ವಿವಾದಗಳ ನಡುವೆಯೂ ದಿ ಕೇರಳ ಸ್ಟೋರಿ ಚಲನಚಿತ್ರ ಅದ್ಭುತ ಯಶಸ್ಸನ್ನು ಕಂಡಿದೆ. ಇದರೊಂದಿಗೆ ಸಾಮಾಜಿಕ ತಾಣದಲ್ಲಿ ಕೂಡ ಧರ್ಮ, ಜಾತೀಯತೆಗೆ ಸಂಬಂಧಿಸಿದ ಘಟನೆಗಳು, ಸನ್ನಿವೇಶಗಳನ್ನು ಬಳಕೆದಾರರು ಪೋಸ್ಟ್ ಮಾಡುತ್ತಿದ್ದಾರೆ. ಖ್ಯಾತ ಹಾಡುಗಾರ ಹಾಗೂ ಸಂಗೀತ ನಿರ್ದೇಶಕರಾದ ಎ.ಆರ್ ರೆಹಮಾನ್ ಮಸೀದಿಯಲ್ಲಿ ನಡೆದ ಹಿಂದೂ ವಿವಾಹದ ವಿಡಿಯೋವನ್ನು ಕೆಲವು ದಿನಗಳ ಹಿಂದೆಯೇ ಹಂಚಿಕೊಂಡಿದ್ದರು. ಅದಕ್ಕೆ ಸಂಬಂಧಪಟ್ಟ ಇನ್ನೊಂದು ಸಿನಿಮಾ, ಇದು ಕೇರಳ ಕಥೆಯಾಗಿದ್ದು ಅದರ ಟೈಟಲ್ ಎನ್ನುಮ್ ಸ್ವಂತಂ ಶ್ರೀಧರನ್.
ಕೇರಳ ಸ್ಟೋರಿ ಚಿತ್ರಕ್ಕಿಂತ ಭಿನ್ನವಾಗಿರುವ ಎನ್ನುಮ್ ಸ್ವಂತಂ ಶ್ರೀಧರನ್ ಎಂಬ ಮಲಯಾಳ ಚಿತ್ರವನ್ನು ರಿಲೀಸ್ ಮಾಡುವ ಮೂಲಕ ಇನ್ನೊಂದು ಕೇರಳ ಸ್ಟೋರಿಗೆ ಮುನ್ನಡಿ ಬರೆದಿದ್ದಾರೆ.
ದಿ ಕೇರಳ ಸ್ಟೋರಿಗಿಂತಲೂ ತುಸು ಭಿನ್ನವಾಗಿರುವ ಚಿತ್ರವು ನಿಜವಾದ ಕಥೆಯನ್ನಾಧರಿಸಿದೆ. ಮಲಪ್ಪುರಮ್ ನಿವಾಸಿ ಮುಸ್ಲಿಂ ಮಹಿಳೆ ಜುಬೈದಾ ತಮ್ಮ ಮನೆಗೆಲಸದ ಚಾಕಿ ಎಂಬ ಹಿಂದೂ ಮಹಿಳೆಯ ಮಕ್ಕಳನ್ನು ಚಾಕಿಯ ಮರಣದ ನಂತರ ತನ್ನದೇ ಮಕ್ಕಳಂತೆ ಬೆಳೆಸುವ ಕಥೆಯಾಗಿದೆ. ಜುಬೈದಾ ಸಾಕಿ ಸಲಹಿದ್ದು ಚಾಕಿಯ ಮಕ್ಕಳನ್ನಾದರೂ ಆಕೆ ಮುಸ್ಲಿಂ ಧರ್ಮದ ಆಚಾರ ವಿಚಾರಗಳನ್ನು ಮಕ್ಕಳಿಗೆ ಹೇರಲಿಲ್ಲ ಅಂತೆಯೇ ಹಿಂದೂ ಪದ್ಧತಿಯಲ್ಲಿಯೇ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿಸಿದ್ದಾರೆ ಎಂಬುದು ಇಲ್ಲಿರುವ ಮಹತ್ವದ ಅಂಶವಾಗಿದೆ. ಜಾತಿ ಧರ್ಮದ ಬಂಧನಗಳನ್ನು ಮೀರಿದ ಮಾನವೀಯತೆ ಎಂದು ಈ ಸಿನಿಮಾದ ಕಥೆ ಕೇಳಿದ ಮೇಲೆ ಗೊತ್ತಾಗುವಂಥದ್ದಾಗಿದೆ.
