ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲೀ…. ಹಾವು ಮುಂಗಸಿಯಂತಹ ಕಾದಾಟದಲಿ……
ಈ ಎರಡು ಸಂಗತಿಗಳು ಒಂದಕ್ಕೊಂದು ವಿರುದ್ದವಾಗಿದ್ದರೂ ನನ್ನ ಜೀವನದಲ್ಲಿ ಅಗಾಧವಾದ ಪರಿಣಾಮವನ್ನು ಬೀರಿದೆ. ಬಹುಶ: ನಾನು ಊಹಿಸಿರಲಿಲ್ಲ ನನ್ನ ಕಾಲೇಜಿನ ದಿನಗಳಲ್ಲಿ ಇಂತಹದೊಂದು ಘಟನೆಗೆ ನಾನು ಸಾಕ್ಷಿಯಾಗುತ್ತೇನೆ ಎಂದು. ನೆನಪಿನ ಹಾರದಲ್ಲಿ ಅದೊಂದು ಘಟನೆ ಅತ್ಯಂತ ಪರಿಮಳ ಬೀರುವ ಹೂವಾಯಿತು. ಬಾಡಿದಷ್ಟು ಹೆಚ್ಚು ಸುವಾಸನೆ ನೀಡುವ ಸುರಗಿ ಪುಷ್ಷವಾಯಿತು. ವಿಷಯ ಇಷ್ಟೆ. ಆಗ ತಾನೆ ಹಳ್ಳಿಯಲ್ಲಿ ಹತ್ತನೇ ತರಗತಿ ಪೂರ್ಣಗೊಳಿಸಿ, ಪಟ್ಟಣದ ಕಾಲೇಜಿಗೆ ಸೇರಿಕೊಂಡೆ.
ಅಲ್ಲಿಂದಲೇ ಶುರುವಾಯಿತಲ್ಲ ಈ ರಾಗಿಂಗ್ ಹಾವಳಿ. ನಮ್ಮ ಕ್ಲಾಸಿನ ಹುಡುಗರು ಕಾಲೇಜಿನಲ್ಲಿ ಎಲ್ಲ ಹುಡುಗಿಯರಿಗೆ
ರಾಗಿಂಗ್ ಮಾಡುತ್ತಾ ತಮ್ಮದೇ ಅಧಿಪತ್ಯ ಸಾಧಿಸಿದ್ದರು. ಆ ಹುಡುಗಿಯರಲ್ಲಿ ನಾನೂ ಹೊರತಾಗಿರಲಿಲ್ಲ. ಏನೋ ಕಾಲೇಜಿಗೆ ಸೇರಿದ ಹುಮ್ಮಸ್ಸಿನಲ್ಲಿ ಎರಡು ದಿನ ಹಾರಾಡುತ್ತಾರೆ ಮುಂದೆ ತಾವೇ ಸುಮ್ಮನಾಗುತ್ತಾರೆ ಎಂದು ನಾನು ಅವರನ್ನು
ನಿರ್ಲಕ್ಷಿಸಿದೆ. ಆದರೆ ಅವರ ವರ್ತನೆ ದಿನೇ ದಿನೇ ಮಿತಿಮೀರತೊಡಗಿತು. ನನಗೆ ಮಾನಸಿಕವಾಗಿ ತುಂಬಾ ಕಿರಿಕಿರಿ ಆಯಿತು. ನನಗೆ ರೋಸಿಹೋಯಿತು ಇನ್ನು ನನ್ನಿಂದ ಸಹಿಸಲು ಸಾಧ್ಯವೇ ಇರಲಿಲ್ಲ. ಮತ್ತೇನು ಯೋಚಿಸದೇ ನೇರವಾಗಿ ನಮ್ಮ ಪ್ರಿನ್ಸಿಪಾಲ್ ಗೆ ದೂರು ನೀಡಿದೆ. ಆ ದೂರು ಮುಂದೆ ಆ ಹುಡುಗರ ಜೀವನದಲ್ಲಿ ಸಣ್ಣ ತೊಡಕಾಗುತ್ತದೆ, ಸಾಕಷ್ಟು ಸವಾಲುಗಳು ಎದುರಾಗಬಹುದು ಮತ್ತೊಂದಡೆ ನನ್ನ ಬದುಕಿನಲ್ಲಿ ಅಪೂರ್ವವಾದ ಸ್ನೇಹ ಬಾಂಧವ್ಯಕ್ಕೆ ಈ ದೂರು ಕಾರಣವಾಗಲಿದೆ ಎಂಬ ಸಣ್ಣ ಸುಳಿವು ಸಹ ನನಗಾಗ ಇರಲಿಲ್ಲ.
