ಕಳೆದ ಕೆಲವು ವಾರಗಳಿಂದ ಐಪಿಎಲ್ ಹವಾ ಶುರುವಾಗಿದೆ. ಕರ್ನಾಟಕ ಎಲೆಕ್ಷೆನ್ಗಿಂತಾ ಹೆಚ್ಚಾಗಿ ಐಪಿಎಲ್ ಸುದ್ದಿ ಸದ್ದು ಮಾಡುತ್ತಿದೆ. ಕ್ರಿಕೆಟ್ ಆಟದ ಜೊತೆಗೆ ಬೆಟ್ಟಿಂಗ್ ಭರಾಟೆ ಕೂಡ ಜೋರಾಗಿದೆ. ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಬೆಟ್ಟಿಂಗ್ ಮೋಹಕ್ಕೆ ಸಿಲುಕಿ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಬೆಟ್ಟಿಂಗ್ನಲ್ಲಿ ಸೋತ ಸಾವಿರಾರು ಕುಟುಂಬಗಳು ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುತ್ತಿರುವ ಜೊತೆಗೆ ಪ್ರಾಣವನ್ನು ಕಳೆದುಕೊಳ್ಳುವವರ ಸಂಖ್ಯೆಯು ಪ್ರತಿವರ್ಷ ಹೆಚ್ಚುತ್ತಿದೆ. ಅದರಲ್ಲೂ ೧೬ರಿಂದ ೩೦ವರ್ಷ ವಯಸ್ಸಿನವರೆ ಈ ಬೆಟ್ಟಿಂಗ್ ಜಾಲದಲ್ಲಿ ಬಿದ್ದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಭಾರತದಲ್ಲಿ ಬೆಟ್ಟಿಂಗ್ ಕಾನೂನು ಬಾಹಿರ ಆಗಿದ್ದರೂ ಕೂಡ ಜೂಜಿನ ಮೋಹಕ್ಕೆ ಬಿದ್ದು ತಮ್ಮ ಬದುಕನ್ನು ನಾಶ ಮಾಡಿಕೊಳ್ಳವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು, ಹೋಟೇಲ್ ಮಾಲ್ಗಳಲ್ಲಿ , ಶೋರೂಂ, ಶಾಪ್ಗಳಲ್ಲಿ ಕೆಲಸ ಮಾಡುವ ಯುವಕರೇ ಹೆಚ್ಚಾಗಿ ಈ ಜೂಜಿನ ಸುಳಿಯಲ್ಲಿ ಸಿಲುಕಿಕೊಳ್ಳುವವರು. ಬೆಟ್ಟಿಂಗ್ ದಂಧೆ ಕೇವಲ ನಗರಗಳಲ್ಲಿ ಮಾತ್ರ ನಡೆಯುತ್ತಿಲ್ಲ ನಗರಗಳಂತೆ ಹಳ್ಳಿಗಳಲ್ಲೂ ಕೂಡ ಜೋರಾಗಿ ನಡೆಯುತ್ತಿದೆ. ಬೆಟ್ಟಿಂಗ್ ಗಾಗಿ ಸಾಲಮಾಡಿ ಸೋತಾಗ ಊರು ಬಿಟ್ಟು ಕೆಲವರು ಆತ್ಮಹತ್ಯೆಯ ದಾರಿಯನ್ನು ಹಿಡಿದಿದ್ದಾರೆ.
ಬೆಟ್ಟಿಂಗ್ ಕಟ್ಟಿ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಮಾಡಬಹುದು ಎನ್ನುವ ದುರಾಸೆಯಿಂದ ಕೈಯಲ್ಲಿ ಇದ್ದ ಹಣವನ್ನು ಕಳೆದುಕೊಂಡು ಜೀವನವನ್ನು ಸರ್ವನಾಶ ಮಾಡಿಕೊಳ್ಳುವವರೇ ಹೆಚ್ಚು.
ಐಪಿಎಲ್ ಪ್ರಾರಂಭವಾಗಿ ಇನ್ನೂ ಎರಡು ವಾರ ಕೂಡ ಕಳೆದಿಲ್ಲ ಅದಾಗಲೇ ಸಾಕಷ್ಟು ಬೆಟ್ಟಿಂಗ್ ಪ್ರಕರಣಗಳು ಪತ್ತೆಯಾಗಿವೆ. ಇತ್ತಿಚೆಗೆ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದ ಮೇಲೆ ಪುಣೆ ಪೋಲೀಸರು ಒಂಭತ್ತು ಜನ ಆರೋಪಿಗಳನ್ನು ಬಂಧಿಸಿದ್ದಾರೆ . ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ಜೂಜಾಟ ನಡೆಸಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿತ್ತು.
ಇದೇ ರೀತಿ ಬೆಟ್ಟಿಂಗ್ ದಂಧೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಶಂಕಿತ ಬುಕ್ಕಿ ಅನಿಲ್ ಜೈಸಿಂಘಾನಿಯನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಇವನು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಅವರಿಗೆ ಬ್ಲ್ಯಾಕ್ ಮೇಲ್ ಮಾಡಲು ಸಂಚು ರೂಪಿಸಿದ್ದನು.
ಇನ್ನು ಕರ್ನಾಟಕದ ವಿಚಾರಕ್ಕೆ ಬರುವುದಾದರೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹೊಂಬಳಗಟ್ಟಿ ಗ್ರಾಮದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಜಮೀರ್ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ. ಇತ್ತೀಚಿಗೆ ಮಂಗಳೂರಿನ ಉಳ್ಳಾಲದಲ್ಲಿ ಟೈಲರಿಂಗ್ ವಸ್ತುಗಳ ಮಳಿಗೆಯ ಮಾಲಕ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹಿಂದೆಯೂ ಐಪಿಲ್ ಬೆಟ್ಟಿಂಗ್ ನ ಶಂಕೆ ವ್ಯಕ್ತವಾಗಿದೆ.
ಬೆಟ್ಟಿಂಗ್ ಇಂದು ವ್ಯಾಪಕವಾಗಿ ಹಬ್ಬಿಕೊಂಡಿದ್ದು ಸುಲಭ ಹಾಗೂ ವೇಗವಾಗಿ ಹಣಗಳಿಕೆಯ ಮಾರ್ಗ ಎಂದು ಜನ ಭಾವಿಸಿರುವುದು ಇದಕ್ಕೆ ಮುಖ್ಯ ಕಾರಣ. ಜೊತೆಗೇ ಆಧುನಿಕ ತಂತ್ರಜ್ಞಾನದ ಬಳಕೆಯೂ ಇದನ್ನು ಮತ್ತಷ್ಟು ಉತ್ತೇಜಿಸಿದೆ. ಆನ್ಲೈನ್ ಆ್ಯಪ್ಗಳ ಮೂಲಕ ನಡೆಯುತ್ತಿರುವ ಬೆಟ್ಟಿಂಗ್ ಮೇಲೆ ಕಡಿವಾಣ ಹಾಕಲು ಕರ್ನಾಟಕ ಪೋಲೀಸ್ ಕಾಯಿದೆ ೧೯೬೩ಕ್ಕೆ ತಿದ್ದುಪಡಿ ತರಲಾಯ್ತು. ಇದರ ಅನ್ವಯ ಆರೋಪಿಗಳಿಗೆ ಗರಿಷ್ಠ ೬ ತಿಂಗಳು ಜೈಲು ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.