ಕಾಶ್ಮೀರವನ್ನು ತಲುಪಬೇಕೆಂದವರೂ ಮನಾಲಿಯ ಸೌಂದರ್ಯ ಮನಸೋಲದಿರುವುದಿಲ್ಲ. ಇಲ್ಲಿ ಹಿಮ ಕಣಿವೆಗಳಿಗೆ ಮನಸೋತವರಲ್ಲಿ ಅನೇಕರು. ಇಲ್ಲಿ ದಿನದಿಂದ ದಿನಕ್ಕೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವುದೇ ಇದಕ್ಕೆ ಸಾಕ್ಷಿ. ಇಲ್ಲಿನ ಪ್ರಕೃತಿ ಸೊಬಗು ಎಂತವರನ್ನು ಕೂಡ ಆಕರ್ಷಿಸದೆ ಬಿಡಲ್ಲ. ಹಚ್ಚಾಹಸಿರನ ಗುಡ್ಡಕಾಡುಗಳು, ಎತ್ತರದ ಪರ್ವತ ಶ್ರೇಣಿಗಳು, ಸೂರ್ಯನ ಕಿರಣಕ್ಕೆ ಬೆಳ್ಳಿಯಂತೆ ಹೊಳೆಯುವ ಮಂಜು ಇವೆಲ್ಲವು ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ.
ಮನಾಲಿ ಭಾರತದ ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಒಂದು ಸುಂದರ ಗಿರಿಧಾಮ. ‘ಮನಾಲಿ’ಯು, ಕುಲು ಜಿಲ್ಲೆಯಲ್ಲಿರುವ ಅತ್ಯಂತ ಸುಂದರವಾದ ಪ್ರದೇಶವಾಗಿದೆ.
ಸದಾ ಮಂಜಿನಿಂದ ಆವೃತವಾಗಿರುವ ಪರ್ವತಗಳಿಂದಾಗಿ ಇಲ್ಲಿಯ ಕಣಿವೆಗಳಿಗೆ ‘ಬೆಳ್ಳಿಯ ಕಣಿವೆ’ಗಳು ಎಂಬ ಹೆಸರಿನಿಂದ ಪ್ರಖ್ಯಾತಿ ಹೊಂದಿದೆ. ಬೇಸಗೆಯಲ್ಲೂ ಹಿತ ಹಾಗೂ ಆಹ್ಲಾದಕರವೆನಿಸುತ್ತದೆ. ಇದು ಭಾರತದ ಒಂದು ಸಾಂಸ್ಕೃತಿಕ(ಸಪ್ತ ಋಷಿಗಳು ನೆಲೆಸಿದ) ನೆಲೆವೀಡು ಎನಿಸಿದೆ. ಮನಾಲಿ ಮುಖ್ಯವಾಗಿ ಡಿಸೆಂಬರ್ ಮತ್ತು ಮಾರ್ಚ್ ಆರಂಭದ ನಡುವೆ ಹಿಮಪಾತವನ್ನು ಅನುಭವಿಸುತ್ತದೆ.
‘ಮನು ನಿಲಯ’ವೇ ಕಾಲಕ್ರಮೇಣ ‘ಮನಾಲಿ’ ಆಯಿತೆಂಬ ಪ್ರತೀತಿಯಿದೆ. ಅದಕ್ಕೆ ಪೂರಕವಾಗಿ ಇಲ್ಲಿ ಮನುವಿನ ಹೆಸರಿಗೆ ಅರ್ಪಿಸಲ್ಪಟ್ಟ ಪುರಾತನ ದೇವಾಲಯವೊಂದಿದೆ. ಮನಾಲಿ ಕಣಿವೆಯನ್ನು ‘ದೇವರ ಕಣಿವೆ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇಲ್ಲಿನ ಕಣಿವೆಗಳು ನೋಡುಗಾರರನ್ನು ಮೂಕವಿಸ್ಮಿತಗೊಳಿಸುತ್ತದೆ.
