ಬೆಳಗಾವಿ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಭಾಗ್ಯ ಎಲ್ಲರಿಗೂ ಸಿಗುವುದು ದುರ್ಲಭ ಅಂತಹದ್ದರಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿಯ ಹೊಸೂರು ಎಂಬ ಗ್ರಾಮದಲ್ಲಿ ಬರೋಬ್ಬರಿ 215 ಜನ ಸ್ವಾತಂತ್ರ್ಯ ಹೋರಾಟಗಾರರನ್ನು ದೇಶಕ್ಕೆ ನೀಡಿದೆ.
‘ಸ್ವಾತಂತ್ರ್ಯ ಹೋರಾಟಗಾರರ ಊರು’ ಎಂದೇ ಕರೆಯಲ್ಪಡುವ ಸವದತ್ತಿ ತಾಲ್ಲೂಕಿನ ಹೊಸೂರ ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮ್ಮೂರು ಮುಂಚೂಣಿಯಲ್ಲಿತ್ತು.215 .ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ತಮ್ಮ ಬದುಕು ಸವೆಸಿದ್ದರು. ನಮ್ಮಜ್ಜ ಸೇರಿ 155ಮಂದಿ ಸೆರೆವಾಸ ಅನುಭವಿಸಿದ್ದರು. ಈ ಪೈಕಿ 140 ಹೋರಾಟಗಾರರ ಸಮಗ್ರ ಮಾಹಿತಿ ಕಲೆಹಾಕಿದ್ದೇವೆ. ಉಳಿದ ಹೋರಾಟಗಾರರ ಮನೆಗೆ ತೆರಳಿ, ಪ್ರಮುಖ ದಾಖಲೆ ಸಂಗ್ರಹಿಸುತ್ತಿದ್ದೇವೆ’ ಎಂದು ಗ್ರಾಮಸ್ಥರು ಹೆಮ್ಮೆಯಿಂದ ಹೇಳಿ ಕೊಳ್ಳುತ್ತಾರೆ.
ಗಾಂಧಿ ತಿಲಕ ಮತ್ತು ಪಟೇಲರ ಪಾದಸ್ಪರ್ಶವಾದಂತಹ ಗ್ರಾಮ.
1905ರಲ್ಲಿ ಹೊಸೂರಿಗೆ ಬಂದಿದ್ದ ಬಾಲಗಂಗಾಧರ ತಿಲಕರು, ‘ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು’ ಎಂದು ಜಾಗೃತಿ ಮೂಡಿಸಿದ್ದರು. 1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಮಹಾತ್ಮ ಗಾಂಧಿ ಭಾರತಕ್ಕೆ ಮರಳಿದ ನಂತರ, ಹೊಸೂರಿಗೆ ಬಂದು ಭಾಷಣ ಮಾಡಿದ್ದರು. ಅದರ ನೆನಪಿಗಾಗಿ ಊರಲ್ಲಿ ಗಾಂಧಿ ಕಟ್ಟೆ ನಿರ್ಮಿಸಲಾಗಿದೆ. ನಂತರ ಸರ್ದಾರ್ ವಲ್ಲಭಬಾಯ್ ಪಟೇಲರು ಇಲ್ಲಿಗೆ ಭೇಟಿ ನೀಡಿದ್ದರು.
ಮಹಾನ್ ನಾಯಕರ ಪ್ರೇರಣೆಯಿಂದ ಸಿಡಿದೆದ್ದ ಗ್ರಾಮಸ್ಥರು, ತಮಗೆ ಅನ್ಯಾಯವಾದಾಗಲೆಲ್ಲ ಅಂಗ್ಲರ ವಿರುದ್ಧ ಕಾದಾಡಿದ್ದರು. ಕರ ವಸೂಲಿಗೆ ಬಂದ ಬ್ರಿಟಿಷರಿಗೆ ಬಿಸಿಮುಟ್ಟಿಸಿ, ಮಹಾರಾಷ್ಟ್ರದ ಪುಣೆಯ ಯರವಾಡದಲ್ಲಿ ಸೆರವಾಸ ಅನುಭವಿಸಿದ್ದರು. ಜೈಲಿನಿಂದಬಿಡುಗಡೆಯಾಗಿ ಬಂದವರನ್ನು ಊರಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಗಿತ್ತು.
