ಮನುಷ್ಯ ರೂಪದ ದೇವರೆಂದರೆ ಅದು ವೈದ್ಯ ಮಾತ್ರ. ಎಂತಹ ಕಠಿಣ ಸಮಯದಲ್ಲಿಯು ತನ್ನ ವೃತ್ತಿ, ಜವಾಬ್ದಾರಿಗೆ ದ್ರೋಹ ಬಗೆಯದೆ ನಿರಂತರವಾಗಿ ರೋಗಿಗಳ ಸೇವೆಗೆ ಸದಾ ಸಿದ್ದರಿರುವ ಜೀವ. ದೇಶದಲ್ಲಿ ನಿಸ್ವಾರ್ಥ ಸೇವೆ ಮಾಡುವ ವೈದ್ಯರ ಹೆಸರನ್ನು ಪಟ್ಟಿ ಮಾಡುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಇಂತಹ ಅಪರೂಪದ ವೈದ್ಯಕೀಯ ವೃತ್ತಿಯಲ್ಲಿ ಒಂದು ಇಡೀ ಕುಟುಂಬವೇ ವೈದ್ಯರಾಗಿ ಸೇವೆಸಲ್ಲಿಸುತ್ತಿರುವ ಕುಟುಂಬವು ದೆಹಲಿಯಲ್ಲಿದೆ. ಈ ಕುಟುಂಬದ ಪ್ರತಿ ಸದಸ್ಯ ವೈದ್ಯಕೀಯ ವೃತ್ತಿಯಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಕೋವಿಡ್ ಹರಡುವಿಕೆಯ ಸಂದರ್ಭದಲ್ಲಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಈ ವೃತ್ತಿಗೆ ಹೇಗೆ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಬೇಕು ಎಂಬುದನ್ನು ತೋರಿಸಿದ್ದಾರೆ.
ಕಳೆದ ನೂರು ವರ್ಷಗಳಿಂದ, ಅಂದರೆ 1920 ರಿಂದ ಪ್ರತಿಯೊಬ್ಬ ಸದಸ್ಯರೂ ವೈದ್ಯರಾಗಿರುವ ಕುಟುಂಬವೊಂದು ರಾಷ್ಟ್ರ ರಾಜಧಾನಿಯಲ್ಲಿದೆ. ದೆಹಲಿಯ ಸಬರ್ ವಾಲ್ ಕುಟುಂಬದಲ್ಲಿ ಈಗ 150 ಕ್ಕೂ ಹೆಚ್ಚು ವೈದ್ಯರಿದ್ದಾರೆ. ಅವರು ಈ ವೃತ್ತಿಯನ್ನು ಒಂದು ಧ್ಯೇಯವಾಗಿ ನೋಡುತ್ತಾರೆ. ಆದರೆ ಅದೇ ಸಮಯದಲ್ಲಿ ಸವಾಲಿನದ್ದಾಗಿರುತ್ತದೆ.
1920 ರಲ್ಲಿ ಪಾಕಿಸ್ತಾನದ ಜಲಾಲ್ಪುರ ನಗರದಲ್ಲಿ ಕುಟುಂಬದ ದಿವಂಗತ ಪಿತಾಮಹ ಲಾಲಾ ಜೀವನ್ಮಲ್ ಈ ಆಸ್ಪತ್ರೆಯನ್ನು ಪ್ರಾರಂಭಿಸಿದ ಸಮಯದಿಂದ ತೆಗೆದಿದ್ದ ಚಿತ್ರವನ್ನು ಇಂದಿಗೂ ಕಾಣಬಹುದಾಗಿದೆ. ಈ ದೇಶದ ಭವಿಷ್ಯವು ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಗಾಂಧೀಜಿ ಹೇಳಿದ್ದರು. ಅವರಿಂದ ಸ್ಫೂರ್ತಿ ಪಡೆದು ಕುಟುಂಬದ ಪಿತಾಮಹ ಲಾಲಾ ಜೀವನ್ಮಲ್ ತನ್ನ ನಾಲ್ವರು ಪುತ್ರರನ್ನು ವೈದ್ಯರನ್ನಾಗಿ ಮಾಡಲು ನಿರ್ಧರಿಸಿದರು. ಸ್ವಾತಂತ್ರ್ಯದ ನಂತರ, ಕುಟುಂಬವು ದೆಹಲಿಗೆ ಸ್ಥಳಾಂತರಗೊಂಡಿತು, ಮತ್ತು ಸಂಪ್ರದಾಯವು ಮುಂದುವರಿಯಿತು.
