ಉತ್ತರಾಖಂಡದ 117 ಮದರಸಗಳಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಸಲು ನಿರ್ಧರಿಸಲಾಗಿದೆ. ಉತ್ತರಾಖಂಡದ ಮದರಸಗಳ ವಿದ್ಯಾರ್ಥಿಗಳಿಗೆ ಅವರ ಪಠ್ಯಕ್ರಮದ ಭಾಗವಾಗಿ ಸಂಸ್ಕೃತ ಭಾಷೆಯನ್ನು ಕಲಿಸಲಾಗುವುದು. ವರದಿಗಳ ಪ್ರಕಾರ, ರಾಜ್ಯದ 117 ಮದರಸಗಳು ಎನ್ಸಿಇಆರ್ಟಿ ಮಾದರಿಯನ್ನು ಅನುಸರಿಸಲಿವೆ ಮತ್ತು ಸಂಸ್ಕೃತವು ಈ ಪಠ್ಯಕ್ರಮದ ಭಾಗವಾಗಲಿದೆ. ಉತ್ತರಾಖಂಡದ ವಕ್ಫ್ ಮಂಡಳಿಯ ಅಧ್ಯಕ್ಷ ಶದಾಬ್ ಶಮ್ಸ್ ಅವರು ರಾಜ್ಯದಾದ್ಯಂತದ ಮದರಸಗಳು ಇನ್ನು ಮುಂದೆ ಮುಸ್ಲಿಂ ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಕಲಿಸಲಿವೆ ಎಂಬ ಸುದ್ದಿಯನ್ನು ಸ್ಪಷ್ಟಪಡಿಸಿದ್ದಾರೆ.
ಸಂಸ್ಕೃತದ ಮುಸ್ಲಿಂ ವಿದ್ವಾಂಸೆ ರಜಿಯಾ ಸುಲ್ತಾನಾ ಅವರ ಉದಾಹರಣೆಯನ್ನು ನೀಡುತ್ತಾ ಅವರು, “ಉತ್ತರಾಖಂಡವು ದೇವಭೂಮಿ (ದೇವರ ಭೂಮಿ), ಇಲ್ಲಿ ಸಂಸ್ಕೃತವನ್ನು ಕಲಿಸದಿದ್ದರೆ, ಮತ್ತೆಲ್ಲಿ ಕಲಿಸಲು ಸಾಧ್ಯ ?” ಎಂದು ಪ್ರಶ್ನಿಸಿದ್ದಾರೆ. ಮುಸ್ಲಿಂ ಸಮಾಜ ಬದಲಾವಣೆ ಬಯಸುತ್ತಿದೆ. ಮದರಸಗಳ ಉನ್ನತೀಕರಣದಿಂದ ಅವರು ಸಂತೋಷವಾಗಿದ್ದಾರೆ” ಎಂದು ಶಮ್ಸ್ ಹೇಳಿಕೆ ನೀಡಿದ್ದಾರೆ.
ರಜಿಯಾ ಪ್ರಸ್ತುತ ಪವಿತ್ರ ಕುರಾನ್ ಅನ್ನು ಸಂಸ್ಕೃತ ಭಾಷೆಗೆ ಅನುವಾದಿಸುತ್ತಿದ್ದಾರೆ. ರಜಿಯಾ ವಕ್ಫ್ ಮಂಡಳಿಯ ರಾಜ್ಯ ಮಟ್ಟದ ಶಿಕ್ಷಣ ಸಮಿತಿಯ ಭಾಗವಾಗಲಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.
6 ವರ್ಷಗಳ ಹಿಂದಿನ ಬೇಡಿಕೆ
ಮದ್ರಸಾ ವೆಲ್ಫೇರ್ ಸೊಸೈಟಿ (ಎಂಡಬ್ಲ್ಯುಎಸ್) 2017 ರಲ್ಲಿ ಸಂಸ್ಕೃತವನ್ನು ಕಲಿಸುವ ಬೇಡಿಕೆಯನ್ನು ನೀಡಿತ್ತು. ಮದರಸಗಳಲ್ಲಿ ಸಂಸ್ಕೃತವನ್ನು ಕಲಿಸಬೇಕೆಂದು ಒತ್ತಾಯಿಸಿ ಎಂಡಬ್ಲ್ಯೂಎಸ್ ಸದಸ್ಯರು ಆಗಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ಪತ್ರ ಬರೆದಿದ್ದರು. ಆದರೆ ಆ ಸಮಯದಲ್ಲಿ ಸರ್ಕಾರ ಮದರಸಗಳಲ್ಲಿ ಸಂಸ್ಕೃತವನ್ನು ಕಲಿಸಲು ನಿರಾಕರಿಸಿತು.
ದಶಕಗಳಿಂದ ಕರ್ನಾಟಕದ ಮಟ್ಟೂರಿನಲ್ಲಿ ಸಂಸ್ಕೃತ ಭಾಷೆಯನ್ನು ಆಡು ಭಾಷೆಯಂತೆ ನಿರಾಳವಾಗಿ ಮಾತನಾಡುತ್ತಾ ಬಂದಿರುವ ಜನ. ಈಗ ಮದ್ರಸಗಳಲ್ಲಿ ಸಂಸ್ಕೃತ ಕಲಿಯಲಿರುವ ಅಲ್ಲಿನ ವಿದ್ಯಾರ್ಥಿಗಳು. ಇಷ್ಟು ದಿನ ಸಂಸ್ಕೃತ ನಿಧಾನಕ್ಕೆ ಗಡಿದಾಟುತ್ತಿದೆ ಎನ್ನುತ್ತಿರುವಾಗಲೇ ನಮ್ಮದೇ ನೆಲದ ಮದ್ರಸಗಳಲ್ಲಿ ಸಂಸ್ಕೃತ ಪಾಠ ಕಲಿಕೆಯು ಬದಲಾವಣೆಯಲ್ಲಿ ಮಹತ್ತರವಾದ ಹೆಜ್ಜೆಯಾಗಿದೆ.