ನಾವು ಬದುಕನ್ನು ಖುಷಿಯಾಗಿ ಕಳೆಯುವುದನ್ನು ಕಲಿತಿದ್ದೇವೆಯೇ?
ಜೀವನದಲ್ಲಿ ಅನಿರೀಕ್ಷತೆ ಯನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಈ ಕ್ಷಣವನ್ನು ಖುಷಿಯಿಂದ ಕಳೆಯಲು ಮನಸ್ಸು ಹಿಂದೇಟು ಹಾಕುತ್ತಿದೆಯಾ? ಅನಿರ್ದಿಷ್ಟತೆಯನ್ನೇ ಕನವರಿಸುತ್ತಾ ಈ ಕ್ಷಣವನ್ನೂ ವ್ಯರ್ಥ ಮಾಡುವುದರಲ್ಲಿ ಅರ್ಥ ಇಲ್ಲ. ಇವತ್ತು ಇದ್ದ ಜೀವ ನಾಳೆ ಇರುವುದಿಲ್ಲ ಹಾಗಾಗಿ ಇದ್ದ ಕ್ಷಣವನ್ನು ತುಂಬಾ ಸಂತೋಷದಿಂದ ಕಳೆಯುವುದು ಉತ್ತಮದರಲ್ಲಿ ಉತ್ತಮ.
ಜೀವನದ ಕೊನೆಯ ಗಳಿಗೆಯ ಬಗ್ಗೆ ನಿಖರತೆ ಇಲ್ಲದೇ ಇರುವುದರಿಂದ ಈ ಕ್ಷಣವನ್ನು ಎಷ್ಟು ಸಾಧ್ಯವೋ ಅಷ್ಟು ಆನಂದಿಂದ ಎಲ್ಲರೊಂದಿಗೂ ಪ್ರೀತಿಭಾವದಿಂದ ಕಳೆದರೆ ಅದುವೇ ಜೀವನದ ಸಾರ್ಥಕ ಭಾವ. ಅದೇ ಬದುಕಿನ ಶ್ರೀಮಂತಿಕೆ, ನಮ್ಮ ಜೀವನದ ದೊಡ್ಡ ಗುಣ ಎನಿಸಿಕೊಳ್ಳುವುದು.
ಎಷ್ಟೊಂದು ಘಟನೆಗಳು ನಮ್ಮ ಕಣ್ಣು ಮುಂದೆ ನಡೆಯಬಹುರು ಆದರೆ ಕೆಲವೊಂದು ಸಂಗತಿಗಳು ಮನದಾಳಕ್ಕೆ ನುಗ್ಗಿ ಚಿಂತಿಸುವಂತೆ ಮಾಡುತ್ತದೆ. ಇತ್ತೀಚೆಗೆ ಗಮನಿಸಿದಾಗ ಎಲ್ಲಿ ನೋಡಿದರೂ ಹೃದಯಾಘಾತ, ಯುವಕರು-ಮಧ್ಯ ವಯಸ್ಕರಂತಿಲ್ಲ. ನೆನೆಸಿಕೊಂಡಷ್ಟು ಭಾರ ಮನಸ್ಸು.
ಇಂದಿನ ಆಧುನಿಕ ಯುಗದಲ್ಲಿನ ಹೊರೆ, ಅವುಗಳಿಗೆಲ್ಲ ಮೂಲಕಾರಣ ಅವರ ಕೆಲಸದೊತ್ತಡ. ಬದುಕಲು ಕೆಲಸ ಬೇಕೇ ವಿನಃ ಕೆಲಸವೇ ಬದುಕಾಗಬಾರದಲ್ಲವೇ? ಏಕೆ ಶಕ್ತಿ ಮೀರಿ ದುಡಿಯುವುದು? ನಮ್ಮ ಬದುಕನ್ನೇ ಕಳೆದುಕೊಳ್ಳುವುದಕ್ಕೆ ಹಣ ಸಂಪಾದನೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಹಗಲಿರಲು ದುಡಿದು ಮನಶಾಂತಿಯೇ ಇಲ್ಲವೆಂದ ಮೇಲೆ ಯಾಕೆ ಬೇಕು ಮನುಜ ಆ ಕೆಲಸವೆಲ್ಲ??
ಬೇರೆಯವರ ಜೀವನ ನೋಡುತ್ತಾ ನಂಗು ಅದು ಬೇಕು ಎನ್ನುವ ಆಶೆಯ ಬಿಟ್ಟು ಇದ್ದಿದ್ದರಲ್ಲಿ ಖುಷಿಯಾಗಿರಲು ಪ್ರಯತ್ನಿಸಬೇಕು. ಹೀಗಾಗಬೇಕು ಎನ್ನುವ ಭರದಲ್ಲಿ ನಿನ್ನ ಸಂತೋಷವೇ ಮಾಯವಾಗೋದಲ್ಲವೇ? ಜೀವನದ ಒಂದು ಭಾಗ ಕೆಲಸ. ನೆಮ್ಮದಿ ಬದುಕಿಗಾಗಿ ಮಾತ್ರ ದುಡಿ, ಪರರ ಬದುಕ ನೋಡಿ ತಾನು ಹಾಗಾಗಬೇಕು ಎನ್ನುವ ತೊಳಲಾಟದಲ್ಲಿ ಜೀವನ ಕಳೆದುಕೊಳ್ಳಬೇಡ ನಿನ್ನ ನಂಬಿ ಬದುಕಿರುವ ಅದೆಷ್ಟೋ ಜೀವಗಳಿವೆ. ಆ ಜೀವಗಳನ್ನು ಖುಷಿಯಾಗಿಟ್ಟುಕೊಳ್ಳಲು ಪ್ರಯತ್ನಪಡು, ಅಷ್ಟು ಸಾಕು ಈ ಜೀವನಕ್ಕೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಬಳಿ ಏನಿದೆ ಎಂಬುದು ಮುಖ್ಯವಲ್ಲ, ಬದುಕನ್ನು ಹೇಗೆ ಕಳೆಯುತ್ತಿದ್ದೇವೆ ಎಂಬುದು ಮುಖ್ಯ.
ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ಕಾಣದ ಶಕ್ತಿಗೆ ಒಂದು ನಮನ ಸಲ್ಲಿಸಿ, ಬದುಕನ್ನು ಖುಷಿಯಿಂದ ಕಳಿ, ನಮ್ಮಬದುಕಿನಲ್ಲಿ ಒಳ್ಳೆಯದನ್ನೇ ಯೋಚನೆ ಮಾಡಲು, ಈ ಕ್ಷ ಣವನ್ನು ಖುಷಿಯಿಂದ ಕಳೆಯಲು, ಎಲ್ಲರನ್ನೂ ಪ್ರೀತಿಸಲು ಮತ್ತೊಂದು ಅಮೂಲ್ಯ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗ ಮಾಡಿಕೊಳ್ಳುತ್ತೇನೆ ಎನ್ನುವ ಪ್ರತಿಜ್ಞೆ ಮಾಡಿ ಖುಷಿಯಾಗಿರಲು ಪ್ರಯತ್ನಿಸಿ.