ಇರುಳು-ತಾರೆಗಳಂತೆ ಬೆಳಕೊಂದು ಮಿನುಗುವದು
ಕಳೆದ ದುಃಖಗಳಲ್ಲಿ ನೆನೆದಂತೆಯೆ
ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ
ಹೊಸವಾಗಿ ರಸವಾಗಿ ಹರಿಯುತಿವೆ
ಕತೆ ಮತ್ತು ವ್ಯಾಖ್ಯಾನ ಎರಡೂ ನೆನಪಿನಲ್ಲಿ ಬೇರು ಬಿಟ್ಟ ಸಂಗತಿಗಳಲ್ಲವೆ? ಆ ನೆನಪು ಸಾವಿರ, ಲಕ್ಷ ಇದ್ದರೂ ಇರುಳು-ರೆಗಳಂತೆ, ನೆನಪಿನ ಬೆಳಕು ಮಾತ್ರ ಒಂದೇ, ಲಕ್ಷ ನಕ್ಷತ್ರಗಳ ಮಬ್ಬು ಬೆಳಕೆಲ್ಲ ಒಂದೇ ಇರುವಂತೆ. ದುಃಖ ಈಗ ಕಳೆದುಹೋಗಿದೆ. ಆದರೂ ಈಗ ಅವನ್ನೆಲ್ಲ ನೆನೆದಂತೆಯೇ ಪಟ್ಟ ಪಾಡು, ದುಃಖದ ಸ್ಥಿತಿ, ಇದೇ ಈಗ ಹುಟ್ಟಿದ ಹೊಸ ಕೂಸಿನಂಥ, ಹುಟ್ಟು-ಹಾಡಾಗಿ, (ಹುಟ್ಟುವ ಹಾಡು, ನನ್ನನ್ನು ಹುಟ್ಟಿಸುವ ಹಾಡು, ನೆನಪಿನಲ್ಲಿ ದುಃಖ ರಸವಾಗಿ ಹುಟ್ಟುವ ಹಾಡು, ಹಳೆಯದೆಲ್ಲ ಹೊಸದಾಗುವ ಹಾಡು…) ರಸವಾಗಿ ಹರಿಯುತಿದೆ.
3
ಗಂಗೆ ಸಾಗರಬಿದ್ದು ಸಾಗರವನಪ್ಪುತ
ಅರೆಬೆರೆತ ನೆರೆಬೆರೆತ ತಾಣದೊಲು
ಸುಖದುಃಖ ಸಂಗಮವಾದ ಹೃದ್ರಂಗವು
ಪಾವನವೆಂಬೆನು ಯಾವಾಗಲು
ಹಿಂದಿನ ನುಡಿಯಲ್ಲಿ “ಹರಿ” ಎಂಬ ಮಾತು ನದಿ ಮತ್ತು ಸಮುದ್ರಗಳ ಸಂಗಮದ ರೂಪಕವನ್ನು ಹುಟ್ಟಿಸಿದೆ. ನೆನಪು ನದಿ ಜೀವನ ಸಮುದ್ರವನ್ನು ಬೆರೆಯುವ ಚಿತ್ರ ಮೂಡಿದೆ. ನೆನಪು ವ್ಯಕ್ತಿಯದು, ಸಮುದ್ರ ಅಸಂಖ್ಯ ಜೀವರಾಶಿಯ, ಬಿಡಿನೆನಪುಗಳೆಲ್ಲ ಇಲ್ಲವಾಗಿರುವ, ಹಾಗೆಯೇ ನದಿಯಮೂಲವೂ ಅಗಿರುವ ಕಲ್ಪನೆ. ನದಿ ಕಡಲುಗಳ ಸಂಗಮ ವಾಸ್ತವವಾಗಿರುವಂತೆಯೇ ನೆನಪುಗಳೆಲ್ಲ ಹುಟ್ಟಿ ಲಯವಾಗುವ ಹೃದಯದ ರೂಪಕವೂ ಆಗಿದೆ. ಸುಖ ದುಃಖಗಳ ಸಂಗಮವಾಗಿರುವ ಹೃದಯ-ರಂಗ ಸದಾ ಪಾವನ, ಸದಾ ಪವಿತ್ರ. ಸಮುದ್ರ ನದಿಗಳ ಮಿಲನವಾದ್ದರಿಂದಲೇ ಕಟು-ಮಧುರ. ನದಿಗೆ ಕಡಲನ್ನು ಸೇರುವ ತವಕ. ಅದಕ್ಕೇ ಸಾಗರಬೀಳುತ್ತಿದೆ. ಸಾಗರಕ್ಕೆ ಬೀಳುತ್ತಿದೆ, ಆರ್ಭಟಿಸಿ, ಮೊರೆದು, ಧಾವಂತಪಟ್ಟು, ಸೇರುತ್ತಿದೆ. ನದಿ ಕಡಲು ಸೇರುವ ಜಾಗವಿದೆಯಲ್ಲ ಅಲ್ಲಿ ಅಷ್ಟಿಷ್ಟು ಬೆರೆತು, ಎರಡು ಪ್ರವಾಹದಾತುರಗಳೂ ಸೇರಿ, ಸಮುದ್ರ ನದಿಯನ್ನು ಹಿಂದೆ ನೂಕುತ್ತ, ನದಿ ಕಡಲೊಳಕ್ಕೆ ಧುಮ್ಮಿಕ್ಕುತ್ತ, ಪ್ರವಾಹ (ನೆರೆ) ಸಂಧಿ ಇದೆಯಲ್ಲ, ಅದು ಇರುವುದು ಹೃದಯದಲ್ಲೆ. ಹಿರಿದು ಕಿರಿದು, ಸುಖ ದುಃಖಗಳು ಕೂಡುವ ಈ ತಾಣ ಸದಾ ಪವಿತ್ರವೇ
4
ಬಾ ಅಲ್ಲಿ ಕಡಲಲ್ಲಿ ತೆರೆ ತೆರೆಯನೊಡೆವಲ್ಲಿ
ನೀರ್ ಬುರುಗು ಬಿಡುವಲ್ಲಿ ಮೀಯೋಣ ಬಾ
ತೆಪ್ಪವೊ ತಾರಿಯೊ ಹರಗೋಲೊ ಹಡಗವೊ
ತೆರೆ-ತೊಡೆ-ತೊಟ್ಟಿಲನೇರೋಣ ಬಾ
ಕಡಲ ತೆರೆ ನದಿಯ ತೆರೆಯನ್ನು, ನದಿಯ ತೆರೆ ಕಡಲ ತೆರೆಯನ್ನು ಒಡೆಯುತ್ತ, ಸೇರುತ್ತ, ನೊರೆಗರೆಯುತ್ತ ಇರುವಲ್ಲಿ ಮೀಯೋಣ. ಆದರೆ ನದಿ ಕಡಲು ಸೇರುವ ಬಿಂದು ಮುಟ್ಟುವುದಕ್ಕೆ ಸಹಾಯವೊಂದು ಬೇಕು. ತೆಪ್ಪವೊ, ದೋಣಿಯೊ, ಹಡಗೋ ಏನಾದರೊಂದು. ವ್ಯಕ್ತಿ ಎಂಬ ನದಿ, ಬಾಳು ಎಂಬ ಕಡಲು ಸಂಧಿಸುವ ಹೃದ್ರಂಗದ ಸ್ಥಾನಕ್ಕೆ ತಲುಪಲು ಕರುಳ ತೊಡಕನ್ನೆ ಕುಸುರಿಯಾಗಿ, ಕಲೆಯಾಗಿ, ಕಥೆಯಾಗಿ ಬಿಡಿಸಿಟ್ಟ ವ್ಯಾಖ್ಯಾನವೇ ಅಂಥ ತೆಪ್ಪ. ಈ ತಾಣವೋ ತೆರೆ ಎಂಬ ತೊಡೆ ತೊಟ್ಟಿಲು. ಕರುಳ ತೊಡಕನ್ನು ಕಥೆ ಮಾಡಿಕೊಳ್ಳುವುದು ಸುಲಭವೇ? ತೆರೆದುಕೊಳ್ಳಬೇಕು, ಸಂಕೋಚ ನಾಚಿಕೆಗಳು ಇಲ್ಲದಂತೆ. ಆಗ ಹೃದ್ರಂಗದ ತರಂಗ ತೊಡೆಯಾಗಿ ಕಾಪಾಡೀತು, ತೊಟ್ಟಿಲಾಗಿ ಸಲಹೀತು. ತೆರೆಯಲ್ಲೂ ತೊಟ್ಟಿಲಲ್ಲೂ ಒಂದಿಷ್ಟಾದರೂ ತೊನೆದಾಟ ಇದ್ದೇ ಇರುತ್ತದಲ್ಲ! ಆದರೆ ಅದು ಸಹನೀಯ. ಪಟ್ಟಪಾಡೆಲ್ಲ ಹೊಸ ಹಾಡಾಗಿ ಹುಟ್ಟು ಪಡೆಯುವುದೆಂದರೆ ಹೇಳಿಕೊಳ್ಳುವ ಮೂಲಕವೇ ಮತ್ತೆ ಮಗುವಾಗುವುದೂ ಇದ್ದೀತು. ಕಥೆ ಅಥವ ಹಾಡಿನ ಕಲೆ ಮತ್ತೆ ಮಗುವಾಗುವುದನ್ನು ಕಲಿಸಬೇಕಲ್ಲವೆ. ಹೃದ್ರಂಗದಲ್ಲಿ ಮಕ್ಕಳಾಗಿ ಮತ್ತೆ ಶಕ್ತಿ ಪಡೆಯಬೇಕು. ಯಾಕೆಂದು ಮುಂದಿನ ಪದ್ಯ.