ಪತಿಯಿಂದ ಬೇರ್ಪಟ್ಟ ಚಾಕಿ, ಜುಬೇದಾ ಬಳಿ ಮನೆಗೆಲಸ ಮಾಡಿಕೊಂಡಿರುತ್ತಾರೆ ಹಾಗೂ ಅವರೊಂದಿಗೆ ಚಾಕಿಯ ಮಕ್ಕಳು ಕೂಡ ಇರುತ್ತಾರೆ. ಧರ್ಮ, ಜಾತಿಯ ಕಟ್ಟುಪಾಡುಗಳನ್ನು ಮೀರಿ ಚಾಕಿ ಹಾಗೂ ಜುಬೈದಾ ಒಂದೇ ಮನೆಯಲ್ಲಿ ವಾಸಿಸುತ್ತಾರೆ.
2019 ರಲ್ಲಿ ಜುಬೈದಾ ಮರಣ ಹೊಂದಿದಾಗ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಮಸ್ಕತ್ನಲ್ಲಿ ಉದ್ಯೋಗದಲ್ಲಿದ್ದ ಸಾಕು ಮಗ ಶ್ರೀಧರ್ ಫೇಸ್ಬುಕ್ನಲ್ಲಿ ಮನಕಲಕುವ ಪೋಸ್ಟ್ ಒಂದನ್ನು ಹಾಕುತ್ತಾರೆ.
ಬಹುಶಃ ಈ ಪೋಸ್ಟ್ನಿಂದಲೇ ಜುಬೈದಾ ಹಾಗೂ ಅವರ ಸಾಕು ಮಕ್ಕಳ ಬಗ್ಗೆ ಮಾಹಿತಿ ದೊರೆಯುತ್ತದೆ. ಶ್ರೀಧರ್ ಗೆ ಜುಬೈದಾರ ಸಾಕು ತಾಯಿಯಾಗಿದ್ದರೂ ತಮ್ಮ ಸ್ವಂತ ಅಮ್ಮನೇ ಎಂದು ಅವರು ಉಲ್ಲೇಖಿಸಿದ್ದಾರೆ.
ಚಿತ್ರ ನಿರ್ಮಾಪಕ ಸಿದ್ಧಿಕ್ ಪರವೂರ್ ಜುಬೈದಾ ಹಾಗೂ ಮಕ್ಕಳನ್ನು ಕುರಿತು ಚಿತ್ರ ನಿರ್ಮಿಸಲು ಮುಂದಾದಾಗ ಅವರನ್ನು ಭೇಟಿಯಾಗಲು ಮಲಪ್ಪುರಮ್ಗೆ ತೆರಳಿದ್ದರಂತೆ. ಅವರು ಮಾಡಿರುವ ಕಾರ್ಯ ಧರ್ಮವನ್ನು ಮೀರಿದ ಮಾನವೀಯತೆಯ ದ್ಯೋತಕವಾಗಿತ್ತು ಎಂದು ಶ್ರೀಧರ್ ತಿಳಿಸುತ್ತಾರೆ. ಜುಬೈದಾ ಸಂಪೂರ್ಣ ಗ್ರಾಮದಲ್ಲಿಯೇ ಅಮ್ಮ ಎಂದೇ ಕರೆಯಿಸಿಕೊಳ್ಳುತ್ತಿದ್ದರು. ಸ್ಥಳೀಯ ಚರ್ಚ್ ಕೂಡ ಅವರ ಮರಣದ ಪ್ರಾರ್ಥನಾ ಸಭೆಯನ್ನು ಆಯೋಜಿಸುವಷ್ಟರ ಮಟ್ಟಿಗೆ ಜುಬೈದಾ ತಮ್ಮೂರಿನಲ್ಲಿ ಪ್ರೀತಿ ಪಾತ್ರರಾಗಿದ್ದರು.
