ಅದೊಂದು ಪುಟ್ಟ ಸಂಸಾರ. ಗಂಡ-ಹೆಂಡತಿ ಮತ್ತೊಂದು ಪುಟ್ಟ ಮಗು. ಜೀವನದಲ್ಲಿ ಎಲ್ಲಾ ಸುಖಕರವಾಗಿದ್ದರೂ, ಪತಿಯಿಂದ ಪ್ರತಿದಿನ ದೈಹಿಕ ಚಿತ್ರ ಹಿಂಸೆ ಕಟ್ಟಿಟ್ಟ ಬುತ್ತಿಯಾಗಿತ್ತು. ಹೆಂಡತಿಯಾದವಳಿಗೆ ಗಂಡ ಹೊಡೆಯುವುದು ಪತಿ ಧರ್ಮ ಎಂದು ಹೆಂಡತಿಯ ಬಲವಾದ ನಂಬಿಕೆ. ತನ್ನ ಮೈ ಕೈಯ್ಯಲ್ಲೆಲ್ಲಾ ಬಾಸುಂಡೆ ಬಂದಿದೆ ಯಾದರು, ಗಂಡನಾದವನು ತನ್ನನ್ನು ದಂಡಿಸುವ ಎಲ್ಲಾ ಹಕ್ಕು ಉಳ್ಳವನು ಎಂದು ಆಕೆ ನಂಬಿದ್ದಾಳೆ. ಇನ್ನು, ಒಂದೊಮ್ಮೆ ತನಗಾಗುತ್ತಿರುವ ಹಿಂಸೆಯ ಬಗ್ಗೆ, ತನ್ನ ಕುಟುಂಬದೊಂದಿಗೆ ತೋಡಿಕೊಂಡಿದ್ದಳಾದರೂ, “ನಿಮ್ಮ ಗಂಡ ಹೆಂಡಿರ ಜಗಳ ಊರಿಗೆ ತಿಳಿಸಬೇಡ” ಎಂಬ ಉದಾರ ಉಪದೇಶ ಲಭಿಸಿತ್ತು.
ಮೇಲಿನ ಕಥೆಯಲ್ಲಿ, ಹೆಂಡತಿಯಾದವಳಿಗೆ ತಾನು ತುಳಿತಕ್ಕೊಳಗಾಗುತ್ತಿರುವವಳು ಎಂಬ ಬಗ್ಗೆ ಅರಿವೇ ಇಲ್ಲ. ತನ್ನ ಮೇಲಾಗುತ್ತಿರುವ ದೌರ್ಜನ್ಯ ವಿರುದ್ಧ ಆಕೆಯ ಸಹಾಯಕಕ್ಕೆ ನಿಲ್ಲಬೇಕಾದವರು, ಗಂಡ ಹೆಂಡತಿ ಜಗಳ ಉಂಡು ಮಲಗುವ ವರೆಗೆ ಎಂಬ ಗಾದೆಯ ಆಧಾರಿತ ಸನ್ನಿವೇಶದಂತೆ ಅಲ್ಲಗೆಳೆಯುತ್ತಾರೆ. ಇನ್ನು ಒಂದು ಕುಟುಂಬದ ಗುಟ್ಟು ಕಾಪಾಡುವ ಭರದಲ್ಲಿ ಒಂದು ಜೀವವನ್ನೇ ಕಳೆದುಕೊಂಡರೂ ಪರವಾಗಿಲ್ಲ ಎನ್ನುವ ಮನಸ್ಥಿತಿ, ಎಷ್ಟು ದುರದೃಷ್ಟಕರ ಎಂದು ಅರ್ಥ ಮಾಡಿಕೊಳ್ಳ ಬೇಕಿದೆ. ಇದೇ ಕಥೆಯ ಆಧಾರಿತ ಘಟನೆಗಳು ಇಂದು ನಮ್ಮ ದೇಶದಲ್ಲಿ ನಡೆಯುತ್ತಿವೆ.