ಶಿಸ್ತಿನ ಸಿಪಾಯಿಯಂತಿದ್ದ ನಮ್ಮ ಪ್ರಾಚಾರ್ಯರು ತಕ್ಷಣ ಆ ಹುಡುಗರ ಮನೆಗಳಿಗೆ ನೋಟಿಸ್ ಕಳುಹಿಸಿದರು. ಇದರಿಂದ ಸಿಟ್ಟಿಗೆದ್ದ ಆ ಗುಂಪು ನನಗೆ ದೂರು ವಾಪಾಸ್ ಪಡೆಯುವಂತೆ ಒತ್ತಾಯಿಸಿದರು. ನಾನು ಅವರ ಯಾವ ಬೆದರಿಕೆಗು ಬಗ್ಗಲಿಲ್ಲ. ಕಾಲೇಜಿನಲ್ಲಿ ಅವರಿಗೆ ತುಸು ಅವಮಾನವೂ ಆಯಿತು, ಅಂದಿನಿಂದ ಅವರು ನಾವು ಆ ಜನ್ಮ ಶತ್ರುಗಳಾದೆವು. ಅದರಲ್ಲಿಯೂ ಆ ಗುಂಪಿನಲ್ಲಿದ್ದ ಒಬ್ಬ ಹುಡುಗನಿಗೂ ನನಗೂ ಎಣ್ಣೆ ಸೀಗೆಕಾಯಿಯಂತಾಯಿತು. ಆ ಪ್ರಕರಣ ಅಲ್ಲಿಗೆ ತಣ್ಣಗಾಯಿತಾದರೂ ನಮ್ಮ ನಡುವಿನ ಸಿಟ್ಟು ಸಾಸಿವೆ ಕಾಳಷ್ಟು ಕಡಿಮೆ ಆಗಲಿಲ್ಲ.
ಹೀಗೆ ಎರಡು ವರ್ಷ ಕಳೆಯಿತು.ನಾನು .ಯು.ಸಿ ಮುಗಿಸಿ ಪದವಿಯನ್ನು ಅದೇ ಕಾಲೇಜಿನಲ್ಲಿ ದುವರೆಸಿದೆ, ಪತ್ರಿಕೋದ್ಯಮ ನನ್ನ ಪ್ರಮುಖ ವಿಷಯವಾಗಿತ್ತು. ಆ ಹುಡುಗರ ಗುಂಪು ಸಹ ಪದವಿ ಅಡ್ಮಿಷನ್ ತೆಗೆದುಕೊಂಡಿತು. ನನ್ನ ಆಜನ್ಮ ಶತ್ರು ಆ
ಹುಡುಗನೂ ಪತ್ರಿಕೋದ್ಯಮ ವಿಷಯವನ್ನು ಅರಸಿ ಬಂದ. ಆಗ ನನಗಾದ ಕಸಿವಿಸಿ ಹೇಳತೀರದು. ಅವನು ಪತ್ರಿಕೊದ್ಯಮದಲ್ಲಿ ಅಪಾರ ಆಸಕ್ತಿ ಹೊಂದಿದ್ದ, ನಾನು ನನ್ನ ಕನಸನ್ನು ಇದೇ ವಿಷಯದಲ್ಲಿ ಕಂಡಿದ್ದೆ, ಇಬ್ಬರಿಗೂ ಸಾಹಿತ್ಯದ ಅಭಿರುಚಿ ಇತ್ತು. ಅವನೂ ನಾನು ಸ್ಪರ್ಧೆಯಲ್ಲಿದ್ದವರಂತೆ ಪುಸ್ತಕಗಳನ್ನು ಓದತೊಡಗಿದೆವು. ಆದರೆ ಸಮಯ ಮನುಷ್ಯನನ್ನು ಹೇಗೆ ಬದಲಾಯಿಸುತ್ತೆ ಎಂದರೆ ನಮ್ಮ ಹವ್ಯಾಸ ಮತ್ತು ಆಸಕ್ತಿ ನಮ್ಮಿಬ್ಬರ ನಡುವಿದ್ದ ಅಂತರವನ್ನು ಕಡಿಮೆಗೊಳಿಸಿದವು. ಎಂದೂ ಮಾತನಾಡದ ನಾವು ಗಂಟೆಗಟ್ಟಲೆ ಹರಟಲು ಶುರುಮಾಡಿದೆವು. ಮೆಸೇಜಗಳು ನಮ್ಮಿಬ್ಬರ ಮಧ್ಯೆ ಹರಿದಾಡಿದವು.
ನಮಗೆ ಅರಿವಾಗದಂತೆ ನಾವಿಬ್ಬರು ಒಳ್ಳೆಯ ಸ್ನೇಹಿತರಾದೆವು. ಇವರಿಬ್ಬರು ಹುಟ್ಟಿರುವುದೇ ಕಾದಾಡಲಿಕ್ಕೆ ಅಂತ ತಿಳಿದಿದ್ದ ನಮ್ಮ ಸಹಪಾಠಿಗಳು ನಮ್ಮ ಸ್ನೇಹ ಕಂಡು ಬೆರಗಾದರು. ಅವನಷ್ಟೇ ಅಲ್ಲದೇ ಅವನ ಗುಂಪು ಕೂಡಾ ನನಗೆ ಸ್ನೇಹಿತರಾದರು.. ಅಂದು ರಾಗಿಂಗ್ ಮಾಡಿದ ಹುಡುಗರೆಲ್ಲರೂ ಇಂದು ನನಗೆ ಅಣ್ಣಂದಿರಂತೆ ರಕ್ಷಿಸತೊಡಗಿದರು. ನನ್ನ ಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಸಹಾಯಹಸ್ತ ಚಾಚುತ್ತಾರೆ.
ಆ ಹುಡುಗ ನನ್ನ ಪರಮಾಪ್ತ ಸ್ನೇಹಿತ. ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವೆ ಕೇವಲ ಸ್ನೇಹವಿರಲು ಸಾಧ್ಯವಿಲ್ಲ ಎಂಬ ಅಲಿಖಿತ ನಿಯಮವನ್ನು ನಮ್ಮ ಗೆಳೆತನ ಸುಳ್ಳಾಗಿಸಿತು. ಪುಸ್ತಕಗಳು ನನ್ನ ಜೀವನದಲ್ಲಿ ಬರೀ ಜ್ಞಾನ ಕೊಡದೇ ಒಂದು ಒಳ್ಳೆಯ ಸ್ನೇಹವನ್ನು ಒದಗಿಸಿತು. ಒಂದು ಸ್ನೇಹ ಪ್ರೀತಿಗೆ ಪರಿವರ್ತನೆ ಆಗಲು ಒಂದು ಸಣ್ಣ ಮಧುರ ಘಳಿಗೆ ಸಾಕು ಆದರೆ ಒಳ್ಳೆಯ ಸ್ನೇಹ ಜೀವನ ಪರ್ಯಂತ ಹಸಿರಾಗಿರಲು ನೂರಾರು ವಿವೇಕದ ನಡೆ ಅವಶ್ಯಕ.