ಪರೀಕ್ಷೆಯ ಫಲಿತಾಂಶ ಘೋಷಣೆಯ ಕ್ಷಣದಿಂದ ಬೇಸಿಗೆ ರಜಾ. ಹೆತ್ತವರು ತಮ್ಮ ತಾಯಿ ಮನೆಗೆ ಎಲ್ಲೂ ದೂರದ ಊರಿಗೆ ಮಕ್ಕಳನ್ನು ಕಳುಹಿಸಿ ಕೊಡುವುದು ವಾಡಿಕೆಯಾಗಿತ್ತು. ಅದು ಅಜ್ಜಿ ಮನೆ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿತ್ತು. ಬೇಸಿಗೆ ಬಂತೆಂದರೆ ಸಾಕು ಮಕ್ಕಳು ಅಜ್ಜಿಮನೆಯಲ್ಲಿ ತಮ್ಮ ರಜೆಯ ಸಂಪೂರ್ಣ ಖುಷಿಯನ್ನು ಅನುಭವಿಸುತ್ತಿದ್ದರು.
ಬಗೆ ಬಗೆಯ ಅಡುಗೆಯ ಜೊತೆ ಪ್ರೀತಿಯ ಕೈ ತುತ್ತು. ಅಲ್ಲಿನ ಗೆಳೆಯರೊಂದಿಗೆ ಆಟವಾಡುತ್ತ ಇಡೀ ಊರೇ ಸುತ್ತಿ ಬಂದರು ಆಯಾಸ ಆಗದು. ಗುಡ್ಡ ಹತ್ತಿ ಮರವೇರಿ ಇಳಿದು ಯಾರದೋ ತೋಟದಿಂದ ಒಂದಷ್ಟು ಹಣ್ಣುಗಳನ್ನು ಕಿತ್ತು ತಿಂದ ಮಧುರ ಕ್ಷಣಗಳು ಅದ್ಭುತ.ಕೆರೆಯಲ್ಲಿ ಮಿಂದು ಎದ್ದು, ಮೀನು ಹಿಡಿದ ನೆನಪು ಸದಾ ಹಚ್ಚಾ ಹಸಿರಾಗಿರುತ್ತದೆ.
ಕಾಲ ಬದಲಾಗಿದೆ ಅಜ್ಜಿ ಮನೆಯ ಪರಿಕಲ್ಪನೆ ದೂರವಾಗಿ ಬೇಸಿಗೆ ಶಿಬಿರ ಕೌಶಲ್ಯಭರಿತ ಕಾರ್ಯಕ್ರಮಕ್ಕೆ ಪರಿವರ್ತನೆಯಾಗಿದೆ. ನೃತ್ಯ ಕಲಿಕೆ, ಚಿತ್ರಕಲಾ ಕಲಿಕೆ, ಕರಾಟೆ, ಈಜು, ಕ್ರೀಡೆ ಜೊತೆಗೆ ಜೀವನದ ಮೌಲ್ಯ ಶಿಕ್ಷಣ ತರಬೇತಿ ಯೋಗಾಸನ, ಪ್ರಾಣಾಯಾಮ, ಏಕಾಗ್ರತೆಯನ್ನು ಬೆಲೆಸಿಕೊಳ್ಳುವ ವಿಧಾನ, ವ್ಯಕ್ತಿತ್ವ ವಿಕಸನ, ಆಟ, ಪ್ರವಾಸ, ಕ್ರೀಡೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಶಿಬಿರದ ಅಯೋಕರು ಅಯೋಜಿಸಿರತ್ತಾರೆ.
ಮಕ್ಕಳ ಶಾರೀರಿಕ ಬೆಳವಣಿಗೆ ಜೊತೆಗೆ ಭೌತಿಕ ಬೆಳವಣಿಗೆಗೂ ಈ ಶಿಬಿರಗಳು ಸಾಕಷ್ಟು ಸಹಕಾರಿ. ಹೆತ್ತವರು ಮಕ್ಕಳನ್ನು ಹೊಸ ವಿಷಯಗಳನ್ನು ಕಲಿಯಲಿ ಮತ್ತು ಮಕ್ಕಳು ತಮ್ಮ ಪ್ರತಿಭೆಯ ಜೊತೆ ಬೆಳೆಯಲಿ ಎಂಬ ಆಶಯದೊಂದಿಗೆ ಕಳುಹಿಸುತ್ತಾರೆ. ಆದರೆ ಮಕ್ಕಳು ತಾನಾಗಿ ತಮ್ಮ ಸಾಮಥ್ಯದೊಂದಿಗೆ ಕೆಲವೊಂದು ವಿಷಯಗಳನ್ನು ಕಲಿಯುವಂತಹ ಸನ್ನಿವೇಶಗಳಿಗೆ ಅವಕಾಶವಿಲ್ಲ.
ಸುಂದರವಾದ ಬಾಲ್ಯ, ಅಜ್ಜಿ ಮನೆಯ ಪರಿಕಲ್ಪನೆ ಊರಲ್ಲಿಯೇ ಹೊಸ ವಿಷಯಗಳ ಅನ್ವೇ಼ಷಣೆ, ಊರ ಜೊತೆಗಿನ ಸಂಬಂಧಗಳಿಗಿಂತಲೂ ದೂರವಾಗುತ್ತಿದ್ದಾರೆ ಅನಿಸುತ್ತಿದೆ. ಸಂಬಂಧಗಳ ಮೌಲ್ಯ ಯಾವ ಶಿಬಿರವು ಹೇಳಿಕೊಡದು. ಆದರೂ ಈ ಶಿಬಿರಗಳು ಇಂದು ಹೆತ್ತವರಿಗೆ ಅನಿವಾರ್ಯವಾಗಿದೆ.