ಸಾಮಾಜಿಕವಾಗಿ ನಡೆಯುತ್ತಿರುವ ದೌರ್ಜನ್ಯ, ಮಾನಹಾನಿ, ಅತ್ಯಾಚಾರದ ವಿರುದ್ಧ ಧ್ವನಿ ಎತ್ತುವವರು ನಾವಾಗಬೇಕು ಎಂದು ಅರಿತಿರುವವರ ಸಂಖ್ಯೆ ಅತೀ ಕಡಿಮೆ. ಇನ್ನು ಈ ವಿಷಯಗಳ ಬಗ್ಗೆ ಪ್ರಶ್ನೆ ಮಾಡುವವರಿಗೆ ‘ದೇಶದ ಗುಟ್ಟು ರಟ್ಟು ಮಾಡುವವರು’ ಎಂಬ ಹಣೆಪಟ್ಟಿ ಬೇರೆ. ಗಂಡ ಹೆಂಡತಿಯನ್ನು ಹೊಡೆದರೆ ತಪ್ಪೇನಿಲ್ಲ ಎಂದುಕೊಳ್ಳುವ ಕುಟುಂಬಿಕರಂತೆ, ಸಮಾಜದಲ್ಲಾಗುವ ಶೋಷಣೆಯನ್ನು ಬಹಿರಂಗ ಪಡಿಸಬೇಕಿಲ್ಲ ಎಂಬ ಮನೋಸ್ಥಿತಿ ಹೊಂದಿದವರ ಸಂಖ್ಯೆಯೂ ಬೆಳೆದು ಬರುತ್ತಿದೆ.
ಮೊನ್ನೆ ಸಾಮಾಜಿಕ ಜಾಲತಾಣದಲ್ಲೊಬ್ಬರು, “ಸ್ವಾತಂತ್ರ್ಯದ ನೈಜತೆಯನ್ನು ಪ್ರಶ್ನಿಸುವವರು ಸ್ವಚ್ಛ ಭಾರತ ಅಭಿಯಾನದಲ್ಲಿ ತಮ್ಮ ಹೆಸರು ನಮೂದಿಸಿಕೊಳ್ಳಿ, ಬಹಿರ್ದೆಸೆ ಸಾಮಾಜಿಕ ಶಿಷ್ಟಚಾರವಲ್ಲ” ಎಂದು ಬರೆದಿದ್ದರು. ಪೋಣಿಸಲ್ಪಟ್ಟ ಅಕ್ಷರಗಳು ಅತ್ಯಂತ ಕಲಾತ್ಮಕವಾಗಿದೆ. ಆದರೆ ಮನೋಸ್ಥಿತಿ ಸ್ವೀಕಾರಾರ್ಹವಲ್ಲ. ಬ್ರಿಟಿಷರು ರೈಲ್ವೆ, ಟೆಲಿಫೋನ್ ಮೂಲಕ ಭಾರತದ ಸಂಪರ್ಕ ಸೌಲಭ್ಯ ಹೆಚ್ಚಿಸಿದವರು, ಆದ್ದರಿಂದ ಅವರು ಮಾಡುವ ಅನ್ಯಾಯದ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರರು ಭಾವಿಸಿದ್ದರೆ ಭಾರತೀಯರು ಇಂದಿಗೂ ಬ್ರಿಟಿಷರ ಜೀತದಲ್ಲಿರಬೇಕಿತ್ತು.
ದೇಶವನ್ನು ಅವಹೇಳನ ಮಾಡುವುದು ಮತ್ತು ಆಡಳಿತಾತ್ಮಕ ದೋಷಗಳನ್ನು ಎತ್ತಿ ಹಿಡಿಯುವಲ್ಲಿ ಅಂತರವಿದೆ. ಅನ್ಯಾಯದ ವಿರುದ್ಧದ ಧ್ವನಿ ಎತ್ತಬೇಕಾದ್ದು ಮಾನವ ಧರ್ಮ. ದೇಶದ ಗೌರವದ ಪ್ರಶ್ನೆಯಾಗಿಟ್ಟು ಕೆಡುಕನ್ನು ಪ್ರಶ್ನಿಸದೇ ಇರುವ ಮನೋಸ್ಥಿತಿ ಬೆಳೆಸಿಕೊಳ್ಳುವುದು, ದೇಶದ ಬೆಳವಣಿಗೆಗೆ ಒಳ್ಳೆಯ ಕೊಡುಗೆ ಅಲ್ಲ.