ಬೇಂದ್ರೆಯವರ ಮೇಲೆ ಮರಾಠಿ ಪರಿಸರದ ಪ್ರಭಾವ ಬಹಳಷ್ಟಿದೆ. ಮರಾಠಿ ಭಾಷಿಕರ ಒಡನಾಟ ಇದ್ದಂತೆ, ಮರಾಠಿ ಸಾಹಿತಿಗಳ ಪ್ರಭಾವವೂ ಬೇಂದ್ರೆಯವರ ಮೇಲೆ ಆಗಿದೆ. ಮರಾಠಿ ಭಾಷೆಯೂ ಬೇಂದ್ರೆಯವರಿಗೆ ಚೆನ್ನಾಗಿ ಗೊತ್ತಿತ್ತು. ಮರಾಠಿ ಸಂಸ್ಕೃತಿಯ ಪರಿಚಯವೂ ಇತ್ತು. ಈ ಹಿನ್ನೆಲೆಯಲ್ಲಿ ಮರಾಠಿ ಸಾಹಿತ್ಯದ ಪ್ರಭಾವ ಬೇಂದ್ರೆಯವರ ಮೇಲೆ ಬಹಳಷ್ಟಾಗಿದೆ. 1893ರಲ್ಲಿ ಮರಾಠಿಯ ಪ್ರಸಿದ್ಧ ಕವಿ ಕೇಶವಸುತರು ‘ತುತ್ತೂರಿ’ ಎನ್ನುವ ಕವಿತೆಯೊಂದನ್ನು ಬರೆದರು. ವಿಧವಾ ವಿವಾಹ, ಸ್ತ್ರೀ ಶಿಕ್ಷಣ, ಪ್ರೌಢ ವಿವಾಹ, ಅಸ್ಪೃಶ್ಯತಾ ನಿವಾರಣೆ, ಮಿಶ್ರವಿವಾಹ ಮೊದಲಾದವುಗಳ ಹೆಸರನ್ನು ಹೇಳಿದರೆ ಮಹಾ ಪಾಪವೆಂದು ತಿಳಿದುಕೊಳ್ಳುತ್ತಿದ್ದ ಆ ಕಾಲದಲ್ಲಿ ಕೇಶವಸುತರ ‘ತುತ್ತೂರಿ’ಯ ಕವನವು ಅಂದಿನ ಸಮಾಜವನ್ನು ನಿದ್ರೆಯಿಂದ ಎಬ್ಬಿಸುವುದಕ್ಕೆ ಅವಶ್ಯವಾಗಿತ್ತೆಂದು ಪರಶುರಾಮ ಚಿಂತಾಮಣಿ ದಾಮಲೆ ಅವರು ಹೇಳುತ್ತಾರೆ. ಕೇಶವಸುತರು ಉತ್ಕಲವಾದ ಸುಧಾರಣಾವಾದಿಯಾಗಿದ್ದರು. 1918ರ ತುತ್ತೂರಿ ಕವನದಲ್ಲಿ ಬೇಂದ್ರೆಯವರು ಮರಾಠಿ ಕವಿ ಕೇಶವಸುತರ ‘ತುತ್ತೂರಿ’ಯನ್ನು ಕನ್ನಡೀಕರಿಸುವ ಪ್ರಯತ್ನ ಮಾಡಿದ್ದಾರೆ. ಕೇಶವಸುತರಂಥವರು ಇನ್ನೂ ಅರಳುತ್ತಿರುವ ಕವಿಗೆ ಸ್ಫೂರ್ತಿಯ ಕೇಂದ್ರವಾದುದು ಬೇಂದ್ರೆಯವರ ಸಾಮಾಜಿಕ ಕಾಳಜಿಗಳನ್ನು ಜಾಗೃತಗೊಳಿಸಲು ಅನುಕೂಲವಾಯಿತು.
