ಕರಾವಳಿ ಜೋಡಿ ಜಿಲ್ಲೆಗಳ ಸರಕಾರಿ ಶಾಲಾ ಕಾಲೇಜುಗಳ ಬಾಗಿಲಲ್ಲಿ ಆಗಾಗ ಕಾಣಿಸಿಕೊಳ್ಳುವ ಎಂಬತ್ತರ ಹರಯದ ಈ ಸಾದಾ ಸೀದಾ ವ್ಯಕ್ತಿಯ ಹೆಸರು ನಾರಾಯಣ ನಾಯಕ್. ಎಣ್ಣೆ ಹಾಕಿ ಹಿಂದಕ್ಕೆ ಬಾಚಿದ ಕೆದರು ಬಿಳಿ ತಲೆಕೂದಲು, ಹೆಗಲಲ್ಲಿ ಒಂದು ಸರಳ ಬುದ್ಧಿಜೀವಿ ಚೀಲ, ಸವೆದ ಚಪ್ಪಲಿ… ಹೀಗೆ ಸರಳ ವಸ್ತ್ರದಲ್ಲಿ ಕಾಣಿಸಿಕೊಳ್ಳುವ ಸಜ್ಜನ ಸಾತ್ವಿಕ ಮನಸ್ಸಿನ ನಾರಾಯಣ ನಾಯಕರು ನಿವೃತ್ತಿಯ ನಂತರ ಕಳೆದ 20 ವರ್ಷಗಳಲ್ಲಿ ಸವೆಸಿದ ಚಪ್ಪಲಿಗಳಿಗೆ ಲೆಕ್ಕವಿಲ್ಲ .ನಡೆದ ಹೆಜ್ಜೆಗಳಿಗೆ ದಾಖಲೆಗಳಿಲ್ಲ.
“ಸರಾಸರಿ ದಿನಕ್ಕೆ ಮೂರರಿಂದ ಐದು ಮೈಲು ನಡೆದಿರುವೆ. ತಾನು ಭೇಟಿ ಮಾಡದ ಸರಕಾರಿ ಶಾಲಾ-ಕಾಲೇಜುಗಳಿಲ್ಲ. ನೋಡದ ಊರುಗಳಿಲ್ಲ, ಮಾತನಾಡಿಸದ ಮುಖ್ಯೋಪಾಧ್ಯಾಯರು, ಪ್ರಿನ್ಸಿ ಪಾಲರುಗಳಿಲ್ಲ.” ಎನ್ನುವ ನಾಯಕರು ಶಾಲಾ ಕಾಲೇಜುಗಳಿಗೆ ಜೋಳಿಗೆ ತುಂಬಿಸಿಕೊಂಡು ಹೋಗುವುದು ಹತ್ತಾರು ಬಗೆಯ ಸ್ಕಾಲರ್ಶಿಪ್ಪಿನ ಅರ್ಜಿ ಫಾರ್ಮ್ ಗಳನ್ನು !ಜಾತಿ, ಪ್ರತಿಭೆ, ಅಂಕ, ತಂದೆ ತಾಯಿಗಳ ಉದ್ಯೋಗ ಆಧರಿತ ಸ್ಕಾಲರ್ಶಿಪ್ ಗಳನ್ನು ತರಗತಿಗಳಿಗೆ ಹೋಗಿ ಸಾದರಪಡಿಸಿ ತುಂಬುವ ಬಗೆಯನ್ನು ಹೇಳಿ, ಜೋಡಿಸಬೇಕಾದ ದಾಖಲೆಗಳನ್ನು ಜೋಡಿಸಿ ತಲುಪಿಸಬೇಕಾದ ಕಡೆ ತಲುಪಿಸಿ , ಹಳ್ಳಿ ಕೇಂದ್ರಿತ ಬಡ ವಿದ್ಯಾರ್ಥಿಗಳಿಗೆ ಹೆಚ್ಚು ಸಹಾಯ ಸಿಗುವಂತೆ ಮಾಡುವ ನಾಯಕರು ಈ ಶೈಕ್ಷಣಿಕ ಸೇವೆಗಾಗಿಯೇ ಮಾಡುವ ಖರ್ಚು ಕಡಿಮೆಯಲ್ಲ .
ಕೆಲವು ಅರ್ಜಿಗಳನ್ನು ತಾನೇ ಮುದ್ರಿಸಿ, ಜೆರಾಕ್ಸ್ ಮಾಡಿಸಿ ತರುತ್ತಾರೆ. ತನಗೆ ಬರುವ ತಿಂಗಳ 42 ಸಾವಿರ ನಿವೃತ್ತಿ ವೇತನದಲ್ಲಿ 22 ಸಾವಿರ ಮೊತ್ತವನ್ನು ಪ್ರತಿ ತಿಂಗಳು ಇಂತಹ ಶೈಕ್ಷಣಿಕ ಚಟುವಟಿಕೆಗಳಿಗಾಗಿ ವಿನಿಯೋಗಿಸುವ ಸೇವಾಜೀವಿ ಇವರು. ಕರಾವಳಿಯ ಕೆಲವು ಸರಕಾರಿ ಕಾಲೇಜುಗಳಲ್ಲಿ ಮಕ್ಕಳಿಗೆ ಮಧ್ಯಾಹ್ನ ಕನಿಷ್ಠ ಮೊತ್ತಕ್ಕೆ ಬಿಸಿ ಊಟ ಕೊಡುವ ಕ್ರಮವಿದೆ. ಅಂತಹ ಸಂಸ್ಥೆಗಳಿಗೆ ತಿಂಗಳಿಗೆ ಐದು ಸಾವಿರ ಹಣವನ್ನು ಉದಾರವಾಗಿ ನೀಡುವ ಇವರು ಮಕ್ಕಳಿಗೆ ನಾಲ್ಕು ನಮೂನೆಯ ಸ್ಕಾಲರ್ಶಿಪ್ ಗಳನ್ನು ಪರಿಚಯಿಸುತ್ತಾರೆ.
ಹಾಗೆಯೇ ಉನ್ನತ ಶಿಕ್ಷಣ ಬಯಸುವ ಮಕ್ಕಳಿಗೆ ಉಳ್ಳವರಿಂದ ದಾನಿಗಳಿಂದ ಆರ್ಥಿಕ ಸಹಾಯ, ಲ್ಯಾಪ್ಟಾಪ್ ಪುಸ್ತಕ ಇತ್ಯಾದಿಗಳನ್ನು ಸಂಗ್ರಹಿಸಿ ತಲುಪಿಸುವುದೂ ಇದೆ. ಎಷ್ಟೋ ಹೆಣ್ಣು ಮಕ್ಕಳ ಸರಳ ಮದುವೆಗೆ, ಮನೆ ನಿರ್ಮಾಣಕ್ಕೆ ಅಲ್ಪಮೊತ್ತದ ಸಹಾಯ ಮಾಡಿದ ನಾಯಕರು ದಿನಕ್ಕೆ ನೂರು 200 ಮೈಲು ದೂರ ಬಸ್ಸಲ್ಲಿ ಪಯಣಿಸುವುದು, 80ರ ವಯಸ್ಸಿನಲ್ಲೂ ಬೈಕಿನಲ್ಲಿ ಓಡಾಡುವುದು ಇದ್ದೇ ಇದೆ.
ಬಸ್ ಇಳಿದು ನಗರ ಒಂದರ ನಾಲ್ಕಯ್ದು ಕಡೆಯ ಸರಕಾರಿ ಸಂಸ್ಥೆಗಳಿಗೆ ಆಟೋ ಹತ್ತದೆ ನಡೆದುಕೊಂಡೇ ಊರು ಸುತ್ತುವ ಪರಿಶ್ರಮ ಇವರದ್ದು. ಕೃಷಿ ಭೂಮಿಯನ್ನು ಇಬ್ಬರು ಮಕ್ಕಳಿಗೆ ಪಾಲು ಮಾಡಿ ಕೊಟ್ಟು ತಾನು ನಿವೃತ್ತಿಯ ಬದುಕನ್ನು ಪರಿಪೂರ್ಣ ಸಮಾಜ ಸೇವೆಗೆಂದು ಅದರಲ್ಲೂ ಶೈಕ್ಷಣಿಕ ಕಾಳಜಿಯಿಂದ ವಿನಿಯೋಗಿಸುತ್ತಿರುವ ಈ ನಾರಾಯಣ ನಾಯಕರ ಸಮಾಜಸೇವೆಯ ಲಾಭ ಪಡೆದು ಉನ್ನತಿಗೇರಿದ ಬದುಕು ಕಟ್ಟಿಕೊಂಡ ಮಕ್ಕಳು ಅದೆಷ್ಟೋ.
By: Rajaram Tallur