾಗಿ ಹಂಬಲಿಸುವ ಬಾಳ ಬೀಜವನ್ನು ಹಿಡಿಯ ಬಲ್ಲ ಒಲವನ್ನೇ ಬದುಕಗಿಸಿಕೊಂಡು ಒಲವೇ ನಮ್ಮ ಬದುಕು ಆಗ ಬದುಕಿನ ಎಂಥ ದುಃಖವೂ ಕರಗಿ ಅಳುನಿಗಿ ನಗು ಉಕ್ಕುತ್ತದೆ ಬದಲಿಗೆ ದುಃಖವೇ ಹೆಚ್ಚೆಂದು ಭಾವಿಸಿ ರೋಧಿಸುವಾಗ ಸ್ವತಃ ಪತಿ ಪತ್ನಿಯರಷ್ಟೇ ಅಲ್ಲ ಅವಲಂಬಿತ ಪರಸ್ಪರರ ಕಾಲುಗಳು ಕುಸಿಯುವ ಸಾಧ್ಯತೆ ಬದುಕಿನಲ್ಲಿ ಇದೆ! ಹೀಗಾಗಬಾರದೆಂಬ ಅರಿವು ಎಚ್ಚರ ಈ ಕವಿತೆಯ ಆಶಯವಾಗಿದೆ. ಇಂತ ಸಂವೇದಿಸುವ ನಿವೇದಿಸುವ ಕವಿ ಬೇಂದ್ರೆ ನಮ್ಮಕಾಲದ ದೃಷ್ಟಾಂತ.