ಟ್ರೇಲರ್ನಿಂದಲೇ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ದಿ ಕೇರಳ ಸ್ಟೋರಿ ಸಿನಿಮಾ ನಾಳೆ ದೇಶದಾದ್ಯಂತ ರಿಲೀಸ್ ಆಗುತ್ತಿದೆ. ಈ ಸಿನಿಮಾ ಕುರಿತಂತೆ ಹಲವು ಆರೋಪಗಳು ಕೇಳಿ ಬಂದಿದ್ದವು. ಒಂದು ಧರ್ಮಕ್ಕೆ ಅಪಮಾನ ಮಾಡುವಂತಹ ಹಾಗೂ ಆಕ್ಷೇಪಾರ್ಹ ಹಲವು ವಿಚಾರಗಳು ಈ ಸಿನಿಮಾದಲ್ಲಿ ಇರುವುದರಿಂದ ಚಿತ್ರವನ್ನು ನಿಷೇಧಿಸಬೇಕು ಎನ್ನುವ ಕೂಗು ಕೇಳಿ ಬಂದಿತ್ತು.
ವಿವಾದಕ್ಕೆ ಕಾರಣವಾಗುವಂತಹ ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯು ಸಿನಿಮಾದ 10 ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿದೆ. ಅಲ್ಲದೇ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ನೀಡಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನ, ಕೆಲ ಸಂಭಾಷಣೆಗಳು ಹಾಗೂ ಕಮ್ಯುನಿಸ್ಟ್ ಪಕ್ಷದವರ ಬಗ್ಗೆ ಆಡಿದ ಮಾತುಗಳಿಗೆ ಸೆನ್ಸಾರ್ ಮಂಡಳಿಯು ತೆಗೆದುಹಾಕಿದೆ.
ದಿ ಕೇರಳ ಸ್ಟೋರಿ ಸಿನಿಮಾದಲ್ಲಿ 32 ಸಾವಿರ ಹಿಂದೂ ಹೆಣ್ಣು ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡಿ ಮದುವೆ ಮಾಡಿರುವ ಬಗ್ಗೆ ತೋರಿಸಲಾಗಿದೆ. ಅಲ್ಲದೇ ಅಂಥ ಹೆಣ್ಣು ಮಕ್ಕಳನ್ನು ಐಸಿಸ್ ಉಗ್ರ ಸಂಘಟನೆಗೆ ಸೇರಿಸಲಾಗಿದೆ ಎಂದು ತೋರಿಸಲಾಗಿದೆ.
ಅಲ್ಪಸಂಖ್ಯಾತ ಸಮುದಾಯವನ್ನು ಗುರಿ ಮಾಡಿಕೊಂಡು ಸುಳ್ಳು ಕಥೆ ಮೇಲೆ ಸಿನಿಮಾ ಮಾಡಲಾಗಿದೆ ಎಂದು ಕೆಲವರು ಈ ಸಿನಿಮಾ ಪ್ರದರ್ಶನಕ್ಕೆ ತಡೆಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಿದ್ದರು. ಆದರೆ, ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ನಿರಾಕರಿಸಿತ್ತು. ಹೈಕೋರ್ಟ್ ಗೆ ಹೋಗಲು ಸೂಚನೆ ನೀಡಿತ್ತು.
ಇನ್ನೂ ಮುಂದುವರೆದು ಕೇರಳ ಮುಸ್ಲೀಂ ಲೀಗ್ ಯುವ ಸಮಿತಿ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಹೇಳಲಾಗಿರುವ 32 ಸಾವಿರ ಹಿಂದೂ ಹುಡುಗಿಯರನ್ನು ಇಸ್ಲಾಂಗೆ ಮತಾಂತರ ಮಡಲಾಗಿದೆ. ಬಳಿಕ ಐಸಿಸ್ ಸಂಘಟನೆ ಸೇರಿಸಲಾಗಿದೆ ಎಂಬ ಅಂಶವನ್ನು ಸಾಬೀತು ಮಾಡಿದರೆ 1 ಕೋಟಿ ರೂ. ಬಹುಮಾನ ಕೊಡುವುದಾಗಿ ಘೋಷಣೆ ಮಾಡಿದೆ.
ಸಿನಿಮಾದಲ್ಲಿ ಯಾವುದೇ ಸಮುದಾಯವನ್ನು ಟಾರ್ಗೆಟ್ ಮಾಡಿಲ್ಲ. ಮುಸ್ಲಿಮರನ್ನು ಗುರಿ ಮಾಡಿಕೊಂಡು ಸಿನಿಮಾ ಮಾಡಿಲ್ಲ. ಕೇರಳ ಬಗ್ಗೆ ಅವಹೇಳನ ಮಾಡಿಲ್ಲ ಭಯೋತ್ಪಾದನೆ ಹೇಗೆ ನಮ್ಮ ಯುವ ಜನರನ್ನು ದಾರಿ ತಪ್ಪಿಸುತ್ತಿದೆ. ಹೇಗೆಲ್ಲಾ ಯುವ ಜನರ ಬ್ರೈನ್ ವಾಶ್ ಮಾಡಿ ಉಗ್ರರನ್ನಾಗಿ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳನ್ನು ಹೇಗೆಲ್ಲಾ ಬಳಸಿಕೊಳ್ಳಲಾಗಿದೆ ಎಂಬುದನ್ನು ಮಾತ್ರ ಸಿನಿಮಾದಲ್ಲಿ ತೋರಿಸಲಾಗಿದೆ. ಎಂದು ‘ದಿ ಕೇರಳ ಸ್ಟೋರಿ’ ಚಿತ್ರ ತಂಡ ಸ್ಪಷ್ಟನೆ ನೀಡಿದೆ.
ಬಾಲಿವುಡ್ ನಟಿ ಆದಾ ಶರ್ಮಾ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಸುದೀಪ್ತೋ ಸೇನ್ ಅವರು ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ.