ಇಂದಿನ ಯುವಕರೇ ಮುಂದಿನ ಪ್ರಜೆಗಳು. ಯುವಕರು ಇಂದು ಪ್ರಜೆಗಳಾದರೆ ಸಾಲದು ಅವರು ದೇಶದ ನಾಗರಿಕರಾಗಬೇಕು. ನಾಗರೀಕರಾಗಲು ರಾಷ್ಟ್ರೀಯತೆ ಸಾಮಾಜಿಕ ಜವಾಬ್ದಾರಿಯುತ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಯುವಕರಲ್ಲಿ ಮೊದಲೇ ಇರುವ ಇಚ್ಛಾಶಕ್ತಿ ಕಾರ್ಯ ಸಾಮರ್ಥ್ಯವನ್ನು ಉತ್ತಮ ತರಬೇತಿಗಳಿಗೆ ಒಳ ಪಡಿಸಬೇಕಾಗುತ್ತದೆ. ರಚನಾತ್ಮಕವಾಗಿ ಸಜ್ಜುಗೊಳಿಸಿದರೆ ಯುವಕರು ಮುಂದಿನ ಜೀವನದಲ್ಲಿ ಆದರ್ಶ ವ್ಯಕ್ತಿಗಳಾಗುತ್ತಾರೆ. ಇಂಥ ಸಜ್ಜನ ನಾಗರಿಕರಾಗಲು ಕೆಲವು ನಿಯಮಗಳನ್ನು ರೂಡಿಸಿಕೊಳ್ಳಬೇಕು.
ಜ್ಞಾನಾರ್ಜನೆ: ಯುವಕರು ಜ್ಞಾನದಾಹಿಗಳಾಗಿರಬೇಕು. ಜ್ಞಾನವನ್ನು ಪ್ರೀತಿಸಬೇಕು ವಿದ್ಯೆಯು ನಮ್ಮ ವರ್ಚಸ್ಸನ್ನು ಹೆಚ್ಚಿಸುತ್ತದೆ ಯುವಕರು ಇಂದು ವಿದ್ಯಾವಂತರಷ್ಟೇ ಆದರೆ ಸಾಲದು, ತಮ್ಮಲ್ಲಿರುವ ವಿದ್ಯೆಯನ್ನು ಇತರರಿಗೆ ಧಾರೆ ಎರೆಯಬೇಕು. ಶಿಕ್ಷಣ ಕೇವಲ ಜೀವನೋಪಾಯಕ್ಕಾಗಿ ಅಲ್ಲದೆ ಅದು ಜೀವನಕ್ಕೆ ಎಂಬುದನ್ನು ಚೆನ್ನಾಗಿ ಅರಿತಿರಬೇಕು.
ವಿನಯತೆ: ವಿದ್ಯೆಯು ವಿನಯವನ್ನು ತಂದುಕೊಡುತ್ತದೆ. ವಿನಯವಿಲ್ಲದ ವಿದ್ಯೆ, ವಿದ್ಯೆಯೇ ಅಲ್ಲ ಗುರುಹಿರಿಯರಿಗೆ ಗೌರವ ಸಮುದಾಯದಲ್ಲಿರುವ ಜನರೊಂದಿಗೆ ನಮ್ರತೆಯಿಂದ ವ್ಯವಹರಿಸಬೇಕು. ತಮ್ಮ ಲೋಪದೋಷಗಳು ಯೋಗ್ಯತೆ ಸಾಮರ್ಥ್ಯವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಅದಕ್ಕನುಗುಣವಾಗಿ ಯುವಕರು ವರ್ತಿಸಬೇಕು.
ಕ್ರಮಬದ್ಧ ಕೆಲಸ: ಯುವಕರು ಪಾದರಸದಂತಿರಬೇಕು. ಇಂದಿಗೆ ತಾನು ಕೈಕೊಳ್ಳಬಹುದಾದ ಕಾರ್ಯವನ್ನು ಮೊದಲೇ ನಿರ್ಧರಿಸಿ ಅದರಂತೆಯೇ ನಡೆಯಬೇಕು. ಒಂದು ಕೆಲಸ ಪೂರ್ಣಗೊಂಡ ಬಳಿಕ ಇನ್ನೊಂದು, ಹೀಗೆ ಸರಣಿಯಂತೆ ಕೆಲಸ ಮಾಡಬೇಕು ಇದು ಕೈಕೊಳ್ಳುವ ಕೆಲಸದ ಮೇಲೆ ಒತ್ತಡ ಬೀರದೆ ಮನಸ್ಸು ಮತ್ತು ದೇಹದ ಆರೋಗ್ಯವನ್ನು ಕಾಪಾಡುತ್ತದೆ ಎಂಬುದನ್ನು ಯುವಕರು ಅರಿತಿರಬೇಕು.
