ಕೀನ್ಯಾ ದೇಶವು ಧಾರ್ಮಿಕವಾಗಿ ಪ್ರಸಿದ್ದಿಯನ್ನು ಹೊಂದಿದ ದೇಶವಾಗಿದೆ. ಆದರೆ ಅತಿಯಾದ ಧಾರ್ಮಿಕ ಆಚರಣೆ, ಮೂಢನಂಬಿಕೆಯಾಗಿ ಪರಿಣಮಿಸಿರುವುದಕ್ಕೆ ಸಾಕ್ಷಿಯಾಗಿ ಇದೀಗ ಘೋರ ಘಟನೆಯೊಂದು ಬೆಳಕಿಗೆ ಬಂದಿದೆ. ಕ್ರೈಸ್ತ ಧರ್ಮ ಪಾಲನೆ ಮಾಡುತ್ತಿದ್ದ 47 ಮಂದಿ ಏಸು ಪ್ರಭುವನ್ನು ಸ್ವರ್ಗದಲ್ಲಿ ಸಂಧಿಸುವ ಆಶಯದೊಂದಿಗೆ ಉಪವಾಸ ಮಾಡಿ ಜೀವ ಬಿಟ್ಟಿದ್ದಾರೆ.
ಕೀನ್ಯಾ ದೇಶದ ಮಲಿಂದ ಎಂಬಲ್ಲಿರುವ ೮೦೦ ಎಕರೆಯ ದಟ್ಟ ಶಾಖಾಹೊಲ ಆರಣ್ಯದಲ್ಲಿ 47ಕ್ಕೂ ಅಧಿಕ ಮಂದಿ ಪಾದ್ರಿಯ ಮಾತನ್ನು ನಂಬಿ, ಸ್ವರ್ಗಕ್ಕೆ ಹೋಗುವ ಆಸೆಯಲ್ಲಿ ಜೀವಂತ ಸಮಾಧಿಯಾಗಿದ್ದಾರೆ. ಈ ಭಾಗದಲ್ಲಿ ಗುಡ್ ನ್ಯೂಸ್ ಅಂತಾರಾಷ್ಟ್ರೀಯ ಚರ್ಚ್ ಇದ್ದು, ಅದರ ಪಾದ್ರಿ ಪಾಲ್ ಮೆಕೆಂಜಿ ನೀವು ಸ್ವರ್ಗದಲ್ಲಿ ಏಸು ಪ್ರಭುವನ್ನು ಭೇಟಿ ಆಗಬೇಕೆಂದರೆ ಜೀವ ಹೋಗುವವರೆಗೂ ಉಪವಾಸ ಮಾಡಿ ಎಂದು ಪ್ರೇರೇಪಿಸಿದ್ದರಿಂದ ಈ ಜೀವಗಳು ಬಲಿಯಾಗಿವೆ.
ಕಳೆದ ವಾರ ಈ ಪ್ರದೇಶದಲ್ಲಿ ಒಂದು ಮೃತ ದೇಹ ಸಿಕ್ಕಿತ್ತು. ಮೃತ ದೇಹ ಸಿಕ್ಕ ಕೂಡಲೇ ಅರಣ್ಯ ಪ್ರದೇಶವನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಒಟ್ಟು 47 ಮೃತ ದೇಹಗಳು ಸಿಕ್ಕಿವೆ. ಇನ್ನೂ ಜೀವಂತವಾಗಿ ಸಮಾಧಿಯ ಒಳಗೆ ಇದ್ದ ೧೫ ಜನರನ್ನ ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಮಾರ್ಗ ಮಧ್ಯೆ ೪ ಜನ ಮೃತಪಟ್ಟಿದ್ದಾರೆ. ಇನ್ನೂ ಒಂದು ಸಮಾಧಿಯಲ್ಲಿ ಒಂದೇ ಕುಟುಂಬದ ಮೂರು ಮಕ್ಕಳು ಸೇರಿದಂತೆ ಐದು ಸದಸ್ಯರ ದೇಹಗಳಿವೆ ಎಂದು ಹೇಳಲಾಗುತ್ತಿದೆ.
ಪೊಲೀಸರು ಇಲ್ಲಿಯವರೆಗೆ 65 ಸಮಾಧಿಗಳನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಯಾರಾದರೂ ಬದುಕಿರಬಹುದೆಂಬ ನಿರೀಕ್ಷೆಯಲ್ಲಿ ಪೊಲೀಸರು ಸಮಾಧಿಯನ್ನು ಅಗೆಯುತ್ತಿದ್ದಾರೆ.
ವಿಷಯ ಬಹಿರಂಗವಾದ ಮೇಲೆ ಚರ್ಚ್ ಪಾದ್ರಿಯನ್ನು ಪೋಲೀಸರು ಬಂಧಿಸಿದ್ದಾರೆ. ಪೊಲೀಸರ ವಶದಲ್ಲಿ ಇರುವ ಪಾದ್ರಿ ಮೆಕೆಂಜಿ ಅನ್ನಾಹಾರ ಸೇವನೆ ಮಾಡಲು ನಿರಾಕರಿಸುತ್ತಿದ್ದಾನೆ. ತಾನು ಕೂಡಾ ಎಲ್ಲರಂತೆಯೇ ಉಪವಾಸ ಇದ್ದು ಪ್ರಾಣ ತ್ಯಾಗ ಮಾಡಿ ಸ್ವರ್ಗದಲ್ಲಿ ಏಸು ಪ್ರಭುವನ್ನು ಕಾಣುತ್ತೇನೆ ಎಂದು ಆತ ಹೇಳುತ್ತಿದ್ದಾನೆ. ಹೀಗಾಗಿ, ಆತನ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.
ಕಿನ್ಯಾದಲ್ಲಿ ಈ ರೀತಿ ಸಾಯುವರೆಗೂ ಉಪವಾಸ ಮಾಡುತ್ತಿರುವುದು ಇದೇ ಮೊದಲಲ್ಲ ಹಿಂದೆಯೂ ಕೂಡ ಈ ರೀತಿಯ ಘಟನೆಗಳು ವರದಿಯಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ಧಾರ್ಮಿಕ ಕೇಂದ್ರಗಳ ಮೇಲೆ ನಿಯಂತ್ರಣ ಇಲ್ಲದೇ ಇರುವುದು.
ಯಾವುದೇ ಧರ್ಮವಾಗಲಿ ಧಾರ್ಮಿಕ ಕೇಂದ್ರವಾಗಲಿ ಈ ರೀತಿ ಮನುಷ್ಯರನ್ನು ಬಲಿ ಪಡೆಯುವುದು ಅತ್ಯಂತ ಘೋರ ಕೃತ್ಯ. ಸರ್ಕಾರಗಳು ಇಂತಹ ಕೃತ್ಯ ಎಸಗುವವರ ಮೇಲೆ ಪ್ರೇರೆಪಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು