ಸೋಮವಾರದಿಂದ ಶುಕ್ರವಾರದವರೆಗೆ ಒಂದೇ ಸಮನೆ ಕೆಲಸ ಮಾಡಿದ ಎಲ್ಲರಿಗೂ ಇರಬಹುದು ಇಲ್ಲ ಶಾಲೆಗೆ ಹೋಗಿ ಸುಸ್ತಾದ ಮಕ್ಕಳಿರಬಹುದು, ಶನಿವಾರ, ಭಾನುವಾರವೆಂದ್ರೆ ರಜೆ ಸಿಗುತ್ತದೆ. ಆ ದಿನದಲ್ಲಿ ವಾರ ಪೂರ್ತಿ ದುಡಿದ ದಣಿವನ್ನು ಆರಿಸಿಕೊಳ್ಳಲು ಸಮಯ ಸಿಕ್ಕಂತಾಗುತ್ತದೆ.
ಮನುಷ್ಯರಿಗೆ ವಾರದಲ್ಲಿ ಒಂದೋ ಎರಡೋ ದಿನ ರಜೆ ಸಿಗುತ್ತದೆ ಆದರೆ ಪ್ರಾಣಿಗಳಿಗೆ ಅದರಲ್ಲೂ ಸಾಕು ಪ್ರಾಣಿಗಳಿಗೆ ರಜೆ ಸಿಗುವುದಿಲ್ಲ. ಅವು ಕೂಡ ವಾರಗಟ್ಟಲೆ ಅಥವಾ ವರ್ಷಗಟ್ಟಲೆ ಒಂದೇ ರೀತಿಯ ಕೆಲಸಗಳನ್ನು ಮಾಡುತ್ತಿರುತ್ತವೆ.
ಇಂದಿನ ಸ್ಪರ್ಧಾ ಯುಗದಲ್ಲಿ ನಾಯಿ, ಹಸು, ಮೊಲ ಮುಂತಾದ ಅನೇಕ ಪ್ರಾಣಿಗಳ ಸಾಕಣೆ ಒಂದು ದೊಡ್ಡ ಬ್ಯುಸಿನೆಸ್ ಆಗಿ ಹೋಗಿದೆ. ಸಾಕುಪ್ರಾಣಿಗಳಿಂದಲೇ ಮನುಷ್ಯ ಲಕ್ಷಾಂತರ ಹಣ ಸಂಪಾದಿಸುತ್ತಿರುತ್ತಾನೆ. ಹೊಲದಲ್ಲಿ ಕೆಲಸ ಮಾಡುವುದಕ್ಕಾಗಿ ಅಥವಾ ಇನ್ಯಾವುದೋ ಕೆಲಸಕ್ಕಾಗಿ ಮನುಷ್ಯ ಕೆಲವು ಪ್ರಾಣಿಗಳನ್ನು ಬಳಸಿಕೊಳ್ಳುತ್ತಾನೆ. ಪ್ರಾಣಿಗಳ ಶ್ರಮದ ಮೇಲೆಯೇ ಮನುಷ್ಯನ ದುಡಿಮೆ ಅವಲಂಬಿತವಾಗಿರುತ್ತದೆ. ಹೀಗೆ ವರ್ಷಪೂರ್ತಿ ನಿಯತ್ತಿನಿಂದ ಯಜಮಾನನಿಗಾಗಿ ದುಡಿಯುವ ಅಂತಹ ಪ್ರಾಣಿಗಳಿಗೂ ರಜೆ ಬೇಕಲ್ಲವೆ?
ಅವು ಕೂಡ ನಮ್ಮಂತೆಯೇ ವಿಶ್ರಾಂತಿ ಬಯಸುತ್ತವೆ ಎನ್ನುವುದನ್ನು ಅರ್ಥಮಾಡಿಕೊಂಡ ಈ ಹಳ್ಳಿಯೊಂದರಲ್ಲಿ ಸಾಕು ಪ್ರಾಣಿಗಳಿಗೂ ವಾರಕ್ಕೊಮ್ಮೆ ರಜೆ ನೀಡಲಾಗುತ್ತಿದೆ.