ಆತ್ಮವಿಶ್ವಾಸ: ಆತ್ಮವಿಶ್ವಾಸದಿಂದ ವ್ಯಕ್ತಿ ಸ್ವಾವಲಂಬಿಯಾಗುತ್ತಾನೆ. ತನ್ನ ವ್ಯಕ್ತಿತ್ವವನ್ನು ತಾನೇ ರೂಡಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾನೆ. ಆತ್ಮವಿಶ್ವಾಸ ನಮ್ಮೊಳಗಿನ ಶಕ್ತಿಯನ್ನು ಕೆರಳಿಸುತ್ತದೆ, ಈ ಜಗತ್ತಿನಲ್ಲಿ ಯಾರಾದರೂ ಏನನ್ನಾದರೂ ಸಾಧಿಸಿದರೆ ಅದು ಆತ್ಮವಿಶ್ವಾಸದಿಂದ. ಜಗತ್ತಿನ ಇತಿಹಾಸವೆಂದರೆ ಆತ್ಮವಿಶ್ವಾಸ ಉಳ್ಳ ಕೆಲವೇ ಮಂದಿ ವ್ಯಕ್ತಿಗಳ ಚರಿತ್ರೆ. ಆದ್ದರಿಂದ ಯುವಕರು ಇಂದು ಆತ್ಮವಿಶ್ವಾಸವನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ.
ಸತ್ಯಪಾಲನೆ: ಸತ್ಯದ ದಾರಿ ಕಷ್ಟವಾದರೂ ಅಂತ್ಯದಲ್ಲಿ ಬಹಳ ಮಧುರವಾಗಿರುತ್ತದೆ. ಜಯಶೀಲತೆಗಾಗಿ ಇದೊಂದು ಸತ್ಯ ಪಥ. ತಡವಾದರೂ ಖಂಡಿತ ಜಯ ಖಚಿತ. ಸತ್ಯವನ್ನು ಹೇಳುತ್ತಾ ಸನ್ಮಾರ್ಗದಲ್ಲಿ ನಡೆಯುವ ಕಡೆ ಯುವಕರು ಚಿಂತಿಸಿ ಹೆಜ್ಜೆ ಇಡಬೇಕಾಗಿದೆ.
ಕಷ್ಟಗಳು ಬಂದಾಗ ಕಲ್ಲಾಗಬೇಕು: ಕಷ್ಟಗಳನ್ನು ಎದುರಿಸಬೇಕಾದರೆ ಧೈರ್ಯ ಬೇಕು. ಧೈರ್ಯವಂತನಿಗೆ ಅದೃಷ್ಟ ಒಲಿಯುತ್ತದೆ. ಕಷ್ಟಗಳು ನಾವು ಜೀವನದಲ್ಲಿ ಎದುರಿಸಬೇಕಾದ ಸವಾಲುಗಳು. ಒಂದು ಸಾಮಾನ್ಯ ಶಿಲೆಯು ಶಿಲ್ಪಿಯ ಸಾವಿರಾರು ಪೆಟ್ಟುಗಳನ್ನು ತಿಂದು ಸುಂದರ ಪೂಜ್ಯನೀಯ ವಿಗ್ರಹವಾಗುತ್ತದೆ. ಆದುದರಿಂದ ನಮ್ಮಲ್ಲಿರುವ ಶಕ್ತಿಯ ಬಗ್ಗೆ ನಂಬಿಕೆ ಇರಬೇಕು. ನಾವು ಶಕ್ತಿಯನ್ನು ಬೆಳೆಸಿಕೊಂಡು ಕಷ್ಟಗಳನ್ನು ಎದುರಿಸುವುದು ಸಾಧ್ಯವಾಗುತ್ತದೆ.
ಒಳ್ಳೆಯ ಆದರ್ಶ: ಆದರ್ಶದಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು. ಆದರ್ಶವು ಒಂದು ಬೆಳಕಿನಂತೆ, ಅದು ನಮ್ಮ ಮಾತು, ಕೃತಿ ಮತ್ತು ಆಲೋಚನೆಯ ಮೇಲೆ ಪ್ರಭಾವ ಬೀರುತ್ತದೆ.
ಸಮಾಜದಲ್ಲಿ ಪ್ರಗತಿ ಹೊಂದಬೇಕಾದರೆ ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆ, ಆತ್ಮ ಚರಿತ್ರೆಗಳ ಅಧ್ಯಯನವನ್ನು ಯುವಕರು ಮಾಡಿಕೊಂಡು ತಮ್ಮದೇ ಆದಂತಹ ಧನಾತ್ಮಕ ವ್ಯಕ್ತಿತ್ವವನ್ನು ರೂಡಿಸಿಕೊಳ್ಳಬೇಕು.