1885ರಲ್ಲಿ ಹುಟ್ಟಿ ಮರಾಠಿ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿದ್ದ ಗೋವಿಂದಾಗ್ರಜ ಬೇಂದ್ರೆಯವರ ಮೇಲೆ ಪ್ರಭಾವ ಬೀರಿದ ಮತ್ತೊಬ್ಬ ಕವಿ. ಮಾತು ಮಾತಿಗೆ ಚಮತ್ಕಾರ ಜೋಡಿಸುತ್ತಿದ್ದ ಆ ಕವಿ ತಮ್ಮ ಮೇಲೆ ಪ್ರಭಾವ ಬೀರಿದ್ದರು ಎಂದು ಬೇಂದ್ರೆಯವರೇ ಹೇಳುತ್ತಾರೆ. ಡಾ. ಸುಮತೀಂದ್ರ ನಾಡಿಗರು ಹೀಗೆ ಹೇಳುತ್ತಾರೆ: “ಮರಾಠಿ ಸಂತಕವಿಗಳ ಪ್ರಭಾವವನ್ನು ನೋಡಿದಾಗ ಬೇಂದ್ರೆಯವರು ಅದನ್ನು ತಮ್ಮ ಸಂದರ್ಭಕ್ಕೆ ಹೇಗೆ ಉಪಯೋಗಿಸಿಕೊಂಡರು ಎನ್ನುವುದು ತಿಳಿಯುತ್ತದೆ. ಚೋಖಾಮೇಳನ ಭಕ್ತಿಗೀತೆಯನ್ನು ಬೇಂದ್ರೆಯವರು ಪ್ರೇಮಗೀತೆಯನ್ನಾಗಿ ಮಾರ್ಪಡಿಸುತ್ತಾರೆ. ಹೀಗೆ ಪರಿವರ್ತಿಸುವಾಗ ಕೇಶವಸುತರಂತಹ ಮರಾಠಿ ಕವಿಗಳು ಭಾರತೀಯವಾಗಿ ಇದ್ದ ರೊಮ್ಯಾಂಟಿಸಿಸಂನ ನೆರವನ್ನು ಬೇಂದ್ರೆಯವರು ಪಡೆಯುತ್ತಾರೆ. ಅದೇ ರೀತಿಯಲ್ಲಿ ಅರವಿಂದರು ಭಾರತೀಯವಾಗಿಸಿದ ರೊಮ್ಯಾಂಟಿಕ್ ಕಾವ್ಯ ಮೀಮಾಂಸೆಯ ಸ್ಫೂರ್ತಿತತ್ವವನ್ನು ಬೇಂದ್ರೆಯವರು ಸ್ವೀಕರಿಸುತ್ತಾರೆ” ಹೀಗೆ ಮನೆ ಮಾತಾದ ಮರಾಠಿಯ ಮೂಲಕವೆ ಬೇಂದ್ರೆಯವರು ರೊಮ್ಯಾಂಟಿಕ್ ಸತ್ವವನ್ನು ಪಡೆದಿದ್ದರಿಂದ ಅವರು ಇಂಗ್ಲಿಷ್ ಕವಿಗಳನ್ನು ಅನುವಾದಿಸುವ ಅಗತ್ಯ ಬೀಳಲಿಲ್ಲ. ಮರಾಠಿಯ ಮಾತ್ರಾಗಣಕ್ಕೂ ಕನ್ನಡದ ಮಾತ್ರಾಗಣಕ್ಕೂ ವ್ಯತ್ಯಾಸವಿಲ್ಲದಿರುವುದರಿಂದ ಮರಾಠಿಯಲ್ಲಾದ ಛಂದಸ್ಸಿನ ನಾನಾ ಪ್ರಯೋಗಗಳ ಸಿದ್ದಿ ಬೇಂದ್ರೆಯವರಿಗೆ ಒಮ್ಮೆಗೆ ದಕ್ಕಿತು.
ಬೇಂದ್ರೆಯವರ ಕನ್ನಡ ಸಾಹಿತ್ಯದ ಮೇಲೆ ಮರಾಠಿ ಪ್ರಭಾವದಂತೆಯೇ ಬೇಂದ್ರೆಯವರ 1916ರ ಸಂದರ್ಭದಲ್ಲಿಯೇ ಮರಾಠಿಯಲ್ಲಿ ಕಾವ್ಯ ರಚನೆ ಮಾಡಲು ಪ್ರಾರಂಭಿಸಿದ್ದರು ಎಂಬುದು ಗಮನಾರ್ಹವಾದುದು.