ಬೆಂಗಳೂರು: ವಿಕೇಂಡ್ ವಿತ್ ರಮೇಶ್ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಷೋ. ನಟ ರಮೇಶ್ ಅರವಿಂದ್ ನಿರೂಪಕರಾಗಿರುವ ಈ ಕಾರ್ಯಕ್ರಮಕ್ಕೆ ದೊಡ್ಡ ಅಭಿಮಾನಿ ಬಳಗವೇ ಇದೆ. ಈ ಕಾರ್ಯಕ್ರಮ ನಾಲ್ಕು ಸೀಸನ್ಗಳನ್ನು ಪೂರೈಸಿ ಐದನೇ ಸೀನನ್ ಗೆ ಕಾಲಿಟ್ಟಿದ್ದು ೪ ಸಂಚಿಕೆಗಳನ್ನು ಪೂರೈಸಿದೆ.
ಮೊದಲ ಸಂಚಿಕೆಯ ಅತಿಥಿಯಾಗಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಆಗಮಿಸಿದ್ದರು. ರಮ್ಯಾ ಸಂಚಿಕೆ ಸಾಕಷ್ಟು ನೀರಿಕ್ಷೆಗಳನ್ನು ಹುಟ್ಟಿಸಿತ್ತು. ಆದರೆ ರಮ್ಯಾ ಕಾರ್ಯಕ್ರಮದಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಇಂಗ್ಲೀಷ್ ಬಳಕೆ ಮಾಡಿದ್ದರು. ಮನೆ ಮಂದಿ ಎಲ್ಲಾ ಕುಳಿತು ನೋಡುವವರಿಗೆ ಕಿರಿಕಿರಿಯಾಗಿದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು.
ಎರಡನೇ ಎಪಿಸೋಡ್ನಲ್ಲಿ ದಕ್ಷಿಣ ಭಾರತದ ಬೇಡಿಕೆಯ ನಟ ನಿರ್ದೇಶಕ ಕೊರಿಯೋಗ್ರಾಫರ್ ಪ್ರಭುದೇವ ಭಾಗವಹಿಸಿದ್ದಾರೆ. ಪ್ರಭುದೇವ ಬಂದರೆ ತಮಿಳು ಇಲ್ಲವೇ ತೆಲಗುದಲ್ಲಿ ಮಾತನಾಡಬಹುದು ಈ ಬಾರಿಯು ನಿರಾಸೆಯಾಗಬಹುದು ಎಂದು ಕೊಂಡಿದ್ದ ವೀಕ್ಷಕರಿಗೆ ಅಪ್ಪಟ ಕನ್ನಡದಲ್ಲೆ ಮಾತನಾಡಿದ ಪ್ರಭುದೇವ ಅವರನ್ನು ನೋಡಿ ಪ್ರಭುದೇವ ಇಷ್ಟೊಂದು ಸ್ಪಷ್ಟ ಕನ್ನಡ ಮಾತನಾಡುತ್ತಾರ ಎಂದು ಆಶ್ಚರ್ಯ ಪಟ್ಟಿದ್ದರು.
ವಿಕೆಂಡ್ ವಿತ್ ಕಾರ್ಯಕ್ರಮದ ಮೂರನೆ ಸಂಚಿಕೆಯ ಅತಿಥಿಯಾಗಿ ಡಾ.ಸಿ.ಎನ್ ಮಂಜುನಾಥ್ ಭಾಗವಹಿಸಿದ್ರು. ಇವರು ನಿಜವಾದ ಸಾಧಕರು. ಎಷ್ಟೋ ಲಕ್ಷಾಂತರ ಬಡ ಜೀವಗಳಿಗೆ ಜೀವದಾನ ಮಾಡಿದ್ದಾರೆ. ಈ ಭಾರಿ ಉತ್ತಮ ಆಯ್ಕೆ ಮಾಡಿದ್ದಿರಿ ಎಂದು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ. ಹಾಗೇ ಅದೇ ದಿನ ಅತಿಥಿಯಾಗಿ ಹಿರಿಯ ಕಲಾವಿದ ದತ್ತಣ್ಣ ಆಗಮಿಸಿದ್ದರು. ಸೇನೆಯಲ್ಲಿದ್ದು ನಂತರ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ದತ್ತಣ್ಣ ಅತಿಥಿಯಾಗಿ ಬಂದಿರುವುದು ವೀಕ್ಷಕರಿಗೆ ಖುಷಿ ಕೊಟ್ಟಿತ್ತು. ಮೂರನೇ ವಾರದಲ್ಲಿ ಇಬ್ಬರು ಅತಿಥಿಗಳಿಂದ ಕಾರ್ಯಕ್ರಮ ಮುಕ್ತಾಯಗೊಂಡಿತ್ತು.
ಇದೀಗ ನಾಲ್ಕನೇ ಅತಿಥಿಯಾಗಿ ಕನ್ನಡ ಚಿತ್ರರಂಗದ ಬೇಡಿಕೆಯ ನಟ ಡಾಲಿ ಧನಂಜಯ್ ಭಾಗವಹಿಸಿದ್ದರು. ನಟನೆ ಮತ್ತು ತೆರೆಮೇಲಿನ ಗತ್ತಿನ ಮೂಲಕವೇ ಕರುನಾಡಿನಲ್ಲಿ ಪ್ರೇಕ್ಷಕರನ್ನು ಸೆಳೆದ ಡಾಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಡಾಲಿ ಕಾರ್ಯಕ್ರಮದಲ್ಲಿ ತಮ್ಮ ನೋವಿನ ಜರ್ನಿ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಡಾಲಿ ಈ ಕಾರ್ಯಕ್ರಮಕ್ಕೆ ಬರಲೇ ಬೇಕಾಗಿದ್ದ ವ್ಯಕ್ತಿ, ನಿಜವಾದ ಸಾಧಕ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಈ ಹಿಂದಿನ ಸಂಚಿಕೆಗಳಲ್ಲಿ ಸಾಕಷ್ಟು ಸಾಧಕರು ಕೆಂಪು ಖುರ್ಚಿಯಲ್ಲಿ ಕುಳಿತು ತಮ್ಮ ಜೀವನದ ಪಯಣವನ್ನು ಹಂಚಿಕೊಂಡಿದ್ದಾ.ರೆ. ಹಾಗೆಯೇ ಇನ್ನೂ ಮುಂದೆ ಬರಲಿರುವ ಸಂಚಿಕೆಗಳಲ್ಲಿ ನಿಜವಾದ ಸಾಧಕರನ್ನು ಕರೆಸಬೇಕು ಎಂಬ ಮಾತು ಪ್ರೇಕ್ಷರಿಂದ ಕೇಳಿ ಬರುತ್ತಿದೆ.