ಪರವೂರ್ ತಮ್ಮ ಚಿತ್ರವನ್ನು ಸ್ಥಳೀಯ ನಂಬೂದರಿ ಬ್ರಾಹ್ಮಣರ ನಿವಾಸದಲ್ಲಿ ಚಿತ್ರೀಕರಿಸಿದ್ದು ಇದಕ್ಕೆ ಕಾರಣ ಜುಬೈದಾ ಮತ್ತು ಅವರ ಪತಿ ಹಾಜಿ ಅಬ್ದುಲ್ ಅಜೀಜ್ ಊರಿನಲ್ಲಿ ಗಳಿಸಿದ್ದ ಒಲವು ಹಾಗೂ ಪ್ರೀತಿಯಾಗಿತ್ತು ಎಂದು ಶ್ರೀಧರ್ ತಿಳಿಸುತ್ತಾರೆ.
ಸಿದ್ಧಿಕ್ ಹಾಗೂ ಚಿತ್ರ ತಂಡಕ್ಕೆ ಸಂಪೂರ್ಣ ಊಟೋಪಚಾರದ ವ್ಯವಸ್ಥೆಯನ್ನು ಈ ಬ್ರಾಹ್ಮಣರು ಏರ್ಪಡಿಸಿದ್ದರು ಎಂಬುದಾಗಿ ಸಿದ್ಧಿಕ್ ತಿಳಿಸುತ್ತಾರೆ. ಜುಬೈದಾರ ಮರಣದ ನಂತರವೂ ಆಕೆ ಊರಿನಲ್ಲಿ ಗಳಿಸಿಕೊಂಡಿದ್ದ ಆದರ, ಪ್ರೀತಿ, ಒಲವು ಇದರಿಂದಲೇ ತಿಳಿಯುತ್ತದೆ ಎಂಬುದು ಸಿದ್ಧಿಕ್ ಮಾತಾಗಿದೆ. ಒಬ್ಬರನ್ನೊಬ್ಬರು ಸಹೋದರ ಸಹೋದರಿಯರಂತೆ ಕಾಣುತ್ತಿದ್ದರು ಎಂಬುದಾಗಿ ಸಿದ್ಧಿಕ್ ಉಲ್ಲೇಖಿಸಿದ್ದಾರೆ.
ಕುಟುಂಬವು ಮೂರು ಮುಸ್ಲಿಂ ಮತ್ತು ಮೂರು ಹಿಂದೂ ವಿವಾಹಗಳನ್ನು ನೆರವೇರಿಸಿದೆ ಎಂಬುದು ಪರವೂರ್ ತಿಳಿಸಿದ್ದಾರೆ. ಸೊಸೆಯಂದಿರು ಮತ್ತು ಅಳಿಯಂದಿರು ಸಹ ಅದೇ ಸಹೋದರತ್ವದ ಭಾವನೆಯಲ್ಲಿ ಒಟ್ಟಾಗಿದ್ದಾರೆ ಹಾಗೂ ಧಾರ್ಮಿಕ ಹಬ್ಬಗಳನ್ನು ಆಚರಿಸುತ್ತಾರೆ ಎಂಬುದು ಪರವೂರ್ ಹೇಳಿಕೆಯಾಗಿದೆ.
ಸದ್ಯದಲ್ಲಿಯೇ ಚಿತ್ರ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಸಿದ್ಧಿಕ್ ಪರವೂರ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರವಾದ ಎನ್ನು ಸ್ವಂತಂ ಶ್ರೀಧರನ್ನಲ್ಲಿ ನಿರ್ಮಲಾ ಕಣ್ಣನ್ ಜುಬೇದಾ ಮತ್ತು ಸುರೇಶ್ ನೆಲ್ಲಿಕೋಡ್, ನಿಲಂಬೂರ್ ಆಯಿಷಾ ಈ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ.