ಉಡುಪಿಯಲ್ಲಿನ ಹಳೆ ತಾಲೂಕು ಕಚೇರಿ ಹಾಗೂ ಸಬ್ ಜೈಲು ಆಗಿದ್ದ 12 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ, ಏಕೈಕ ಐತಿಹಾಸಿಕ ಕಟ್ಟಡ ಈಗ ನೆಲಕಚ್ಚುವ ಹಂತಕ್ಕೆ ಬಂದಿದೆ.
ಈ ಸ್ಥಳವನ್ನು ಕೆಡವಿ ಹೊಸ ನಗರ ಸಭೆ ಕಟ್ಟಡ ನಿರ್ಮಾಣ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಈ ವೇಳೆ ಆರ್ಕಿಟೆಕ್ಟ್ಸ್ ಹಾಗೂ ಕಲಾವಿದರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ನಗರ ಸಭೆಯ ಹೊಸ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಂದಾಗಿರುವ ಹಿನ್ನೆಲೆ ಸಬ್ ಜೈಲನ್ನು ಕೆಡವಲು ನಿರ್ಧರಿಸಲಾಗಿದೆ. ಇದರ ದಾಖಲಾತಿಯನ್ನು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೇಜ್, ಮಂಗಳೂರು ಶಾಖೆ ನಡೆಸುತ್ತಿದೆ.
ಉಡುಪಿ, ಮಂಗಳೂರಿನ 12 ಕಲಾವಿದರು ಕಟ್ಟಡದ ಕಲಾಕೃತಿಯನ್ನು ರಚಿಸಿ ಜಾಗೃತಿ ಮೂಡಿಸುತ್ತಿದ್ದು, ನಗರ ಸಭೆ ಪರ್ಯಾಯವಾಗಿ ಅಲ್ಲಿ ಮ್ಯೂಸಿಯಂ, ಪಾರಂಪರಿಕ ವಸ್ತು ಸಂಗ್ರಹಾಲಯ ಮಾಡಲು ಒತ್ತಾಯಿಸುತ್ತಿದ್ದಾರೆ.
ಈ ಕಟ್ಟಡ ಕೊಲೋನಿಯಲ್ ಅಥವಾ ವಸಾಹತುಶಾಹಿ ವಾಸ್ತು ರಚನೆಯಲ್ಲಿ ನಿರ್ಮಾಣವಾಗಿದೆ. ಮೇಲಂತಸ್ತಿನಲ್ಲಿ 12, ಕೆಳ ಅಂತಸ್ತಿನಲ್ಲಿ 12 ಜೈಲು ಸೆಲ್ ಗಳಿವೆ. ಸಣ್ಣ ಕೆಂಪು ಇಟ್ಟಿಗೆಗಳನ್ನು ಬಳಸಿ ಮದ್ರಾಸ್ ರೂಫಿಂಗ್ ಮಾದರಿಯಲ್ಲಿ ನಿರ್ಮಿಸಿರುವ ಸದ್ಯ ಉಡುಪಿಯಲ್ಲಿ ಕಾಣಸಿಗುವ ಏಕೈಕ ಕಟ್ಟಡ ಇದಾಗಿದೆ. ಈ ಕಟ್ಟಡವನ್ನು ಕೆಡವಲು 12 ಲಕ್ಷ ರೂ. ಟೆಂಡರ್ ಆಗಿದ್ದು, ಹೊಸ ನಗರಸಭೆ ನಿರ್ಮಾಣಕ್ಕೆ 45 ಕೋಟಿ ರೂ. ವೆಚ್ಚವಾಗಲಿದೆ.
ಇನ್ನು ಈ ಕಲಾವಿದರ ಹೋರಾಟಗಳಿಗೆ ಸಾಮಾಜಿಕ ಜಾಲತಾಣದಲ್ಲಿ ರಾಜಾರಾಮ್ ತಲ್ಲೂರ್ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದು, ಜನರು ಐತಿಹಾಸಿಕ ಕಟ್ಟಡ ಉಳಿಸುವಂತಿದ್ದರೆ ಕಳೆದ 20 ವರ್ಷಗಳಲ್ಲಿ ನೆಲಸಮಗೊಂಡ ಕುಂದಾಪುರದ ಐತಿಹಾಸಿಕ ಸಹಾಯಕ ಕಮಿಷನರ್ ಕಚೇರಿ, ನ್ಯಾಯಾಲಯ ಸಂಕೀರ್ಣ, ಉಡುಪಿಯ ನ್ಯಾಯಾಲಯ ಸಂಕೀರ್ಣಗಳನ್ನೂ ಉಳಿಸಬಹುದಿತ್ತು ಎಂದಿದ್ದಾರೆ.
ಸಬ್ ಜೈಲು ಉಳಿಸುವುದಕ್ಕೆ ವಿರೋಧವಿಲ್ಲ. ಆದರೆ ಇದನ್ನು ಇರುವಂತೆಯೇ ಸ್ಥಳಾಂತರಿಸಿ ಅದೇ ಸೌರೂಪದಲ್ಲಿ, ಸೂಕ್ತ ಜಾಗದಲ್ಲಿ ಇರಿಸಬಹುದು. ಅತ್ಯುತ್ತಮ ಮಾದರಿ ಹೆರಿಟೇಜ್ ವಿಲೇಜ್ ಕೂಡ ಉಡುಪಿಯಲ್ಲೇ ಇದೆ. ಅಥವಾ ಅದನ್ನು 3ಡಿ ಮಾಡಲ್, ಬೇರೆ ರೀತಿಯಲ್ಲಿ ಕೂಡ ಮಾಡುವ ಸಾಧ್ಯತೆ ಇದೆ.
ಈ ಕಟ್ಟಡ ಪಾಳು ಬಿದ್ದು 5 ವರ್ಷಕ್ಕಿಂತ ಹೆಚ್ಚಾಗಿದೆ. ಇಷ್ಟು ದಿನ ಇಲ್ಲದ ಕಾಳಜಿ ಕಟ್ಟಡ ಕೆಡವಲು ವಾರ ಇರುವಾಗ ಏಕೆ ಬಂದಿದೆ ಎಂದು ಪ್ರಶ್ನಿಸಿದ್ದಾರೆ.
ಅಷ್ಟು ಮಾತ್ರವಲ್ಲ ಈಗ ಉಡುಪಿ ಮಹಾನಗರವಾಗಿ ಬೆಳೆಯುತ್ತಿದ್ದುಮ ಅಲ್ಲಿ ವಾಹನ ಪಾರ್ಕಿಂಗ್ ನಂತಹ ಮೂಲ ಸೌಕರ್ಯದ ಅಗತ್ಯವಿದೆ. ಮ್ಯೂಸಿಯಂ, ಗ್ಯಾಲರಿಗಳನ್ನು ನಗರದ ಹೊರವಲಯದಲ್ಲೂ ಮಾಡಬಹುದಲ್ಲವೇ?
ಸದ್ಯ ರಚನೆ ಮಾಡಬೇಕಾದ ಕಟ್ಟಡವನ್ನು ಹೆಚ್ಚಿನ ಗುಣಮಟ್ಟದಲ್ಲಿ ಹಾಗೂ ಕನಿಷ್ಠ 100 ವರ್ಷ ಉಳಿಯುವ ಹಾಗೆ ರಚನೆ ಮಾಡಬೇಕಿದೆ ಎಂದಿದ್ದಾರೆ.