ಬಾಗಲಕೋಟೆ: ರಾಜ್ಯ ರಾಜಕಾರಣ ದಿನೇ ದಿನೇ ಚುನಾವಣಾ ರಂಗು ಪಡೆಯುತ್ತಿದ್ದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಬೇರೆಯದೇ ರಾಜಕೀಯ ಸನ್ನಿವೇಶ ಮನೆ ಮಾಡಿದೆ.
ರಾಜಕೀಯ ಇತಿಹಾಸದಲ್ಲಿ ಬಾಗಲಕೋಟೆ ಜಿಲ್ಲೆ ಮಹತ್ತರ ಪಾತ್ರ ವಹಿಸಿದೆ. ಬಿಜೆಪಿಯ ಭದ್ರಕೋಟೆಯಾಗಿರುವ ಬಾಗಲಕೋಟೆ ಮತ ಕ್ಷೇತ್ರ ಇಂದು ನಿಜಕ್ಕೂ ಬಿಜೆಪಿಗರಿಗೆ ಮಾಡು ಇಲ್ಲವೇ ಮಡಿ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಣ್ಣ-ತಮ್ಮನ ನಡುವೆ ನೇರ ಹಣಾಹಣಿ
ಬಾಗಲಕೋಟೆ ಮತ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಅವರ ತಮ್ಮ ಮಲ್ಲಿಕಾರ್ಜುನ ಚರಂತಿಮಠ ನಡುವೆ ಸುಮಾರು ದಿನಗಳಿಂದ ಮುಸುಕಿನ ಗುದ್ದಾಟ ನಡೆದಿತ್ತು. ಈಗ್ಗೆ ಹಲವು ತಿಂಗಳು ಹಿಂದೆ ಪಕ್ಷ ವಿರೋಧಿ ಚಟುವಟಿಕೆಯ ನೆಪ ಒಡ್ಡಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.
ಆದರೆ ಈಗ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಇದರಿಂದ ಲಿಂಗಾಯತ ಮತಗಳ ಒಡೆಯುವ ಸಂಭವ ಹೆಚ್ಚಾಗಿದೆ.
ಆಡಳಿತ ವಿರೋಧಿ ಅಲೆ?!
ಕ್ಷೇತ್ರದ ಗ್ರಾಮೀಣ ಭಾಗದ ಜನರು ಆಡಳಿತ ವಿರುದ್ಧ ಧ್ವನಿ ಎತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಮತದಾನದ ಮೇಲೆ ಪರಿಣಾಮ ಬೀಳಲಿದೆ ಎಂದು ಕಾದು ನೋಡಬೇಕಿದೆ.
ಸಂತ್ರಸ್ತರ ಆಕ್ರೋಶ:
ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ತಮ್ಮ ಮನೆ, ಜಮೀನನ್ನು ಕಳೆದುಕೊಂದ ಜನರಿಗೆ ಸರ್ಕಾರದಿಂದ ಪರಿಹಾರ ರೂಪದಲ್ಲಿ ಕೊಡುವ ನೀವೇಶನದ ಹಕ್ಕು ಪತ್ರ ಕೊಡಲು ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಲಂಚದ ಹೊಳೆ ಹರಿಸಬೇಕಿದೆ. ಇದು ಸಂತ್ರಸ್ತರನ್ನು ಸಾಕಷ್ಟು ಹೈರಾಣಾಗಿಸಿದೆ.
ಗೆಲ್ಲಬಹುದೇ ಅಭಿವೃದ್ಧಿ ಮಂತ್ರ:
ಕ್ಷೇತ್ರದಲ್ಲಿ ಆದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಜನ ಮೆಚ್ಚಿ ಬಿಜೆಪಿಗೆ ಮತ ಹಾಕಿದರೆ ಪಕ್ಷ ಸಲೀಸಾಗಿ ಗೆಲುವು ಸಾಧಿಸಬಹುದು.
ಇಬ್ಬರ ಜಗಳ ಇನ್ನೊಬ್ಬರಿಗೆ ಲಾಭ:
ಅಣ್ಣ ತಮ್ಮರ ನಡುವೆ ಜಾತಿ ಮತಗಳು ಒಡೆದರೆ ನೇರವಾಗಿ ಕಾಂಗ್ರೆಸ್ ಗೆ ಲಾಭವಾಗಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ.
ಕೈ ಗೆ ಡಾಕ್ಟರ್ ಬಿಸಿ:
2018ರಲ್ಲಿ ಬಾದಾಮಿ ಕ್ಷೇತ್ರದ ಟಿಕೆಟನ್ನು ಸಿದ್ದರಾಮಯ್ಯ ಬಿಟ್ಟುಕೊಟ್ಟ ಡಾ. ದೇವರಾಜ್ ಪಾಟೀಲ್ ಈ ಸಲ ಬಾಗಲಕೋಟೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಮಾಜಿ ಸಚಿವ ಎಚ್. ವೈ. ಮೇಟಿಯವರನ್ನು ಕಣಕ್ಕಿಳಿಸಿದ್ದು ಸಹಿಸದೇ ಜೆಡಿಎಸ್ ಗೆ ಹೋದ ಅವರಿಂದ ಕುರುಬ ಸಮಾಜದ ವೋಟ್ ಗಳ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆ ಇಲ್ಲಿ ಕಾಡುತ್ತಿದೆ.