ಕೇರಳಕ್ಕೆ ಮುಂಗಾರು ಮಳೆ ಆಗಮನವಾಗಿದ್ದು, ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ ವ್ಯಾಪಕವಾಗಿ ಮಳೆಯಾಗಿದೆ .ಇನ್ನೂ 48 ಗಂಟೆಗಳಲ್ಲಿ ಕರ್ನಾಟಕಕ್ಕೂ ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.
ಒಂದು ವಾರ ತಡವಾಗಿ ಕೇರಳದಲ್ಲಿ ಮುಂಗಾರು ಮಳೆ ಶುರುವಾಗಿದ್ದು, ಅರಬ್ಬಿ ಸಮುದ್ರದಲ್ಲಿ ಮೋಡ ಕವಿದ ವಾತಾವರಣ ಇದೆ. ಅದಲ್ಲದೇ ಕೆಳಮಟ್ಟದಲ್ಲಿರುವ ಪಶ್ಚಿಮ ಮಾರುತಗಳ ಬಲವು ಹೆಚ್ಚಿದೆ. ಈ ಅಂಶಗಳು ಮಾನ್ಸೂನ್ ಆರಂಭದ ಸೂಚನೆಯನ್ನು ನೀಡಿವೆ. ಗುರುವಾರ ಮುಂಗಾರು ಆರಂಭವಾಗಿದ್ದರೂ ಕನಿಷ್ಠ ಒಂದು ವಾರದವರೆಗೆ ದುರ್ಬಲವಾಗಿ ಉಳಿಯುವ ನಿರೀಕ್ಷೆಯಿದೆ.
ಹೆಚ್ಚಾಗಿ ನೈರುತ್ಯ ಮುಂಗಾರು ಜೂನ್ 1 ರಂದು ಪ್ರಾರಂಭವಾಗುತ್ತದೆ. ಪ್ರತಿ ವರ್ಷ ಮೂರ್ನಾಲ್ಕು ದಿನ ವ್ಯತ್ಯಾಸ ಕಂಡುಬರುತ್ತದೆ. ಈ ವರ್ಷ ಜೂನ್ 4ರಂದು ಕೇರಳಕ್ಕೆ ಮುಂಗಾರು ಆಗಮಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿತ್ತು. ಆದರೆ, ಈ ಬಾರಿ 5 ದಿನ ತಡವಾಗಿ ಮುಂಗಾರು ಕೇರಳವನ್ನು ಪ್ರವೇಶಿಸಿದೆ.
ಮುಂದಿನ 24 ಗಂಟೆಗಳಲ್ಲಿ ಕೇರಳದಲ್ಲಿ ಮಾನ್ಸೂನ್ ಸಕ್ರಿಯವಾಗಲಿದೆ. ಇದರ ನಂತರ, ತಮಿಳುನಾಡು, ಕರ್ನಾಟಕ, ಈಶಾನ್ಯ ಮತ್ತು ನೈಋತ್ಯ ಭಾರತದಲ್ಲಿ ಮುಂಗಾರು ಮಳೆ ಗೋಚರಿಸಲಿದೆ. ಅದರ ನಂತರ ಅದು ಕ್ರಮೇಣ ಬಿಹಾರ, ದೆಹಲಿ, ರಾಜಸ್ಥಾನ, ಜಾರ್ಖಂಡ್, ಪಂಜಾಬ್ ಮತ್ತು ಹರಿಯಾಣವನ್ನು ತಲುಪಲಿದೆ.
ಇದೀಗ ಮುಂಗಾರು ಒಂದು ವಾರ ತಡವಾಗಿದ್ದರೂ ಕೂಡ ಬಿಪರ್ಜಾಯ್ ಚಂಡಮಾರುತದಿಂದಾಗಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಮಳೆಯ ಪ್ರಭಾವ ಹೆಚ್ಚಾಗಿರುವುದರಿಂದ ಈಗಾಗಲೇ ಕರ್ನಾಟಕ ಕರಾವಳಿ ಪ್ರದೇಶಗಳ ಜಿಲ್ಲಾಡಳಿತ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡು ಜನರಿಗೆ ಸೂಚನೆಗಳನ್ನು ನೀಡಿದೆ.
ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 35-45 ಕಿ.ಮೀ ಇಂದ 55 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.