ಎಥೆನಾಲ್ ಒಂದು ಸಾವಯವ ಸಂಯುಕ್ತವಾಗಿದೆ. ಇದರ ರಾಸಾಯನಿಕ ಸೂತ್ರ C₂H₆O ಆಗಿದೆ. ದೇಶದಾದ್ಯಂತ ಎಥೆನಾಲ್ ಉತ್ಪಾದನಾ ಘಟಕಗಳನ್ನು ತೆರೆಯುವುದನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಹಲವು ವಿನಾಯಿತಿಗಳನ್ನು ನೀಡಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದೆ. ಈ ಯೋಜನೆಯ ಮುಖ್ಯ ಉದ್ದೇಶ ವಾಯು ಮಾಲಿನ್ಯ ಮತ್ತು ಕಚ್ಛಾ ತೈಲ ಆಮದು ಕಡಿಮೆಮಾಡುವುದು. ಕೆಲವೇ ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಬೆಲೆ ಕುಸಿಯಲಿದೆ. ರೈತರು ಉತ್ಪಾದಿಸುವ ಎಥೆನಾಲ್ ಇಂಧನದಿಂದ ದೇಶದ ಎಲ್ಲಾ ವಾಹನಗಳೂ ಚಲಿಸಲಿದೆ. ಆಗಸ್ಟ್ನಿಂದ ಎಥೆನಾಲ್ನಲ್ಲಿ ಶೇಕಡಾ 100 ರಷ್ಟು ಚಾಲನೆಯಲ್ಲಿರುವ ವಾಹನಗಳನ್ನು ಪ್ರಾರಂಭಿಸುತ್ತೇವೆ. ಬಜಾಜ್, ಟಿವಿಎಸ್ ಮತ್ತು ಹೀರೋ ಎಥೆನಾಲ್ನಲ್ಲಿ ಶೇಕಡಾ 100 ರ ಮೋಟಾರ್ಸೈಕಲ್ಗಳನ್ನು ತಯಾರಿಸಿವೆ ” ಎಂದು ನಿತಿನ್ ಗಡ್ಕರಿ ಸಂದರ್ಶನದಲ್ಲಿ ಈ ಮೂಲಕ ತಿಳಿಸಿದ್ದಾರೆ.
ನಾಗಾಲೋಟದಲ್ಲಿ ಓಡುತ್ತಿರುವ ಪೆಟ್ರೋಲ್ ದರವನ್ನು ಹಿಡಿತಕ್ಕೆ ತರುವುದು ಹೇಗೆ? ಇಂದು ನಮ್ಮ ಬೈಕು, ಕಾರುಗಳಿಗೆ ಲೀಟರ್ಗಟ್ಟಲೆ ತುಂಬಿಸಿಕೊಳ್ಳುವ ಇದೇ ಪೆಟ್ರೋಲ್ ಭವಿಷ್ಯದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿರುವಂಥ ಇನ್ನಿತರ ಇಂಧನಗಳಿಗೆ ಜಗತ್ತು ಹುಡುಕಾಡುತ್ತಲೇ ಇತ್ತು. ಈ ಸಂದರ್ಭದಲ್ಲಿ ವಿಜ್ಞಾನಿಗಳ ಕಣ್ಣಿಗೆ ಅಮೃತದಂತೆ ಕಾಣಿಸಿದ್ದು ಎಥೆನಾಲ್! ಸಮಸ್ತ ಜೀವರಾಶಿಗಳ ಆರೋಗ್ಯದ ದೃಷ್ಟಿಯಿಂದಲೂ ಎಥೆನಾಲ್ ಒಳ್ಳೆಯದು. ಪೆಟ್ರೋಲ್ನಂತೆ ಎಥೆನಾಲ್ ಭೂಮಿಯಡಿ ಸಿಗುವಂಥದ್ದಲ್ಲ. ಕಬ್ಬು, ಮೆಕ್ಕೆಜೋಳ, ಹಣ್ಣು, ಅಕ್ಕಿ, ಹುಲ್ಲು, ತರಕಾರಿ ಹಾಗೂ ಇನ್ನಿತರ ಕೆಲವು ಧಾನ್ಯಗಳಿಂದ ಉತ್ಪಾದಿಸಬಹುದಾದಂಥ ಸಸ್ಯ ಜನ್ಯ ಇಂಧನ. ಎಥೆನಾಲ್ನಲ್ಲಿ ಯಾವುದೇ ರೀತಿಯ ರಾಸಾಯನಿಕಗಳ ಮಿಶ್ರಣ ಇಲ್ಲದಿರುವುದರಿಂದ ಜೀವಿಗಳಿಗೆ ಹಾಗೂ ಪರಿಸರಕ್ಕೆ ಹಾನಿಕಾರಕವಾಗಿಲ್ಲ ಎಂಬುದು ವಿಶೇಷ. ಕಡಿಮೆ ವೆಚ್ಚದಲ್ಲಿ ಎಥೆನಾಲ್ ಉತ್ಪಾದಿಸಲು ಗುಣಮಟ್ಟದ ಕಬ್ಬು ಮತ್ತು ಅಕ್ಕಿ ಪ್ರಮುಖ ಕಚ್ಚಾವಸ್ತು. ಪೆಟ್ರೋಲಿಯಂ ಉತ್ಪನ್ನಗಳ ಜತೆ ಎಥೆನಾಲ್ ಅನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮಿಶ್ರಣಗೊಳಿಸಿ ವಾಹನಗಳಿಗೆ ಇಂಧನವಾಗಿ ಬಳಸಬಹುದು. ಇದರ ಬಳಕೆಯಿಂದ ವಾಹನಗಳು ಹೊರಸೂಸುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವು ಕಡಿಮೆಯಾಗಿ ಪರಿಸರ ಮಾಲಿನ್ಯವೂ ಉಂಟಾಗುವುದಿಲ್ಲ.
ಕಬ್ಬಿನಲ್ಲಿರುವ ಅಲ್ಕೋಹಾಲ್ ಸಂಬಂಧಿ ಅಂಶಗಳು ಗುಣಮಟ್ಟದ ಎಥೆನಾಲ್ ಉತ್ಪಾದನೆಗೆ ಸಹಕಾರಿಯಾಗಿವೆ. ಕರ್ನಾಟಕದಲ್ಲಿ ಎಥೆನಾಲ್ಗೆ ವಿಫುಲ ಅವಕಾಶ ಕಬ್ಬಿನ ಹಾಲಿನಿಂದ ನೇರವಾಗಿ ಎಥೆನಾಲ್ ತಯಾರಿಸುವುದು. ಸಕ್ಕರೆ ಪೂರೈಕೆಗೆ ಕೊರತೆಯಾಗದಂತೆ ಎಥೆನಾಲ್ ಅನ್ನು ಹೇರಳವಾಗಿ ಉತ್ಪಾದಿಸಲು ಎಲ್ಲ ಅವಕಾಶಗಳೂ ಇವೆ. ಕಬ್ಬು ಬೆಳೆಯ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲಿಯೇ ಬ್ರೆಜಿಲ್ ನಂತರದ 2ನೇ ಸ್ಥಾನದಲ್ಲಿದೆ. ದೇಶದಲ್ಲಿ ಅಂದಾಜು 60 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬನ್ನು ಬೆಳೆಯಲಾಗುತ್ತದೆ. ನೈಸರ್ಗಿಕವಾಗಿ ದೊರೆಯುವ ಸಂಪನ್ಮೂಲ ಬಳಸಿಕೊಂಡು ಗುಣಮಟ್ಟದ ಕಬ್ಬು ಬೆಳೆಯನ್ನು ಬೆಳೆದು ವಿಶ್ವದಲ್ಲಿಯೇ ಅತಿ ಹೆಚ್ಚು ಎಥೆನಾಲ್ ಉತ್ಪಾದಿಸಬಹುದಾದ ಅವಕಾಶವು ಭಾರತದ ಕೈಯಲ್ಲಿದೆ. ಪರಿಸರಕ್ಕೆ ಹಾಗೂ ಸರಕಾರದ ಖಜಾನೆಗೆ ಇದರಿಂದ ಲಾಭವಾಗುವುದಲ್ಲದೆ, ಕಬ್ಬು ಬೆಳೆಗಾರರೂ ಆರ್ಥಿಕವಾಗಿ ಬಲಗೊಳ್ಳುವಂತಾಗುತ್ತದೆ. ಒಂದು ಟನ್ ಕಬ್ಬಿನಿಂದ ಸರಾಸರಿ 70 ಲೀಟರ್ ಎಥೆನಾಲ್ ಉತ್ಪಾದಿಸಬಹುದು.
2019ರಿಂದ 2023ರವರೆಗೆ ಒಟ್ಟು 29.05 ಲಕ್ಷ ಟನ್ ಉತ್ತಮ ಗುಣಮಟ್ಟದ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ನೀಡಿದೆ. ಮಾನವ ಬಳಕೆಗೆ ಉಪಯುಕ್ತವಲ್ಲದ ಅಕ್ಕಿ, ಜೋಳ ಸೇರಿದಂತೆ ಆಹಾರ ಧಾನ್ಯಗಳನ್ನು ಬಳಸಿ ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸಲು ರಾಷ್ಟ್ರೀಯ ಜೈವಿಕ ಇಂಧನ ಯೋಜನೆ 2018ಕ್ಕೆ ಸರ್ಕಾರವು ತಿದ್ದುಪಡಿ ತಂದಿತ್ತು. ಆದರೆ, ಭಾರತ ಆಹಾರ ನಿಗಮದ (ಎಫ್ಸಿಐ) ಬಳಿ ಇರುವ ಉತ್ತಮ ಗುಣಮಟ್ಟದ ಹೆಚ್ಚುವರಿ ಅಕ್ಕಿಯನ್ನೂ ಎಥೆನಾಲ್ ಉತ್ಪಾದನೆಗೆ ಬಳಸಬಹುದು ಎಂದು 2020ರಲ್ಲಿ ಮತ್ತೊಮ್ಮೆ ತಿದ್ದುಪಡಿ ತರಲಾಗಿದೆ. ಹೀಗಾಗಿ 2022–23ನೇ ಆರ್ಥಿಕ ವರ್ಷದಲ್ಲಿ ಸುಮಾರು 16 ಲಕ್ಷ ಟನ್ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ ಬಳಸಿಕೊಳ್ಳಲಾಗಿದೆ.
ಎಥೆನಾಲ್ ಬಳಕೆ ಬೇರೆ ದೇಶಗಳಲ್ಲಿ 15% ರಿಂದ 50% ವರೆಗಿದೆ. ಭಾರತದಲ್ಲಿ ಕೇವಲ 3% ರಷ್ಟಿದೆ. ಭಾರತಕ್ಕೆ ಎಥೆನಾಲ್ ಅತಿ ಮುಖ್ಯ. ಏಕೆಂದರೆ ಭಾರತದ ಆದಾಯದ ಬಹುಪಾಲು ಭಾಗವು ಇಂಧನಕ್ಕಾಗಿಯೇ ವ್ಯಯವಾಗುತ್ತಿದೆ. ಮಾರುಕಟ್ಟೆಯಲ್ಲಿ ಎಥೆನಾಲ್ ದರವು ಪ್ರತಿ ಲೀಟರ್ಗೆ 66 ರೂ. ಇದೆ. ಭಾರತಕ್ಕೆ ಪರ್ಯಾಯ ಇಂಧನವಾಗಿ ಎಥನಾಲ್ ಪೂರ್ಣ ಪ್ರಮಾಣದಲ್ಲಿ ಲಭ್ಯವಾದಲ್ಲಿ ಶೀಘ್ರದಲ್ಲೇ ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಭಾರತೀಯ ರಸ್ತೆಗಳಲ್ಲಿ ಅಗ್ಗದ ಇಂಧನದಲ್ಲಿ ಓಡುವುದನ್ನು ಕಾಣಬಹುದು.