ಮನಾಲಿಯ ವಾತಾವರಣವು ವರ್ಷಪೂರ್ತಿ ತಂಪು ತಂಪಾಗಿರುತ್ತದೆ. ಚಳಿಗಾಲದ ಸಂದರ್ಭದಲ್ಲಿ ಅತಿ ಹೆಚ್ಚಿನ ಚಳಿಯಿದ್ದರೆ ಬೇಸಿಗೆಯಲ್ಲಿ ಉಷ್ಣತೆಯು ಹಿತ್ಮಯವಾಗಿರುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ತಾಪಮಾನ ಕನಿಷ್ಠ -15 ರಿಂದ ಗರಿಷ್ಠ 05 ಡಿಗ್ರಿ ಸೆಲ್ಸಿಯಸ್ ಇದ್ದು ಬೇಸಿಗೆಯಲ್ಲಿ ಕನಿಷ್ಠ 04 ರಿಂದ ಗರಿಷ್ಠ 15 ಡಿಗ್ರಿ ಸೆಲ್ಸಿಯಸ್ ವರೆಗಿರುತ್ತದೆ.
ಇಲ್ಲಿ ಅನುಭವಿಸಬೇಕಾಗಿರುವ ಪ್ರಕೃತಿ ಸೌಂದರ್ಯದಲ್ಲಿ ಸೋಲಂಗ್ ಕಣಿವೆ ಪ್ರಮುಖವಾದ್ದು. ಈ ಕಣಿವೆಯ ವಿಶೇಷತೆ ಎಂದರೆ ಬೇಸಿಗೆಯ ಸಮಯದಲ್ಲಿ ಹಸಿರಿನಿಂದ ಕೂಡಿರುವ ಕಣಿವೆ ಚಳಿಗಾಲದಲ್ಲಿ ಹಿಮಪಾತವಾಗಿ ಸ್ಕೇಟಿಂಗ್ ನಂತಹ ಸಾಹಸಮಯ ಚಟುವಟಿಕೆಗೆ ಪ್ರೇರಿಪಿಸುತ್ತದೆ.
ಮನಾಲಿಯಲ್ಲಿ ಹಿಡಿಂಬಾ ದೇವಿ ದೇವಾಲಯವು ವಿಶಿಷ್ಟವಾಗಿದೆ. ಪಾಂಡವರಲ್ಲಿ ಒಬ್ಬನಾದ ಭೀಮನ ಮಡದಿಗಾಗಿ ಸ್ಥಾಪಿಸಲಾದ ದೇವಲಯವಾಗಿದೆ. ಇಲ್ಲಿನ ಸ್ಥಳೀಯ ಜನರು ಹಿಡಿಂಬಾಳನ್ನು ದೇವಿಯಾಗಿ ಅನಾದಿ ಕಾಲದಿಂದ ಪೂಜಿಸುತ್ತಾ ಬಂದಿದ್ದಾರೆ.
ಭೃಗು ಕೆರೆ ಮನಾಲಿಯ ಬಿಸಿ ನೀರಿನ ಬುಗ್ಗೆಗಳಿಗೆ ಪ್ರಸಿದ್ಧವಾಗಿದೆ. ಭೃಗು ಕೆರೆಯು ಅತ್ಯಂತ ಮನಸೆಳೆಯುವ ಕೆರೆಯಾಗಿದೆ. ಮನಾಲಿಯ ಪ್ರಕೃತಿ ಧಾಮವು ಮನಾಲಿಯ ಮತ್ತೊಂದು ಆಕರ್ಷಕ ತಾಣವಾಗಿದೆ. ಈ ಧಾಮವು ಅಭೂತವಾದ ಪ್ರಕೃತಿ ಸೌಂದರ್ಯವನ್ನು ಹೊಂದಿದ್ದು, ವಿಹಾರ ನಡಿಗೆಗೆ ಹೆಚ್ಚು ಹೆಸರುವಾಸಿಯಾಗಿದೆ. ಅತ್ಯುತ್ತಮ ಹೊಟೇಲ್, ರೆಸಾರ್ಟ್ಗಳು ಇಲ್ಲಿ ತಂಗಲು ಲಭ್ಯವಿರುತ್ತದೆ. ಜೊತೆಗೆ ಶಾಪಿಂಗ್ ಮಾಡಲು ಬಹಳವಾಗಿ ಅವಕಾಶವಿದೆ.