ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ನಿನ್ನೆ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ರನ್ಗಳಿಂದ ಗೆಲುವು ದಾಖಲಿಸಿತು. ಆದರೆ, ಈ ಪಂದ್ಯದ ಫಲಿತಾಂಶಕ್ಕಿಂತ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ನಡೆದ ಜಗಳದ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಪಂದ್ಯ ಮುಗಿದ ಬಳಿಕ ಆಟಗಾರರ ನಡುವಣ ಹಸ್ತಲಾಘವದ ವೇಳೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರು ಆಟಗಾರರು ಪರಸ್ಪರ ಬೈದಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಉಭಯ ತಂಡಗಳ ಆಟಗಾರರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಸಿಗೊಳಿಸಿದರು.
ಏಪ್ರಿಲ್ 10ರಂದು ಬೆಂಗಳೂರಿನಲ್ಲಿ ನಡೆದಿದ್ದ ಆರ್ಸಿಬಿ ಹಾಗೂ ಎಲ್ಎಸ್ಜಿ ನಡುವಣ ಪಂದ್ಯದಲ್ಲಿ ಗೆಲುವು ಪಡೆದ ಲಕ್ನೋ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ತಮ್ಮ ಕೈ ಸನ್ನೆಯ ಮೂಲಕ ಆರ್ಸಿಬಿ ಅಭಿಮಾನಿಗಳಿಗೆ ಸೈಲೆನ್ಸ್ ಎಂದು ಹೇಳಿದ್ದರು. ಅಂತೆಯೇ ನಿನ್ನೆ ಆರ್ಸಿಬಿ ಹಾಗೂ ಎಲ್ಎಸ್ಜಿ ನಡುವಣ ಪಂದ್ಯದಲ್ಲಿ ಆರ್ಸಿಬಿ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ಕೂಡ ಕೈ ಸನ್ನೆ ಮಾಡಿ ಎಲ್ಎಸ್ಜಿ ಅಭಿಮಾನಿಗಳಿಗೆ ಸೈಲೆನ್ಸ್ ಎಂದು ಹೇಳುವ ಮೂಲಕ ಗಂಭೀರ್ಗೆ ತಿರುಗೇಟು ನೀಡಿದ್ದಾರೆ.
ಇನ್ನೂ ಪಂದ್ಯದ ನಡುವೆ ನವೀನ್ ಉಲ್ ಹಕ್ ವಿರಾಟ್ ಕೊಹ್ಲಿ ಅವರನ್ನು ದುರುಗುಟ್ಟಿ ನೋಡಿ, ದೊಡ್ಡ ಜಗಳಕ್ಕೆ ಸಣ್ಣ ಕಿಡಿ ಹಚ್ಚಿದ್ದರು. ಪಂದ್ಯ ಮುಗಿದ ಬಳಿಕ ಎರಡೂ ತಂಡಗಳ ಆಟಗಾರರು ಪರಸ್ಪರ ಕೈಕುಲುಕುವ ವೇಳೆ, ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ಪರಸ್ಪರ ಮಾತಿಗೆ ಮಾತು ಬೆಳೆಯಿತು. ಈ ವೇಳೆ ನವೀನ್ ಉಲ್ ಹಕ್ ಹಸ್ತಲಾಘವ ಮಾಡಿದ್ದ ತಮ್ಮ ಕೈಯಿಂದ ವಿರಾಟ್ ಕೊಹ್ಲಿಯ ಕೈಯನ್ನು ಆಕ್ರಮಣಕಾರಿಯಾಗಿ ತಳ್ಳಿದರು. ಇದಾದ ಬಳಿಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ದೊಡ್ಡ ಜಗಳ ನಡೆಯಿತು. ಈ ವೇಳೆ ಕೆ.ಎಲ್ ರಾಹುಲ್ ಹಾಗೂ ಅಮಿತ್ ಮಿಶ್ರಾ ಪರಿಸ್ಥಿತಿಯನ್ನು ಶಾಂತಗೊಳಿಸಿದರು.
ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಈ ಹಿಂದೆಯೂ ಹಲವು ಬಾರಿ ಜಗಳ ನಡೆದಿವೆ. ಆ ನಂತರ ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು ಎನ್ನಲಾಗಿತ್ತು. ಆದರೆ ನಿನ್ನೆ ನಡೆದ ಘಟನೆಯಿಂದಾಗಿ ಅವರಿಬ್ಬರ ಹೊಂದಾಣಿಕ ಯಾವ ಮಟ್ಟದಲ್ಲಿ ಎಂಬುದು ಜಗತ್ಜಾಹೀರಾಗಿದೆ.
ಇನ್ನೂ ಐಪಿಎಲ್ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಮತ್ತು ನವೀನ್-ಉಲ್-ಹಕ್ ಅವರಿಗೆ ದಂಡ ವಿಧಿಸಲಾಗಿದ್ದು, ಕೊಹ್ಲಿ ಹಾಗೂ ಗಂಭೀರ್ಗೆ ಇಡೀ ಪಂದ್ಯದ ಶುಲ್ಕವನ್ನು ಕಡಿತ ಮಾಡಲಾಗಿದೆ. ನವೀನ್ ಅವರಿಗೆ ಪಂದ್ಯದ ಶೇ. 50 ರಷ್ಟು ಶುಲ್ಕವನ್ನು ಕಡಿತಗೊಳಿಸಲಾಗಿದೆ