ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರನ್ನು ಉದ್ದೇಶಿಸಿ ಮಾತನಾಡುವ ಮನ್ ಕಿ ಬಾತ್ ಕಾರ್ಯಕ್ರಮವು ನಾಳೆಗೆ ೧೦೦ನೇ ಸಂಚಿಕೆಯನ್ನು ಪೂರೈಸಲಿದ್ದು, ಇದನ್ನು ಸಂಭ್ರಮಿಸಲು ಸರ್ಕಾರ ಸಕಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ನೂರನೇ ಸಂಚಿಕೆಯನ್ನು ಸ್ಮರಣೀಯಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮನ್ ಕಿ ಬಾತ್ ನ ನೂರನೇ ಸಂಚಿಕೆಯನ್ನು ಹೇಗೆ ಅರ್ಥ ಪೂರ್ಣವಾಗಿ ಆಚರಿಸಬಹುದು ಎಂದು ಸರ್ಕಾರವು ಜನರಿಂದ ಸಲಹೆಗಳನ್ನು ಆಹ್ವಾನಿಸಿತ್ತು. ಜನರು ಈಗಾಗಲೇ ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ.
ನೂರನೇ ಸಂಚಿಕೆಯ ಸವಿನೆನಪಿಗಾಗಿ ೧೦೦ ಮುಖ ಬೆಲೆಯ ನಾಣ್ಯವನ್ನು ಹಾಗೂ ಅಂಚೆ ಚೀಟಿಯನ್ನು ಸರ್ಕಾರ ಬಿಡುಗಡೆ ಮಾಡಲು ಯೋಜನೆಯನ್ನು ರೂಪಿಸಿದ್ದು, ವಿವಿಧ ವಲಯದ ಗಣ್ಯರ ಜೊತೆ ನಡೆದ ಮನ್ ಕಿ ಬಾತ್ ಕುರಿತ ಸಂವಾದದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ಮನ್ ಕಿ ಬಾತ್ ನೂರರ ವಿಶೇಷತೆಯನ್ನು ಸಾರುವ ಈ ನಾಣ್ಯವು ಸಾಮಾನ್ಯ ನಾಣ್ಯಗಳಂತೆ ಚಲಾವಣೆಯಲ್ಲಿ ಇರುವುದಿಲ್ಲ. ಆದರೆ ಇದನ್ನು ಖರೀದಿಸಲು ಜನರಿಗೆ ಅವಕಾಶವಿದೆ.
ನೂರನೇ ಸಂಚಿಕೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ರಸಪ್ರಶ್ನೆ ಕೂಡ ಒಂದಾಗಿದ್ದು, ಹೆಚ್ಚಾನ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು.
ಈ ವಿಶೇಷ ಸಂಚಿಕೆಯು ಹೆಚ್ಚು ಜನರಿಗೆ ತಲುಪಬೇಕು ಎಂಬ ಆಶಯದಲ್ಲಿ ಬಿಜೆಪಿ ವಿಶ್ವದ ಹಲವು ದೇಶಗಳಲ್ಲಿ ಪ್ರಸಾರ ಮಾಡಲು ಸಿದ್ದತೆಯನ್ನು ಮಾಡಿಕೊಂಡಿದೆ. ನರೇಂದ್ರ ಮೋದಿ ವಿಶ್ವ ನಾಯಕರಾಗಿ ಗುರುತಿಸಿಕೊಂಡಿದ್ದು, ಅವರ ಮಾತುಗಳನ್ನು ಇಡೀ ವಿಶ್ವಕ್ಕೆ ಕೇಳಿಸಲಿದ್ದೇವೆ ಎಂದು ಬಿಜೆಪಿ ಹೇಳಿಕೊಂಡಿದೆ.
ಒಂದು ಲಕ್ಷಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಮನ್ ಕಿ ಬಾತ್ ಪ್ರಸಾರ ಮಾಡಲು ಯೋಜನೆಯನ್ನು ರೂಪಿಸಿದ್ದು, ಬಹುತೇಕ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ಕೇಂದ್ರಗಳನ್ನು ತೆರೆದು ಬಾನುಲಿ ಕಾರ್ಯಕ್ರಮಕ್ಕೆ ಏರ್ಪಾಡು ಮಾಡಲಾಗಿದೆ.
ಪ್ರತಿಲೋಕ ಸಭಾ ಕ್ಷೇತ್ರಗಳಲ್ಲಿ ನೂರನೇ ಸಂಚಿಕೆಯ ಮನ್ ಕಿ ಬಾತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿ ಕ್ಷೇತ್ರದಲ್ಲೂ ನೂರು ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಪ್ರತಿ ಕಾರ್ಯಕ್ರಮದಲ್ಲೂ ನೂರು ಜನ ಭಾಗವಹಿಸುವಂತೆ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಾಧನೆ ಮಾಡಿ ಎಲೆಮರೆಯ ಕಾಯಿಯಂತೆ ಇರುವವರನ್ನು ಸ್ಮರಿಸಿ ಅವರನ್ನು ಗೌರವಿಸಲಾಗುವುದು. ಆಯಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸಾಧಕರನ್ನು ಕಾರ್ಯಕ್ರಮದ ದಿನ ಸನ್ಮಾನಿಸಲಾಗುವುದು. ಜೊತೆಗೆ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲು ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ. ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಈ ಕಾರ್ಯಕ್ರಮವನ್ನು ತಲುಪಿಸುವ ಯತ್ನಗಳು ನಡೆಯುತ್ತಿದೆ