ಮಡಿಕೇರಿ: ತಮ್ಮದೇ ವೀಡಿಯೋ ಒಂದನ್ನು ಫೇಸ್ ಬುಕ್ ನಲ್ಲಿ ಹಂಚಿಕೊ0ಡಿರುವ ಆರೋಪದ ಮೇಲೆ ಮೈಸೂರಿನ ರಂಗಾಯಣ ನಿರ್ದೇಶಕ ಮತ್ತು ರಂಗ ಕರ್ಮಿ ಅಡ್ಡಂಡ ಕಾರ್ಯಪ್ಪ ವಿರುದ್ದ ಪೊನ್ನಂಪೇಟೆ ಪೋಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಸೋಮವಾರ ಹಂಚಿಕೊAಡಿರುವ ವೀಡಿಯೋದಲ್ಲಿ ಕಾರ್ಯಪ್ಪ ಅವರು ಕೊಡಗನ್ನು ಇಸ್ಲಾಮಿಕ್ ಜಿಲ್ಲೆಯನ್ನಾಗಿ ಮಾಡಲು ಸಂಚು ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದರು. ಈ ಕುರಿತು ಕಾಕೋಟುಪರಂಬು ವಲಯ ಕಾಂಗ್ರೆಸ್ ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ ಪೋಲೀಸರಿಗೆ ದೂರು ನೀಡಿದ್ದು , ಅದು ಸಮಾಜದಲ್ಲಿನ ಶಾಂತಿ ಕದಡುವುದೇ ಅಲ್ಲದೆ ಸೌಹಾರ್ದತೆಗೆ ಹಾನಿಯುಂಟು ಮಾಡುತ್ತದೆ ಎಂದು ಆರೋಪಿಸಿದ್ದರು. ವಿರಾಜಪೇಟೆ ಕ್ಷೇತ್ರವನ್ನು ಇಸ್ಲಾಮಿಕ್ ಕ್ಷೇತ್ರವಾಗಿ ಮಾಡುವ ಉದ್ದೇಶದೊಂದಿಗೆ ಚುನಾವಣೆಯನ್ನು ಕೆಲವರು ನಡೆಸುತ್ತಿದ್ದಾರೆ ಎಂದು ಹೇಳುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ. ಧರ್ಮದ ಆಧಾರದಲ್ಲಿ ಮತ ಚಲಾವಣೆ ಮಾಡುವಂತೆ ಅವರು ಕರೆ ನೀಡಿದ್ದಾರೆ ಇದು ಕಾನೂನಿಗೆ ವಿರುದ್ದವಾಗಿದ್ದು ಕೋಮು ಸಂಘರ್ಷಕ್ಕೂ ಕಾರಣ ಆಗಬಹುದೆಂದು ದೂರಿನಲ್ಲಿ ಆರೋಪಿಸಿದ್ದರು. ಇದು ರಾಜಕೀಯ ಲಾಭದ ಉದ್ದೇಶದಿಂದ ಕೂಡಿದ್ದು ಹೀಗಾಗಿ ಅವರ ವಿರುದ್ಧ ಕ್ರಮ ಕೈಕೊಳ್ಳಬೇಕೆಂದು ಅನಿಲ್ ಅಯ್ಯಪ್ಪ ಒತ್ತಾಯಿಸಿದ್ದರು.
ತಮ್ಮ 6 ನಿಮಿಷ 13 ಸೆಕೆಂಡುಗಳ ವೀಡಿಯೋದಲ್ಲಿ ಕಾರ್ಯಪ್ಪ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಭಾರತವನ್ನು 2024ರ ವೇಳೆಗೆ ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುತ್ತೇವೆಂದು ಕೆಲವು ಮುಸ್ಲಿಂ ಸಂಘಟನೆಗಳು ಹೇಳಿವೆ. ಅದಕ್ಕೆ ಪೂರಕವಾಗಿ 200 ಜಿಲ್ಲೆಗಳನ್ನು ಪ್ರಯೋಗ ಶಾಲೆಯನ್ನಾಗಿ ಮಾಡುತ್ತಿದ್ದಾರೆ. ಅದರಲ್ಲಿ ಕೊಡಗು ಜಿಲ್ಲೆ ಕೂಡಾ ಒಂದು. ಕೊಡಗನ್ನು ಇಸ್ಲಾಮಿಕ್ ಜಿಲ್ಲೆಯನ್ನಾಗಿ ಮಾಡುವುದು ಅವರ ಉದ್ದೇಶ. ಇದಕ್ಕಾಗಿ ಬೇರೆ ಬೇರೆ ಸಂಘಟನೆಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಾರಿಯ ಚುನಾವಣೆಯನ್ನು ಅದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅಡ್ಡಂಡ ಕಾರ್ಯಪ್ಪ ಆರೋಪಿಸಿದ್ದಾರೆ.
ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿರುವ ಕೆಲವರು ಭಯಾನಕ ಘೋಷಣೆಗಳನ್ನು ಕೂಗುತ್ತಿದ್ದಾರೆ. ಕೇರಳದ ಕೆಲವು ಮಲೆಯಾಳಿ ಮಾಧ್ಯಮಗಳು ಕೂಡಾ ಇಲ್ಲಿ ಕಾರ್ಯಾಚರಿಸುತ್ತವೆ ಎಂದು ಆರೋಪಿಸಿರುವ ಅವರು, ಜನರು ಯೋಚಿಸಿ ಮತ ನೀಡುವಂತೆ ಕರೆ ನೀಡಿದ್ದರು. ಈ ವೀಡಿಯೋ ಐದು ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು ನೂರಾರು ಜನರು ಹಂಚಿಕೆ ಮಾಡಿದ್ದರು. ಈ ವೀಡಿಯೋ ಕ್ಲಿಪ್ ಇಂದು ವಾಟ್ಸ್ ಅಪ್ ಗ್ರೂಪುಗಳಲ್ಲಿ ವೈರಲ್ ಆಗಿತ್ತು.
ಕಾರ್ಯಪ್ಪ ಅವರು ಕಳೆದ ವರ್ಷ ತಾವೇ ಬರೆದು ನಿರ್ದೇಶಿಸಿದ್ದ ಟಿಪ್ಪು ನಿಜ ಕನಸುಗಳು ನಾಟಕವು ರಾಜ್ಯಾದ್ಯಂತ ಉತ್ತಮ ಪ್ರದರ್ಶನಗಳನ್ನು ಕಂಡಿತ್ತು. ಈ ನಾಟಕ ಪ್ರದರ್ಶನ ತಡೆ ಕೋರಿ ರಾಜ್ಯ ಹೈ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತಾದರೂ ಕೋರ್ಟು ನಾಟಕ ಪ್ರದರ್ಶನಕ್ಕೆ ತಡೆ ನೀಡಿರಲಿಲ್ಲ ಮತ್ತು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತ್ತು.
ಅಯ್ಯಪ್ಪ ಅವರು ನೀಡಿರುವ ದೂರಿನನ್ವಯ ಐಪಿಸಿ ಸೆಕ್ಷನ್ 153 ಏ , 171 ಜಿ ಮತ್ತು ಜನ ಪ್ರತಿನಿಧಿ ಕಾಯ್ದೆ 125 ಅನ್ವಯ ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ಪೊನ್ನಂಪೇಟೆ ಪೋಲೀಸರು ತನಿಖೆ ನಡೆಸುತಿದ್ದಾರೆ.