ರೈತನ ಮಿತ್ರ ಎಂದು ಕರೆಸಿಕೊಳ್ಳುವ ಎರೆಹುಳಗಳು ಭೂಮಿಯಿಂದ ನಾಪತ್ತೆಯಾಗುತ್ತಿರುವುದು ಆತಂಕದ ವಿಚಾರವಾಗಿದೆ. ಅತೀಯಾದ ಕಳೆನಾಶಕ ರಸಗೊಬ್ಬರದ ಬಳಕೆಯಿಂದ ಎರೆಹುಳುಗಳ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದೆ. ಶತಮಾನಗಳಿಂದಲೂ ರೈತರು ಸಾವಯವ ಕೃಷಿಯನ್ನೇ ಅವಲಂಬಿತರಾಗಿದ್ದರು. ಆದರೆ 1965ರಲ್ಲಿ ಆದ ಹಸಿರು ಕ್ರಾಂತಿಯಿಂದಾಗಿ ತಮ್ಮ ಮೂಲ ಪದ್ದತಿಯನ್ನು ಮೆರತುಬಿಟ್ಟಿದ್ದಾರೆ.
ಹಿಂದೆ ರೈತರು ಕೊಟ್ಟಿಗೆ ಗೊಬ್ಬರವನ್ನು ಹಾಕಿ ಗದ್ದೆ ತೋಟಗಳಿಗೆ ಸೊಪ್ಪು ಹಾಕಿ ಕರಗಿಸಿ ಕಾಂಪೋಸ್ಟ್ ಮಾಡಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಕೃಷಿಯನ್ನು ಮಾಡುತ್ತಿದ್ದರು. ಇನ್ನೂ ಎರೆಹುಳುಗಳು ಭೂಮಿಯನ್ನು ಕೊರೆದು ಮಣ್ಣನ್ನು ಮೇಲೆತ್ತುವುದರಿಂದ ರಂಧ್ರದ ಮೂಲಕ ಗಾಳಿ ನೀರು ಭೂಮಿಯೊಳಗೆ ಸರಾಗವಾಗಿ ಹೋಗುತ್ತದೆ. ಇದರಿಂದಾಗಿ ಗುಣ್ಣಮಟ್ಟದ ಆರೋಗ್ಯಕರವಾದ ಬೆಳೆಗಳನ್ನು ಬೆಳೆಯುತ್ತಿದ್ದರು. ಹಾಗೆಯೇ ಎರೆಹುಳುವು ಮಣ್ಣಿನ ಫಲವತ್ತತೆಯನ್ನು ಕಾಪಾಡುವುದರಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಕೃಷಿಯಲ್ಲಿ ಎರೆಹುಳುವಿನ ಗೊಬ್ಬರದಿಂದ ಉತ್ತಮ ಬೆಳೆಯನ್ನು ಕೂಡ ಬೆಳೆಯಲು ಸಾಧ್ಯವಾಗುತ್ತದೆ.
ಆದರೆ ಹಸಿರು ಕ್ರಾಂತಿಯಿಂದಾಗಿ ಸರ್ಕಾರ ರಸಗೊಬ್ಬರ, ಕ್ರಿಮಿನಾಶಕ ಬಳಸಲು ಉತ್ತೇಜನ ನೀಡಿದ್ದರಿಂದಾಗಿ ರೈತರು ಉತ್ತಮ ಬೆಳೆ ಬೆಳೆದು ಲಾಭಗಳಿಸುವ ಆಸೆಯಿಂದ ಅವುಗಳನ್ನು ಬಳಸಲು ಪ್ರಾರಂಭಿಸಿದರು. ಅತಿಯಾದ ಬಳಕೆಯಿಂದ ಫಲವತ್ತತೆಯ ಭೂಮಿ ಬರಡಾಗುತ್ತಿದೆ. ಕ್ರಿಮಿನಾಶಕ ರಸಗೊಬ್ಬರ ಬಳಸದೇ ಯಾವುದೇ ಕೃಷಿ ಮಾಡಲು ಸಾಧ್ಯವಿಲ್ಲ ಎನ್ನುವ ಮನಸ್ಥಿತಿಗೆ ಇಂದು ರೈತರು ತಲುಪಿದ್ದಾರೆ.
ಮಿತಿಮೀರಿದ ರಸಗೊಬ್ಬರ ಬಳಕೆಯಿಂದ ಎರಹುಳಗಳ ಪ್ರಮಾಣ ಇಳಿಕೆಯಾಗಿದೆ ಹಾಗೂ ಬೆಳೆಯುವ ಆಹಾರಗಳು ವಿಷಪೂರಿತವಾಗುತ್ತಿದೆ. ಭೂಮಿಯು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ ಆದ್ದರಿಂದ ಇನ್ನು ಮೇಲಾದರೂ ಸಾವಯವ ಕೃಷಿಯತ್ತ ರೈತರು ಗಮನ ಹರಿಸಬೇಕಾಗಿದೆ.