ಕರ್ನಾಟಕದಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲವೊಂದು ರಾಜಕೀಯ ಬೆಳವಣಿಗೆಗಳು ಸಂಭವಿಸುತ್ತಿವೆ. ಅವುಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿಯೂ ಒಂದು ಮಹತ್ವದ ಬೆಳವಣಿಗೆಯೇ ಸರಿ. ಈಚೆಗಷ್ಟೇ ದಿಲ್ಲಿಯಲ್ಲಿ ಜೆಡಿಎಸ್ ಎನ್ ಡಿ ಎ ಕೂಟದ ಸದಸ್ಯತ್ವವನ್ನು ಪಡೆದುಕೊಂಡಿದೆ ಮತ್ತು ರಾಜ್ಯದಲ್ಲಿ ಲೋಕಸಭೆಗಾಗಿ ಸ್ಥಾನಗಳ ಹೊಂದಾಣಿಕೆ ವಿಷಯವನ್ನು ನಿರ್ಧರಿಸಲಿವೆ. ಇದು ಕರ್ನಾಟಕದ ರಾಜಕೀಯದಲ್ಲಿ ಸಂಚಲನವನ್ನುಂಟುಮಾಡಿದ್ದು ಸಹಜ. ಗ್ಯಾರಂಟಿಗಳ ಮೂಲಕ ರಾಜ್ಯದಲ್ಲಿ ಅಧಿಕಾರ ಸೂತ್ರವನ್ನು ಕೈಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನಗಳನ್ನು ಪಡೆಯುವ ತಂತ್ರಗಳನ್ನು ರೂಪಿಸುತ್ತಿದೆ. ಕಾಂಗ್ರೆಸ್ಸಿನ ತಂತ್ರವನ್ನು ವಿಫಲಗೊಳಿಸಲು ಬಿಜೆಪಿ – ಜೆಡಿಎಸ್ ಮೈತ್ರಿ ಕೂಟ ಪ್ರತ್ಯಸ್ತ್ರ ಬಿಡಲು ಸಿದ್ಧವಾಗಿದೆ. ಆದರೆ ಈ ಹೊಂದಾಣಿಕೆ ಚುನಾವಣೆಯಲ್ಲಿ ಈ ಎರಡು ಪಕ್ಷಗಳಿಗೆ ಪ್ರಯೋಜನ ತಂದುಕೊಡಬಲ್ಲುದೇ ಮತ್ತು ಇದರಿಂದ ಯಾವ ಪಕ್ಷಕ್ಕೆ ಲಾಭವಾಗಲಿದೆ ಎನ್ನುವ ಚರ್ಚೆ ಸದ್ಯ ನಡೆದಿದೆ.
ವಾಸ್ತವ ಸ್ಥಿತಿಯತ್ತ ಕಣ್ಣು ಹರಿಸಿದಾಗ ಈಚೆಗೆ ಸಾಕಷ್ಟು ದುರ್ಬಲವಾಗಿದ್ದ ಜೆಡಿಎಸ್ ಪಕ್ಷಕ್ಕೆ ಈ ಮೈತ್ರಿ ಅನಿವಾರ್ಯವಿತ್ತು ಎನ್ನುವುದರಲ್ಲಿ ಸಂದೇಹವಿಲ್ಲ. ಹಲವರು ಈಗಾಗಲೇ ಜೆಡಿಎಸ್ ತ್ಯಜಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸಾಕಷ್ಟು ಹಿನ್ನಡೆಯಾಗಿದೆ. ಪ್ರಬಲವಾಗಿರುವ ಕಾಂಗ್ರೆಸ್ಸನ್ನು ಏಕಾಂಗಿಯಾಗಿ ಎದುರಿಸುವ ಶಕ್ತಿ ಜೆಡಿಎಸ್ ಪಕ್ಷಕ್ಕೆ ಈಗ ಇಲ್ಲ. ಆದ್ದರಿಂದ ಬಿಜೆಪಿಯನ್ನು ಆಧರಿಸಿ ಸಂಸತ್ ಚುನಾವಣೆಯಲ್ಲಿ ಒಕ್ಕಲಿಗರ ಪ್ರಾಬಲ್ಯವುಳ್ಳ ನಾಲ್ಕಾರು ಸ್ಥಳಗಳಲ್ಲಿ ಸ್ಪರ್ಧಿಸಿ ಆಯ್ಕೆಯಾಗುವ ಪ್ರಯತ್ನ ಮಾಡಲು ಜೆಡಿಎಸ್ ನಾಯಕರು ಯೋಚಿಸಿರುವುದರಲ್ಲಿ ತಪ್ಪಿಲ್ಲ.
ಇನ್ನು ಬಿಜೆಪಿ ಸಹ ಹಿಂದಿನಷ್ಟು ಪ್ರಬಲವಾಗಿ ಉಳಿದಿಲ್ಲ. ಹಿಂದಿನ ಚುನಾವಣೆಯಲ್ಲಿ ಉಂಟಾಗಿರುವ ಹಿನ್ನಡೆಯ ಆಘಾತದಿಂದ ಚೇತರಿಸಿಕೊಳ್ಳಲು ಇನ್ನೂ ಆ ಪಕ್ಷಕ್ಕೆ ಸಾಧ್ಯವಾಗಿಲ್ಲ. ಹೈಕಮಾಂಡ್ ಸಹ ರಾಜ್ಯ ಬಿಜೆಪಿ ನಾಯಕರ ಕುರಿತು ಅಸಮಾಧಾನದ ಮನಸ್ಥಿತಿಯಲ್ಲಿದೆ. ಇನ್ನೂ ಪಕ್ಷದ ಹೊಸ ರಾಜ್ಯಾಧ್ಯಕ್ಷರನ್ನಾಗಲಿ ಸದನ ನಾಯಕರನ್ನಾಗಲೀ ಆಯ್ಕೆ ಮಾಡಿಲ್ಲ. ಆದ್ದರಿಂದಲೇ ಬಿಜೆಪಿ- ಜೆಡಿಎಸ್ ಮೈತ್ರಿ ವಿಷಯದಲ್ಲೂ ರಾಜ್ಯ ನಾಯಕರನ್ನು ದೂರದಲ್ಲಿಟ್ಟೇ ಹೈಕಮಾಂಡ್ ನಿರ್ಧಾರ ಕಯಕೊಂಡಿರುವುದು ಗಮನಿಸಬೇಕಾದ ವಿಚಾರ. ಲೋಕಸಭಾ ಚುನಾವಣೆಯಲ್ಲಿ ಎನ್. ಡಿ. ಎ. ಹೆಚ್ಚು ಸ್ಥಾನಗಳನ್ನು ಗಳಿಸಿ ಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ತರುವುದು ಬಿಜೆಪಿ ಕೇಂದ್ರ ನಾಯಕರ ಗುರಿ. ಅದಕ್ಕಾಗಿ ಜೆಡಿಎಸ್ ಮೈತ್ರಿಗೆ ಮುಂದಾಗಿದ್ದು. ಈ ಮೈತ್ರಿಯನ್ನು ರಾಜ್ಯದ ಮತದಾರರು ಯಾವ ರೀತಿ ಸ್ವಿಕರಿಸಲಿದ್ದಾರೆ ಮತ್ತು ಎಷ್ಟರಮಟ್ಟಿಗೆ ಪ್ರಯೋಜನವಾಗಲಿದೆ ಎನ್ನುವುದು ಕಾದು ನೋಡಬೇಕಾದ ವಿಷಯ