ಬೆಳಗಾವಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಜಿಲ್ಲಾ ರಾಜಕಾರಣದಲ್ಲಿ ದಿಗ್ಗಜ ನಾಯಕರು. ಈ ಇಬ್ಬರು ಈ ಹಿಂದೆ ಪರಮಾಪ್ತಾರಾಗಿದ್ದರು. ಕಳೆದ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವಿಗೆ ಶ್ರಮಿಸಿದ್ದ ರಮೇಶ ಇಂದು ಅದೇ ಹೆಬ್ಬಾಳ್ಕರ್ ಸೋಲಿಸುವ ಪಣ ತೊಟ್ಟಿದ್ದಾರೆ.
ಲಕ್ಷ್ಮಿ ಮಣಿಸಲು ಮರಾಠಾ ಅಸ್ತ್ರ ಪ್ರಯೋಗಿಸಲು ಮುಂದಾಗಿರುವ ರಮೇಶಗೆ ಇದೀಗ ಹೆಬ್ಬಾಳ್ಕರ್ ಪಂಚಮಸಾಲಿ ಪ್ರತ್ಯಾಸ್ತ್ರ ಪ್ರಯೋಗಿಸಿ ಶಾಕ್ ಕೊಟ್ಟಿದ್ದಾರೆ. ರಮೇಶ ಜಾರಕಿಹೊಳಿ ಪ್ರಭಾವಿ ನಾಯಕರಾಗಿದ್ರೆ ಇತ್ತ ಕಾಂಗ್ರೆಸ್ ಅಭ್ಯರ್ಥಿ ಡಾ. ಮಹಾಂತೇಶ ಕಡಾಡಿ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಹೀಗಾಗಿ ಈ ಸಲ ಗೋಕಾಕ ಕ್ಷೇತ್ರ ಅಕ್ಷರಶಃ ರಣಾಂಗಣವಾಗುವ ಮುನ್ಸೂಚನೆಗಳು ಸಿಗುತ್ತಿವೆ.
ರಮೇಶಗೆ ಶಾಕ್ ಕೊಟ್ಟ ಹೆಬ್ಬಾಳ್ಕರ್!
ಈ ಹಿಂದೆ ಜಿಲ್ಲಾ ರಾಜಕಾರಣದಲ್ಲಿ ಆಪ್ತರಾಗಿದ್ದ ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಈಗ ಬದ್ಧವೈರಿಗಳಂತೆ ಕಾದಾಡುತ್ತಿದ್ದಾರೆ. 2016ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ದೊರಕಿಸಿಕೊಡುವಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪಾತ್ರವೂ ಇತ್ತು. ಅದೇ ರೀತಿ 2018ರ ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವಿಗೆ ರಮೇಶ ಶ್ರಮವೂ ಇತ್ತು. ಅಷ್ಟರ ಮಟ್ಟಿಗೆ ಉಭಯ ನಾಯಕರು ಆಪ್ತರಾಗಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇಂದು ರಮೇಶ ಬಿಜೆಪಿಯಲ್ಲಿ ಲಕ್ಷ್ಮಿ ಕಾಂಗ್ರೆಸ್ನಲ್ಲಿದ್ದಾರೆ. ಈ ಚುನಾವಣೆಯಲ್ಲಿ ಲಕ್ಷ್ಮಿ ಮಣಿಸುವ ಶಪಥ ಮಾಡಿರುವ ರಮೇಶ ಮರಾಠ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಬೆಳಗಾವಿ ಗ್ರಾಮೀಣದಲ್ಲಿ ಮರಾಠಾ ಮತಗಳೇ ನಿರ್ಣಾಯಕ. ಈ ಕಾರಣಕ್ಕೆ ತಮ್ಮ ಆಪ್ತ ಹಾಗೂ ಮರಾಠಾ ಸಮುದಾಯದ ನಾಗೇಶ ಮನ್ನೋಳ್ಕರ್ ಟಿಕೆಟ್ ನೀಡುವಂತೆ ರಮೇಶ ಹೈಕಮಾಂಡ್ ಮಟ್ಟದಲ್ಲಿ ಕಸರತ್ತು ನಡಿಸಿದ್ದಾರೆ. ರಮೇಶ ಮಾಡುತ್ತಿರುವ ವಾಗ್ದಾಳಿ, ಆರೋಪಕ್ಕೆಲ್ಲ ಮೌನವೇ ಉತ್ತರ ಎಂಬಂತೆ ಲಕ್ಷ್ಮಿ ತಮ್ಮ ಪಾಲಿಗೆ ಪ್ರಚಾರದಲ್ಲಿ ತೊಡಗಿದ್ದರು. ಪದೆ ಪದೇ ಗ್ರಾಮೀಣ ಕ್ಷೇತ್ರಕ್ಕೆ ಎಂಟ್ರಿ ಕೊಡ್ತಿದ್ದ ರಮೇಶಗೆ ಇದೀಗ ಹೆಬ್ಬಾಳ್ಕರ್ ಸೈಲೆಂಟ್ ಆಗಿಯೇ ಶಾಕ್ ಕೊಟ್ಟಿದ್ದಾರೆ. ರಮೇಶ ವಿರುದ್ಧ ಲಿಂಗಾಯತ ಅಭ್ಯರ್ಥಿ ಕಣಕ್ಕಿಳಿಸುವಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಯಶಸ್ವಿ ಆಗಿದ್ದಾರೆ.
ಮರಾಠಾ ಅಸ್ತ್ರಕ್ಕೆ ಪಂಚಮಸಾಲಿ ಪ್ರತ್ಯಾಸ್ತ್ರ
ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣದಲ್ಲಿ ಹೇಗೆ ಮರಾಠಾ ಸಮುದಾಯ ನಿರ್ಣಾಯಕವೋ? ಅದೇ ರೀತಿ ರಮೇಶ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ ಕ್ಷೇತ್ರದಲ್ಲಿ ಲಿಂಗಾಯತ ಅದರಲ್ಲೂ ಪಂಚಮಸಾಲಿ ಲಿಂಗಾಯತ ಮತಗಳೇ ನಿರ್ಣಾಯಕವಾಗಿವೆ. ಬೆಳಗಾವಿ ಗ್ರಾಮೀಣದಲ್ಲಿ 95 ಸಾವಿರ ಮರಾಠಾ ಸಮುದಾಯದ ಮತಗಳಿದ್ದರೆ ಗೋಕಾಕದಲ್ಲಿ 90 ಸಾವಿರ ಲಿಂಗಾಯತ ಅದರಲ್ಲೂ 75 ಸಾವಿರ ಪಂಚಮಸಾಲಿ ಮತಗಳಿವೆ. ತಮ್ಮ ವಿರುದ್ಧ ಮರಾಠ ಅಸ್ತ್ರ ಹೆಣೆಯುತ್ತಿದ್ದ ರಮೇಶಗೆ ಭರ್ಜರಿ ತಿರುಗೇಟು ನೀಡಿರುವ ಹೆಬ್ಬಾಳ್ಕರ್ ಇದೀಗ ಪಂಚಮಸಾಲಿ ಪ್ರತ್ಯಾಸ್ತ್ರ ಪ್ರಯೋಗಿಸಿದ್ದಾರೆ. ಗೋಕಾಕ ಕಾಂಗ್ರೆಸ್ ಅಭ್ಯರ್ಥಿ ಡಾ. ಮಹಾಂತೇಶ ಕಡಾಡಿ ಗೋಕಾಕಿನ ಖ್ಯಾತ ವೈದ್ಯರಾಗಿದ್ದು, 13 ವರ್ಷಗಳಿಂದ ಗೋಕಾಕಿನಲ್ಲೇ ಪ್ರಾಕ್ಟಿಸ್ ಮಾಡ್ತಿದ್ದಾರೆ. ನರ್ಸಿಂಗ್ ಕಾಲೇಜನ್ನೂ ನಡೆಸುತ್ತಿರುವ ಡಾ. ಮಹಾಂತೇಶ ಈ ಕ್ಷೇತ್ರಕ್ಕೆ ಅಚ್ಛರಿ ಅಭ್ಯರ್ಥಿ ಆಗಿದ್ದರೂ ಎಲ್ಲರಿಗೂ ಚಿರಪರಿಚಿತರೇ ಆಗಿದ್ದಾರೆ. ಈ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಲೆದು ತೂಗಿ ರಮೇಶ ವಿರುದ್ಧ ಡಾ. ಮಹಾಂತೇಶ ಅವರನ್ನು ಕಣಕ್ಕಿಳಿಸಿದೆ. ಅದರಲ್ಲೂ ದೆಹಲಿಯಲ್ಲಿ ಬೀಡು ಬಿಟ್ಟು ಹೈಕಮಾಂಡ್ ಎದುರು ಹಠ ಸಾಧಿಸಿ ಡಾ. ಮಹಾಂತೇಶ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ರಮೇಶಗೆ ಸೈಲೆಂಟ್ ಆಗಿಯೇ ಪಂಚ್ ಕೊಟ್ಟಿದ್ದಾರೆ.