ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದದ ಬಿಕ್ಕಟ್ಟು ಕೋಟ್ಯಾಂತರ ರೂಪಾಯಿಯ ಆಸ್ತಿ ಪಾಸ್ತಿ ನಷ್ಟ , ಸಾವಿರಾರು ಮಾನವ ಪ್ರಾಣ ಹಾನಿ ಮತ್ತು ಕ್ಷೋಭೆಗೆ ಕಾರಣವಾಗಿದೆ. ಯುದ್ದ ಪ್ರಾರಂಬವಾಗಿ ತಿಂಗಳುಗಳೆ ಕಳೆದರೂ ಯುದ್ದ ನಿಲುಗಡೆಗೆ ಅನೇಕ ದೇಶಗಳ ಪ್ರಯತ್ನದ ನಡುವೆಯೂ ಯುದ್ದ ಮುಂದುವರೆದೇ ಇದೆ. ಆದರೆ ಜಿ 20 ಶ್ರಂಗ ಸಭೆಯಲ್ಲಿ ಭಾರತದ ನೇತೃತ್ವದಿಂದಾಗಿ ಶೃಂಗ ಸಭೆಯು ಒಮ್ಮತಕ್ಕೆ ಬಂದಿದೆ. ಇದು ನಿಜಕ್ಕೂ ದೇಶದ ದೊಡ್ಡ ಸಾಧನೆಯೇ ಹೌದು.
ಇದಕ್ಕಾಗಿ ಭಾರತದ ಹಿರಿಯ ರಾಜ ತಾಂತ್ರಿಕ ಅಧಿಕಾರಿಗಳು ಸತತ 200 ಘಂಟೆಗಳಷ್ಟು ಕಾಲ ಕೆಲಸ ಮಾಡಿದ್ದಾರೆ. ಕೇಂದ್ರದ ಜಂಟಿ ಕಾರ್ಯದರ್ಶಿಗಳಾದ ಈನಮ್ ಗಂಭೀರ್ ಮತ್ತು ಕೆ ನಾಗರಾಜ ನಾಯ್ಡು ಸೇರಿದಂತೆ ರಾಜತಾಂತ್ರಿಕರ ತಂಡವು 300 ದ್ವಿಪಕ್ಷೀಯ ಸಭೆಗಳನ್ನು ನಡೆಸಿತು ಮತ್ತು ವಿವಾದಾತ್ಮಕ ಉಕ್ರೇನ್ ಸಂಘರ್ಷದ ಕುರಿತು ತಮ್ಮ ಸಹವರ್ತಿಗಳೊಂದಿಗೆ 15 ಕರಡುಗಳನ್ನು ಸಿದ್ದ ಪಡಿಸಿತು. ಇದು ಜಿ20 ನಾಯಕರ ಶೃಂಗಸಭೆಯ ಮೊದಲ ದಿನವೇ ಒಮ್ಮತವನ್ನು ಪಡೆಯಲು ಸಾದ್ಯವಾಯಿತು.
“ಇಡೀ G20 ಯ ಅತ್ಯಂತ ಸಂಕೀರ್ಣವಾದ ಭಾಗವೆಂದರೆ ಭೌಗೋಳಿಕ ರಾಜಕೀಯ (ರಷ್ಯಾ-ಉಕ್ರೇನ್) ಮೇಲೆ ಒಮ್ಮತವನ್ನು ತರುವುದು. ಇದನ್ನು 200 ಗಂಟೆಗಳ ತಡೆರಹಿತ ಮಾತುಕತೆಗಳು, 300 ದ್ವಿಪಕ್ಷೀಯ ಸಭೆಗಳು, 15 ಕರಡುಗಳು ಮಾಡಲಾಯಿತು,” ಹಿರಿಯ ರಾಜ ತಾಂತ್ರಿಕ ಅಧಿಕಾರಿಗಳಾದ ನಾಯ್ಡು ಮತ್ತು ಗಂಭೀರ್ ಅವರ ಪ್ರಯತ್ನಗಳು ತನಗೆ ಬಹಳ ಸಹಾಯವಾಯಿತು ಎಂದು ಜಿ 20 ಶೃಂಘ ಸಭೆಯ ಮುಖ್ಯ ಅಧಿಕಾರಿ ಅಮಿತಾಭ್ ಕಾಂತ್ ಹೇಳಿದರು.
ಉದಯೋನ್ಮುಖ ಆರ್ಥಿಕತೆಗಳಾದ ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ಇಂಡೋನೇಷ್ಯಾ ಪ್ರಗತಿಯನ್ನು ತಲುಪುವಲ್ಲಿ ಪ್ರಮುಖ ಪಾತ್ರ ವಹಿಸುವುದರೊಂದಿಗೆ ವಿವಾದಾತ್ಮಕ ವಿಷಯದ ಕುರಿತು ಜಿ 20 ದೇಶಗಳಲ್ಲಿ ಭಾರತವು ಅನಿರೀಕ್ಷಿತ ಒಮ್ಮತವನ್ನು ರೂಪಿಸುವಲ್ಲಿ ಯಶಸ್ವಿಯಾಗಿದೆ. G20 ನಾಯಕರ ಘೋಷಣೆಯು ಉಕ್ರೇನ್ನ ರಷ್ಯಾದ ಆಕ್ರಮಣವನ್ನು ಉಲ್ಲೇಖಿಸುವುದನ್ನು ತಪ್ಪಿಸಿತು ಮತ್ತು ಪರಸ್ಪರರ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸುವ ತತ್ವವನ್ನು ಅನುಸರಿಸಲು ಎಲ್ಲಾ ರಾಜ್ಯಗಳಿಗೆ ಸಾಮಾನ್ಯ ಕರೆ ನೀಡಿದೆ.
“ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ, ಅಂತರರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಬಹುಪಕ್ಷೀಯ ವ್ಯವಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ಕಾನೂನಿನ ತತ್ವಗಳನ್ನು ಎತ್ತಿಹಿಡಿಯಲು ನಾವು ಎಲ್ಲಾ ರಾಜ್ಯಗಳಿಗೆ ಕರೆ ನೀಡುತ್ತೇವೆ” ಎಂದು ಘೋಷಣೆ ಹೇಳಿದೆ.