ಕುಟುಂಬದಲ್ಲಿ ಎಲ್ಲರನ್ನೂ ವೈದ್ಯರನ್ನಾಗಿ ಮಾಡುವ ಸಂಪ್ರದಾಯ ಕಳೆದ 102 ವರ್ಷಗಳಿಂದ ನಡೆಯುತ್ತಿದೆ. ಆದರೆ ಇದು ಸುಲಭದ ಕೆಲಸವಾಗಿರಲಿಲ್ಲ. ಏಕೆಂದರೆ ಕುಟುಂಬದ ಪುತ್ರರಲ್ಲಿ ಒಬ್ಬರು ಮ್ಯಾನೇಜ್ಮೆಂಟ್ ಪದವಿಗಾಗಿ ಅಧ್ಯಯನ ಮಾಡಲು ಪ್ರಾರಂಭಿಸಿದರು. ಆದರೆ ಅಜ್ಜಿಯ ಭಾವನಾತ್ಮಕ ಆಕರ್ಷಣೆ ಮತ್ತು ಕುಟುಂಬದ ವಾತಾವರಣವು ಮಗನನ್ನು ನಿರ್ವಹಣಾ ಅಧ್ಯಯನವನ್ನು ತೊರೆದು ವೈದ್ಯಕೀಯ ವೃತ್ತಿಯನ್ನು ಮುಂದುವರಿಸಲು ಒತ್ತಾಯಿಸಿತು. ಅವರು ಇಂದು ಯಶಸ್ವಿ ಶಸ್ತ್ರಚಿಕಿತ್ಸಕರಾಗಿದ್ದಾರೆ ಎಂದು ಅಂಕುಶ್ ಸಬರ್ ವಾಲ್ ನೆನೆಪಿಸಿಕೊಳ್ಳುತ್ತಾರೆ.
ದೆಹಲಿಯ ಈ ಜೀವನ್ಮಲ್ ಆಸ್ಪತ್ರೆಯಲ್ಲಿ ಹಣವಿಲ್ಲ ಎಂಬ ಕಾರಣಕ್ಕೆ ಯಾವುದೇ ರೋಗಿಗಳನ್ನು ವಾಪಸ್ ಕಳುಹಿಸದಿರುವ ವ್ಯವಸ್ಥೆ ಇದೆ. ವೈದ್ಯರಾಗಿದ್ದ ಅವರ ಕುಟುಂಬದ ಇಬ್ಬರು ಸದಸ್ಯರು ಕಳೆದ ವರ್ಷ ಕರೋನವೈರಸ್ನಿಂದ ನಿಧನರಾದರು. ತುಂಬಾ ಕಠಿಣ ಪರಿಶ್ರಮ ಮತ್ತು ತ್ಯಾಗವನ್ನು ಬಯಸುವ ಈ ವೃತ್ತಿಗೆ ಬರಲು ಮುಂದಿನ ಪೀಳಿಗೆಯನ್ನು ಮನವೊಲಿಸುವುದು ತುಂಬಾ ಕಷ್ಟ ಎಂದು ಕುಟುಂಬದ ಡಾ. ವಿನಯ್ ಹೇಳಿರುತ್ತಾರೆ. ಕುಟುಂಬದ ಸೊಸೆಯಂದಿರು ಸಹ ವೈದ್ಯರಾಗಿರುತ್ತಾರೆ ಮತ್ತು ಕುಟುಂಬ ಆಸ್ಪತ್ರೆಗೆ ಸೇರುತ್ತಾರೆ ಎಂದು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.