ಕೊಟ್ಟಾಯಂ: ಅದು 1980-90 ರ ದಶಕದ ಕಾಲ. ಕೇರಳದಲ್ಲಿ ಮಲಯಾಳಂ ವಾರ ಪತ್ರಿಕೆ ಮಂಗಳ ಅತ್ಯಂತ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಕಾಲ. ದಿನಪತ್ರಿಕೆಗಳ ಪ್ರಸಾರ ಸಂಖ್ಯೆಯನ್ನೇ ಹಿಂದಿಕ್ಕಿ ದಿನೇ ದಿನೇ ಪ್ರಸಾರ ಹೆಚ್ಚಿಸಿಕೊಳ್ಳುತಿದ್ದ ಮಂಗಳ ವಾರಪತ್ರಿಕೆ ಕಳೆದ ಏಪ್ರಿಲ್ ತಿಂಗಳಿನಿಂದ ತನ್ನ ಮುದ್ರಣ ಮಾಧ್ಯಮದ ಪ್ರಕಟಣೆ ನಿಲ್ಲಿಸಿದ್ದು ಡಿಜಿಟಲ್ ಆವೃತ್ತಿ ಪ್ರಕಟಿಸುವುದಾಗಿ ತಿಳಿಸಿದೆ.
1969 ರಲ್ಲಿ ಕೇರಳ ರಾಜ್ಯದ ಕೊಟ್ಟಾಯಂ ನಗರದಿಂದ ಪ್ರಕಟಣೆ ಆರಂಭಿಸಿದ ಮಂಗಳಂ ಮೊದಲಿಗೆ ಮಾಸಪತ್ರಿಕೆ ಆಗಿತ್ತು. ಜನಪ್ರಿಯತೆಯಿಂದ ದಿನೇ ದಿನೇ ಪ್ರಸಾರ ಹೆಚ್ಚಿಸಿಕೊಳ್ಳುತ್ತಾ ಸಾಗಿ ವಾರ ಪತ್ರಿಕೆ ಆಗಿ ಬದಲಾಯಿತು. ನಂತರ ಮಂಗಳ ವಾರಪತ್ರಿಕೆ ಆಗಿ ಕರ್ನಾಟಕ ಆವೃತ್ತಿ ಆರಂಬಿಸಿತು. ಇಲ್ಲಿಯೂ ಕೂಡ ಅಲ್ಪ ಕಾಲದಲ್ಲೇ ಜನಮನ ಗೆದ್ದ ಮಂಗಳ ಚಿಣ್ಣರಿಗಾಗಿಯೇ ಬಾಲ ಮಂಗಳ ವನ್ನು ಹೊರ ತಂದಿತು. ಆಗ ಕನ್ನಡದಲ್ಲಿ ಸುಧಾ , ತರಂಗ ವಾರ ಪತ್ರಿಕೆಗಳದ್ದೇ ಕಾರು ಬಾರು ಆಗಿತ್ತು. ಆದರೆ ಆ ಪತ್ರಿಕೆಗಳಿಗಿಂತ ಕೊಂಚ ದರ ಕಡಿಮೆ ಇದ್ದ ಮಂಗಳ ವಾರ ಪತ್ರಿಕೆ ಅಲ್ಪ ಕಾಲದಲ್ಲೇ ಪ್ರಸಾರದಲ್ಲಿ ಅವೆರಡನ್ನೂ ಹಿಂದಿಕ್ಕಿತು. ಆಗ ಚೆನ್ನೈ ಮೂಲದ ಚಂದಮಾಮ ಮಾಸ ಪತ್ರಿಕೆ ಮಕ್ಕಳಿನಿಂದ ಹಿಡಿದು ವಯಸ್ಕರವರೆಗೂ ಜನಪ್ರಿಯವಾಗಿತ್ತು. ಬಾಲ ಮಂಗಳ ಚಂದಮಾಮ ವನ್ನೂ ಹಿಂದಿಕ್ಕಿ ಜನಪ್ರಿಯವಾಯಿತು. ಆ ಸಮಯದಲ್ಲಿ ವಾರಕ್ಕೊಮ್ಮೆ ಬರುವ ಮಂಗಳ ವಾರಪತ್ರಿಕೆ ಹೈಸ್ಕೂಲ್ , ಕಾಲೇಜು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿತ್ತು. ಈ ಪತ್ರಿಕೆ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನೂ ಹೆಚ್ಚಿಸಿತು. ಇದಲ್ಲದೆ ಓದುಗರನ್ನು ಹಿಡಿದಿಟ್ಟುಕೊಳ್ಳಲು ಪ್ರತೀ ಊರಿನಲ್ಲೂ ಮಂಗಳ ಕಲಾ ಸಾಹಿತ್ಯ ವೇದಿಕೆ , ಸ್ನೇಹ ಸೇತು ಮುಂತಾದ ಕಾಲಂ ಗಳನ್ನೂ ಆರಂಬಿಸಿತ್ತು. ಆ ಸಮಯದಲ್ಲಿಯೇ ಮಂಗಳ ದಿನಪತ್ರಿಕೆಗಳ ಪ್ರಸಾರ ಸಂಖ್ಯೆಗೂ ಸೆಡ್ಡು ಹೊಡೆದು ಲಕ್ಷಾಂತರ ಸಂಖ್ಯೆಯ ಓದುಗರನ್ನು ಪಡೆದುಕೊಂಡಿತ್ತು. ಕರಾವಳಿ ಭಾಗದಲ್ಲಿ ಅತ್ಯಂತ ಬೇಡಿಕೆಯ ವಾರಪತ್ರಿಕೆ ಆಗಿದ್ದ ಮಂಗಳ ಹಂಪನಕಟ್ಟೆಯ ಫುಟ್ ಪಾತ್ ನಲ್ಲಿಯೇ ವಾರಕ್ಕೆ 10 ಸಾವಿರ ಪ್ರತಿ ಮಾರಾಟಗೊಳ್ಳುತಿತ್ತು! 1985ರಲ್ಲಿ ಮಂಗಳಂ 17 ಲಕ್ಷ ಪ್ರಸಾರ ಸಂಖ್ಯೆ ಹೊಂದಿದ್ದು ಇದು ದೇಶದಲ್ಲೇ ಅತ್ಯಂತ ಜನಪ್ರಿಯ ಪತ್ರಿಕೆ ಎಂಬ ಖ್ಯಾತಿಗೂ ಪಾತ್ರವಾಗಿತ್ತು.
ಆದರೆ ಬದಲಾವಣೆ ಜಗದ ನಿಯಮ. ಜಗತ್ತು ಡಿಜಿಟಲ್ ಯುಗಕ್ಕೆ ಮುಖ್ಯವಾಗಿ ದೃಶ್ಯ ಮಾಧ್ಯಮದೆಡೆಗೆ ಆಕರ್ಷಣೆ ಪಡೆದುಕೊಂಡಂತೆಯೇ ಮಂಗಳ ಅಷ್ಟೇ ಅಲ್ಲ ಎಲ್ಲಾ ಮುದ್ರಣ ಮಾಧ್ಯಮದ ವಾರ ದಿನಪತ್ರಿಕೆಗಳ , ದಿನ ಪತ್ರಿಕೆಗಳ ಪ್ರಸಾರ ಸಂಖ್ಯೆ ಕುಸಿಯತೊಡಗಿತು. ಜಾಹೀರಾತುದಾರರೂ ಮುದ್ರಣ ಮಾಧ್ಯಮಕ್ಕೆ ನೀಡುವ ಜಾಹೀರಾತನ್ನು ಕಡಿಮೆ ಮಾಡಿ ದೃಶ್ಯ ಮಾಧ್ಯಮದ ಮೊರೆ ಹೋಗತೊಡಗಿದರು. ಆದರೆ ಮುದ್ರಣ ಮಾಧ್ಯಮದ ಜೀವಾಳವಾದ ನ್ಯೂಸ್ ಪ್ರಿಂಟ್ ಮತ್ತು ಇತರ ಉತ್ಪಾದನಾ ವೆಚ್ಚ ಗಣನೀಯವಾದ ಹೆಚ್ಚಳ ಕಂಡಿತು. ಅದರಲ್ಲೂ ಎಲ್ಲರ ಕೈಗೂ ಸ್ಮಾರ್ಟ ಫೋನ್ ಬಂದ ನಂತರ ಮುದ್ರಣ ಮಾಧ್ಯಮದ ಪತ್ರಿಕೆಗಳಿಗೆ ಓದುಗರೇ ಕಡಿಮೆ ಆಗಿ ಹೋದರು. ಜತೆಗೇ ಮುದ್ರಣ ಮಾಧ್ಯಮದ ಪತ್ರಿಕೆಗಳ ದರವೂ ದುಬಾರಿ ಎನಿಸತೊಡಗಿತು. ಬದಲಿಗೆ ಜನರು ವರ್ಷಕ್ಕೆ ಸಾವಿರ ರೂಪಾಯಿ ನೀಡಿ ಇ ಪೇಪರ್ ಗೆ ಚಂದಾದಾರರಾಗಿ ಮೊಬೈಲ್ ನಲ್ಲಿಯೇ ನಿತ್ಯ ಪೇಪರ್ ಒದಲು ಆಸಕ್ತಿ ತೋರತೊಡಗಿದರು. ಕೆಲವು ದಿನ ಪತ್ರಿಕೆಗಳು ಉಚಿತ ಇ ಪೇಪರ್ ಗಳನ್ನೂ ಈಗಲೂ ನೀಡುತ್ತಿವೆ.
ದಿನಪತ್ರಿಕೆಗಳಿಗೇ ಒದುಗರು ಇಲ್ಲದಾದಾಗ ವಾರಪತ್ರಿಕೆ ಉಳಿಯುವದೆಂತು ? ಹೀಗಾಗಿ ಜನಪ್ರಿಯ ವಾರಪತ್ರಿಕೆ ಮಂಗಳ ಅನಿವಾರ್ಯವಾಗಿ ತನ್ನ ಮುದ್ರಣ ಮಾಧ್ಯಮದ ಪ್ರಕಟಣೆ ನಿಲ್ಲಿಸಿದೆ. ಆದರೆ ಡಿಜಿಟಲ್ ಆಔಋತ್ತಿ ಮುಂದುವರೆಸುವುದಾಗಿ ತಿಳಿಸಿದೆ. ಇದನ್ನು ಓದುಗರು ಎಷ್ಟರಮಟ್ಟಿಗೆ ಸ್ವೀಕರಿಸುವರೋ ಕಾದು ನೋಡಬೇಕಿದೆ. ಪತ್ರಿಕೆ ನಿಲ್ಲಿಸುವ ಕೊನೆ ಸಂಚಿಕೆಯಲ್ಲಿ
ಸಂಪಾದಕ ಎನ್ನೇಬಿ ಮೊಗ್ರಾಲ್ ಪುತ್ತೂರು ಹೀಗೆ ಬರೆಯುತ್ತಾರೆ:
“ಇದು ಅನಿವಾರ್ಯದ ನೋವು…ಈ ಕ್ಷಣದ ತಲ್ಲಣಗಳಿಗೆ ಒಡ್ಡಿಕೊಂಡೇ ಮುಂದಡಿ ಇಡಬೇಕಾದ ಪರಿಸ್ಥಿತಿ .ಮಂಗಳದ ಓದುಗರ ಪಾಲಿಗೆ ಇದು ಅನಿರೀಕ್ಷಿತವಿರಬಹುದಾದರೂ ನಮ್ಮ ಪಾಲಿಗೆ ನಿರೀಕ್ಷಿತವೇ .ಸತತ ಬಂದಪ್ಪಳಿಸಿದ ಕೊರೊನಾ ಮಹಾಮಾರಿ ಇಡೀ ಪತ್ರಿಕೋದ್ಯಮಕ್ಕೆ ಕೊಟ್ಟ ಹೊಡೆತ ಎಂಥಾದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವಂಥಾದ್ದೇ. ಹಾಗಿದ್ದೂ ನಾವು ಮತ್ತೆ ಮೂರು ವರ್ಷ ಸಾಹಸ ಮಾಡುತ್ತಲೇ ಬಂದೆವು. ಆದರೆ ಇದೀಗ ಮಂಗಳವನ್ನು ನಿಲ್ಲಿಸಲೇಬೇಕಾದ ಆರ್ಥಿಕ ತುರ್ತು ಎದುರಾಗಿದೆ . ಕೆಳಗೆ ನೀವು ನೋಡುತ್ತಿರುವುದು, ಕಳೆದ ನಲ್ವತ್ತು ವರ್ಷಗಳಿಂದ ಕನ್ನಡಿಗರ ಮನೆಮಾತಾಗಿದ್ದ ‘ಮಂಗಳ’ ವಾರಪತ್ರಿಕೆಯ ಕೊನೆಯ ಸಂಚಿಕೆಯನ್ನು! ನಿರೀಕ್ಷಿತವೇ ಆದ್ದರಿಂದ ನಿರ್ಲಿಪ್ತತೆಯೂ ಜೊತೆಗಿರುತ್ತದೆಂದು ಎಷ್ಟೋ ಸಲ ಅಂದುಕೊಂಡದ್ದು ಇದೆಯಾದರೂ ಒಮ್ಮೊಮ್ಮೆ ಎದೆ ಭಾರವಾಗುವುದಿದೆ. ವಾಸ್ತವದಲ್ಲಿ, 2022 ರ ಸೆಪ್ಟೆಂಬರ್ 30ಕ್ಕೇ ನನ್ನ ನಿವೃತ್ತಿಯಾಗಿತ್ತು. ನಮ್ಮಲ್ಲಿ 58 ರ ವಯಸ್ಸಿಗೆ ಆ ಘಟ್ಟ. ಹಾಗಿದ್ದೂ ಸಂಸ್ಥೆ ನನ್ನನ್ನು ಮುಂದುವರಿಸಿತು. ಈಗನಿಸುತ್ತಿದೆ ಅವತ್ತೇ ವಿದಾಯ ಹೇಳಿದ್ದಿದ್ದರೆ ಇವತ್ತಿನ ಎದೆಭಾರ ತಪ್ಪುತ್ತಿತ್ತು ಅಂತ ! ಎದೆಭಾರ ಯಾಕೆಂದರೆ , ಮಂಗಳವನ್ನು ಎದೆಯಲ್ಲಿಟ್ಟು ಪ್ರೀತಿಸುವ ಲಕ್ಷಾಂತರ ಮಂದಿ ಓದುಗರ ಮನೆ -ಮನಗಳಲ್ಲಿ ಒಂದು ಬಗೆಯ ಶೂನ್ಯತೆ ಆವರಿಸಲಿದೆ ಎಂಬ ಕಾರಣಕ್ಕೆ. ಕೋವಿಡ್ ಕಾಲದಲ್ಲಿ 3-3 ತಿಂಗಳು ಪತ್ರಿಕೆ ನಿಂತಾಗ ಓದುಗರು ವ್ಯಕ್ತಪಡಿಸಿದ ಪ್ರೀತಿ – ಕಾಳಜಿ -ನಿರಾಶೆ -ತಲ್ಲಣ -ಚಡಪಡಿಕೆಗಳೆಲ್ಲ ಇವತ್ತಿಗೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ .ಓದುಗರ ಬೆಲೆ ಕಟ್ಟಲಾಗದ ಆ ನಿರ್ಮಲ ಪ್ರೀತಿ ಮುಂದೆ ನಾನು ಮೂಕನಾಗಿದ್ದಿದೆ! ಒಬ್ಬ ಸಂಪಾದಕನಿಗೆ ಇದಕ್ಕಿಂತ ಹೆಚ್ಚಿನ ಧನ್ಯತೆ ಬೇರೇನಿದೆ?”