ನಮ್ಮೂರಿನ ಸ್ವಾತಂತ್ರ್ಯ ಹೋರಾಟಗಾರರ ನೈಜ ಚಿತ್ರಣವನ್ನು ಸರ್ಕಾರ ಹೊರತರಬೇಕು. ಗ್ರಾಮದಲ್ಲಿರುವ ಗಾಯರಾಣ ಜಮೀನಿನಲ್ಲಿ ಅವರ ನೆನಪಿಗಾಗಿ ಉದ್ಯಾನ ನಿರ್ಮಿಸಿ ಗೌರವ ಸಮರ್ಪಿಸಬೇಕು ಎಂದು ಗ್ರಾಮಸ್ಥರಾದ ಎಫ್.ಎಸ್.ಸಿದ್ದನಗೌಡರ ತಿಳಿಸಿದ್ದಾರೆ.
ರಾಮಚಂದ್ರ ನೀಲಕಂಠ ಗಣಾಚಾರಿ,ವೀರಪ್ಪ ಸುತಗಟ್ಟಿ,ಲೋಕಯ್ಯ ಹಿರೇಮಠ, ಸೋಮಲಿಂಗಪ್ಪ ವಣ್ಣೂರ, ಕುಲಕರ್ಣಿ, ಬಾಳಪ್ಪ ಯರಡಾಲ, ಬಸವರಾಜ ಬೋಗಾರ, ನೀಲಪ್ಪ ಪೆಂಟೇದ, ಸಣ್ಣಯಮನಪ್ಪ ಬೋಳೆತ್ತಿನ, ಬಸಪ್ರಭು ದಾಡಿಗುಂಡಿ, ರಾಚಪ್ಪ ಬೋಳೆತ್ತಿನ, ಮಲ್ಲಪ್ಪ ಬೋಳೆತ್ತಿನ, ಬಸಪ್ಪ ಸಿದ್ಧನಗೌಡರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಬ್ರಿಟಿಷ ಸರ್ಕಾರದ ಅವಧಿಯಲ್ಲಿ ವೀರಪ್ಪ ಸುತಗಟ್ಟಿ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ‘ನಮ್ಮಜ್ಜ ರಾಮಚಂದ್ರ ಕುಲಕರ್ಣಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂ ಣಿಯಲ್ಲಿದ್ದರು. ಶಿಕ್ಷಕರಾಗಿದ್ದರೂ ದೇಶಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು. ರಾಷ್ಟ್ರಕ್ಕಾಗಿ ನಮ್ಮ ಕುಟುಂಬದಿಂದಲೂ ಕೊಡುಗೆ ನೀಡಿದ ಹೆಮ್ಮೆ ಇದೆ’ ಎಂದು ರಮೇಶ ಕುಲಕರ್ಣಿ ತಿಳಿಸಿದರು.
ಪ್ರಸ್ತುತ ಈ ಊರಲ್ಲಿ 30ಕ್ಕೂ ಅಧಿಕ ಸೈನಿಕರು ಮತ್ತು ಮಾಜಿಸೈನಿಕರಿದ್ದಾರೆ. ಸ್ವಾತಂತ್ರ್ಯದ ನಂತರವೂ ನಿಲ್ಲದ ದೇಶ ಸೇವೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯಕಾರ್ಯವಾಗಿದೆ.
ಎರಡು ಸಲ ಜೈಲಿಗೆ: ‘ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನಮ್ಮಜ್ಜ ಸೋಮಲಿಂಗಪ್ಪ ವಣ್ಣೂರ ಹಲವು ಚಳವಳಿಗಳಲ್ಲಿ ಭಾಗವಹಿಸಿದ್ದರು. ಒಮ್ಮೆ 6 ತಿಂಗಳು ಮತ್ತು ಇನ್ನೊಮ್ಮೆ 2 ವರ್ಷ, 8 ತಿಂಗಳು ಜೈಲಿಗೆ ಹೋಗಿದ್ದರು. ನಮ್ಮಜ್ಜ ಸೇರಿದಂತೆ ಬಹುತೇಕ ಸ್ವಾತಂತ್ರ್ಯಹೋರಾಟಗಾರರು ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ. ಅವರ ಕೊಡುಗೆಗಳನ್ನು ಪ್ರತಿಯೊಬ್ಬರೂ ನೆನೆಯಬೇಕಿದೆ’ ಎಂದು ಸೋಮಶೇಖರ ವಣ್ಣೂರ ತಿಳಿಸಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮನೆ ಮನೆಯಿಂದ ಜನರು ಭಾಗವಹಿಸಿ ತಿಲಕ ಮತ್ತು ಗಾಂಧಿಯಂತವರ ಮಾರ್ಗ ದರ್ಶನದಲ್ಲಿ ನಡೆಯುವ ಸೌಭಾಗ್ಯವನ್ನುಪಡೆದಂತಹ ಈ ಗ್ರಾಮ ಕರ್ನಾಟಕದಲ್ಲಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.