ಬೆಂಗಳೂರು: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಾದ್ಯಂತ ಮುಂದಿನ ಮೂರು ದಿನಗಳಲ್ಲಿ ಮಳೆ ಬರಲಿದೆ. ಯಾಕೆಂದರೆ ಈ ಭಾಗಗಳಲ್ಲಿ ವ್ಯಾಪಕ ಮಳೆ ಆಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ರಾಜ್ಯದಲ್ಲಿ ಕರಾವಳಿಯಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆಯ ವಾತಾವರಣವೇ ಮುಂದುವರಿಯುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಮಳೆ ಬರಲಿದೆ. ಅದರಲ್ಲಿ ಆರಂಭಿಕ ಮೂರು ದಿನ ಅಂದರೆ ಮೇ 20ರವರೆಗೆ ತುಂತುರು ಮಳೆ ಬಂದು ನಂತರ ಎರಡು ದಿನ ಅಂದರೆ ಮೇ 21 ಮತ್ತು 22 ರಂದು ವ್ಯಾಪಕ ಮಳೆ ಬರುವ ನಿರೀಕ್ಷೆ ಇದೆ.
ಕರಾವಳಿ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಒಂದೆರಡು ಕಡೆ ಮಳೆ ಬರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಬೆಂಗಳೂರು ಸೇರಿದಂತೆ ಒಳನಾಡಿನ ಜಿಲ್ಲೆಗಳಲ್ಲಿ ಬಿರು ಬಿಸಿಲಿನ ಧಗೆ ಹೆಚ್ಚಾಗಿದೆ. ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಕಳೆದ ಎರಡು ದಿನ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಲಬುರಗಿಯಲ್ಲಿ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್ ಮತ್ತು ಕೊಪ್ಪಳ್ಳ, ರಾಯಚೂರಿನಲ್ಲಿ ಗರಿಷ್ಠ 39 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಈ ಭಾರಿಯ ಮುಂಗಾರು ಮಳೆ ನಿಗದಿಯಂತೆ ಜೂನ್ ಮೊದಲ ವಾರ ಆರಂಭವಾಗಬೇಕಾಗಿತ್ತು. ಆದರೆ ಈ ಸಲ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜೂನ್ 04ರಂದು ಮುಂಗಾರು ಮಳೆ ಸುರಿಸುವ ಮಾರುತಗಳು ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತದನಂತರ ಆ ಮಾರುತಗಳು ಭಾರತ-ಕರ್ನಾಟಕ ಪ್ರವೇಶಿಸಲು ತುಸು ಸಮಯ ಹಿಡಿಯುವುದರಿಂದ ಈ ಬಾರಿ ಮುಂಗಾರು ನಿರೀಕ್ಷೆಯಲ್ಲಿರುವ ರೈತರು ಇನ್ನೂ ಸಲ್ವ ದಿನ ಕಾಯಬೇಕಾದ ಅನಿವಾರ್ಯತೆ ಎದುರಾಗಲಿದೆ