ಬೆಂಗಳೂರು: ದಿನೇ ದಿನೇ ಏರುತ್ತಿರುವ ತರಕಾರಿ, ದಿನಸಿ ಸಾಮಗ್ರಿಗಳು , ವಿದ್ಯುತ್ ದರ ಏರಿಕೆಯಿಂದ ಹೈರಾಣಾಗಿರುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಇನ್ನೊಂದು ಶಾಕ್ ನೀಡಲು ಹೊರಟಿದೆ. ಕಳೆದ ಕೆಲವು ವಾರಗಳಿಂದ ಹಾಲಿನ ದರವನ್ನು ಏರಿಸಲು ಒತ್ತಾಯ ಮಾಡುತ್ತಿರುವ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಪ್ರತಿನಿಧಿಗಳ ಜತೆ ಶುಕ್ರವಾರ ಸಂಜೆ 6 ಘಂಟೆಗೆ ಮುಖ್ಯ ಮಂತ್ರಿಗಳು ಸಭೆ ನಡೆಸಲಿದ್ದಾರೆ.
ಕಳೆದ ವಾರವೇ ಕೆಎಂಎಫ್ ಪದಾಧಿಕಾರಿಗಳು ಹಾಗೂ ಹಾಲು ಒಕ್ಕೂಟಗಳ ಅಧ್ಯಕ್ಷರ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಹಾಲಿನ ದರ ಏರಿಕೆ ಕುರಿತು ಚರ್ಚಿಸಲು ನಿರ್ಧರಿಸಿತ್ತಾದರೂ ಮುಖ್ಯಮಂತ್ರಿಗಳ ಸಮಯಾಭವದ ಕಾರಣದಿಂದಾಗಿ ಸಭೆಯನ್ನು ಮುಂದೂಡಲಾಗಿತ್ತು. ಇದೀಗ ಮುಖ್ಯಮಂತ್ರಿಯವರು ಈ ಕುರಿತು ಚರ್ಚಿಸಲು ಸಮಯ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಸಭೆ ನಡೆಯಲಿದೆ. ಹಾಲಿನ ದರ ಏರಿಸಲೇಬೇಕಾದ ಅನಿವಾರ್ಯತೆಯೂ ಇದ್ದು ಇಂದು ಕನಿಷ್ಟ ಪಕ್ಷ ಲೀಟರಿಗೆ ಮೂರರಿಂದ ನಾಲ್ಕು ರುಪಾಯಿ ದರ ಹೆಚ್ಚಳ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ನಾವು ಹೆಚ್ಚಳದ ಬಗ್ಗೆ ಯೋಚಿಸುತ್ತಿದ್ದೇವೆ ಆದರೆ ಎಷ್ಟು ಎಂದು ನಾವು ನಿರ್ಧರಿಸಿಲ್ಲ. ಪ್ರಸ್ತಾವನೆಯ ಪ್ರಕಾರ, ಹೆಚ್ಚಿಸಿದ ಮೊತ್ತದ 70% ರೈತರಿಗೆ ನೀಡಲಾಗುವುದು ಮತ್ತು 30% ಹಾಲು ಒಕ್ಕೂಟವು ಉಳಿಸಿಕೊಳ್ಳುತ್ತದೆ, ”ಎಂದು ಸಚಿವ ಕೆ ವೆಂಕಟೇಶ್ ಅವರು ತಿಳಿಸಿದರು. ಸದ್ಯ ಹಾಲಿನ ದರ ಲೀಟರ್ ಗೆ ₹39 ಇದೆ.
ಹೈನುಗಾರಿಕೆಗೆ ಅವಶ್ಯವಿರುವ ಮೇವು, ಆಕಳುಗಳ ನಿರ್ವಹಣೆ ಎಲ್ಲಾ ವಸ್ತುಗಳ ದರ ಏರಿಕೆಯಿಂದಾಗಿ ಹೈನೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಪಶು ಆಹಾರ ಉತ್ಪಾದನೆಗೆ ಬಳಸುವ ಮೆಕ್ಕೆಜೋಳ, ಅಕ್ಕಿತೌಡು, ಖನಿಜ ಪದಾರ್ಥಗಳ ಬೆಲೆ ಹೆಚ್ಚಳ, ಹತ್ತಿಕಾಳು ಹಿಂಡಿ ಸೇರಿದಂತೆ ಇತರೆ ಪಶು ಅಹಾರದಲ್ಲಿ ಶೇ.30ಕ್ಕಿಂತಲೂ ಅಧಿಕ ಏರಿಕೆಯಾಗಿದೆ. ವಿದ್ಯುತ್ ದರ ಹೆಚ್ಚಳ, ಪ್ರತಿ ಕೆಜಿ ಪಶು ಆಹಾರ ಉತ್ಪಾದನೆಯ ವೆಚ್ಚ ಎರಡು ವರ್ಷದ ಹಿಂದೆ 18 ರು. ಇತ್ತು. ಈಗ 25 ರು.ಗಳಿಗೆ ತಲುಪಿದೆ. ಹೀಗಾಗಿ ಪ್ರತಿ ಲೀಟರ ಹಾಲಿನ ಬೆಲೆಯನ್ನು ತಲಾ 5 ರು.ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ ಹಾಲು ಉತ್ಪಾದಕರು ಹಾಗೂ ಉದ್ಯಮದ ಅಭಿವೃದ್ಧಿಗೆ ತೊಂದರೆಯಾಗಲಿದೆ ಎಂದು ಸಭೆಯಲ್ಲಿ ಹಾಲು ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಹೇಳಲಾಗಿದೆ.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಕೆಎಂಎಫ್ ಅಧ್ಯಕ್ಷರಾಗಿದ್ದ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ರಾಜ್ಯದ 14 ಹಾಲು ಒಕ್ಕೂಟಗಳು ಪ್ರತಿ ಲೀಟರ್ ಹಾಲಿಗೆ ತಲಾ 5 ರು.ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ, ಕೆಎಂಎಫ್ ಪ್ರಸ್ತಾವನೆಗೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಡೆ ನೀಡಿದ್ದರು. ನಂತರ 2022 ನವೆಂಬರ್ 22ರಂದು ಕೆಎಂಎಫ್ ಹಾಲು ಮತ್ತು ಮೊಸರಿನ ಬೆಲೆಯನ್ನು ಪ್ರತಿ ಲೀಟರ್ಗೆ 2 ರು. ಹೆಚ್ಚಳ ಮಾಡಿತ್ತು.
ಇದೀಗ ದರ ಏರಿಕೆ ಖಚಿತವಾಗಿರುವುದರಿಂದ ರಾಜ್ಯದ ಗ್ರಾಹಕರು ಹಾಲು ದರ ಏರಿಕೆ ಭರಿಸಲು ಸಿದ್ದರಾಗಬೇಕಿದೆ.