ಈ ಹಳ್ಳಿಗಳಲ್ಲಿ ಪ್ರಾಣಿಗಳಿಗೂ ಸಿಗುತ್ತದೆ ವಾರಾಂತ್ಯದ ರಜಾ :
ಭಾರತದ ಈ ಹಳ್ಳಿಗಳಲ್ಲಿ ಮನುಷ್ಯರಂತೆಯೇ ಪ್ರಾಣಿಗಳಿಗೂ ಕೂಡ ರಜೆ ನೀಡಲಾಗುತ್ತೆ. ಆ ದಿನ ಪ್ರಾಣಿಗಳಿಂದ ಯಾವ ಕೆಲಸವನ್ನೂ ಮಾಡಿಸಲಾಗುವುದಿಲ್ಲ. ಜಾರ್ಖಂಡ್ ನ ಲಾತೆಹಾರ್ ನ ಪ್ರಾಣಿಗಳು ವಾರಾಂತ್ಯದ ರಜೆಯನ್ನು ಪಡೆಯುತ್ತವೆ. ಇಲ್ಲಿನ ಕೃಷಿಕರು ತಮ್ಮ ಹೊಲಗಳಲ್ಲಿ ಕೆಲಸ ಮಾಡಲು ಹಸು, ಎಮ್ಮೆ, ಗೂಳಿ ಮುಂತಾದ ಪ್ರಾಣಿಗಳನ್ನು ಬಳಸಿಕೊಳ್ಳುತ್ತಾರೆ. ಇವು ಕೂಡ ರೈತರ ಜೊತೆಗೆ ಹೊಲದಲ್ಲಿ ದುಡಿಯುತ್ತವೆ ಎಂಬ ಕಾರಣಕ್ಕೆ ಅವುಗಳಿಗೂ ಕೂಡ ವೀಕೆಂಡ್ ರಜಾ ನೀಡಲಾಗುತ್ತೆ. ಲಾತೇಹಾರ್ ಹೊರತಾಗಿ ಹರ್ಕಾ, ಮುಂಗರ್, ಲಾಲಘಡಿ ಮತ್ತು ಪಕರಾರ್ ಗಳಲ್ಲಿಯೂ ಹಸುಗಳಿಗೆ ಒಂದು ದಿನ ರಜೆ ನೀಡಲಾಗುತ್ತೆ. ವಾರಂತ್ಯದಲ್ಲಿ ಅವುಗಳನ್ನು ಮನೆಯಿಂದ ಹೊರ ಹಾಕುವುದಿಲ್ಲ. ಅವುಗಳಿಗೆ ಸಂಪೂರ್ಣ ವಿಶ್ರಾಂತಿಯನ್ನು ನೀಡಲಾಗುತ್ತದೆ ಅಂತೆ.
ಹೇಗೆ ಶುರುವಾಯ್ತು ಈ ಪರಂಪರೆ? :
ಕೆಲವು ದಶಕಗಳ ಹಿಂದೆ ಅಲ್ಲಿನ ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಒಂದು ಗೂಳಿ ಸತ್ತುಹೋಯ್ತು. ಕೆಲಸ ಮಾಡುವ ಸಮಯದಲ್ಲೇ ಗೂಳಿ ಮೃತವಾಗಿದ್ದು ಅಲ್ಲಿನವರಿಗೆ ಅತ್ಯಂತ ಬೇಸರ ತಂದಿತು. ಹೆಚ್ಚಿನ ಕೆಲಸದಿಂದ ವಿಶ್ರಾಂತಿಯೇ ಇಲ್ಲದೇ ಅದು ಸತ್ತುಹೋಯಿತೇನೋ ಎನ್ನುವ ಅಪರಾಧಿ ಮನೋಭಾವ ಅಲ್ಲಿನ ಕೃಷಿಕರನ್ನು ಕಾಡತೊಡಗಿತ್ತು. ಈ ಕಾರಣಕ್ಕಾಗಿ ಅಂದಿನಿಂದಲೂ ಜಾರ್ಖಂಡ್ ನಲ್ಲಿ ಪ್ರಾಣಿಗಳಿಗೆ ರಜೆ ನೀಡಲಾಗುತ್ತಿದೆ.
ಇವರಿಂದ ಪ್ರೇರಿತರಾದ ಸುತ್ತ ಮುತ್ತಲ ಅನೇಕ ಹಳ್ಳಿಯವರು ಕೂಡ ತಮ್ಮ ಪ್ರಾಣಿಗಳಿಗೆ ವಾರದ ಒಂದು ದಿನ ವಿಶ್ರಾಂತಿ ನೀಡುತ್ತಿದ್ದಾರೆ. ಆ ದಿನ ಪ್ರಾಣಿಗಳು ಯಾವುದೇ ಕೆಲಸವಿಲ್ಲದೇ ಆರಾಮದಿಂದ ಇರಬಹುದಾಗಿದೆ.
ಈ ಪದ್ಧತಿ ಎಲ್ಲ ಕಡೆಯೂ ಅನ್ವಯವಾಗಲಿ :
ಪ್ರಾಣಿಗಳು ಮೂಕ ಜೀವಿಗಳು. ಅವುಗಳಿಗೆ ಮನುಷ್ಯರಂತೆ ತಮ್ಮ ನೋವನ್ನು ವ್ಯಕ್ತಪಡಿಸಲು ಬರುವುದಿಲ್ಲ. ಇಂದು ಎಷ್ಟೋ ಕಡೆ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತಿದೆ. ಮನುಷ್ಯ ತನ್ನ ಲಾಭಕ್ಕಾಗಿ ಮೂಕ ಪ್ರಾಣಿಗಳನ್ನು ಬಲಿಕೊಡುತ್ತಿದ್ದಾನೆ. ಹಣದ ಆಮಿಷಕ್ಕಾಗಿ ಪ್ರಾಣಿಗಳನ್ನು ಬಳಸಿಕೊಳ್ಳುತ್ತಿದ್ದಾನೆಯೇ ಹೊರತು ಅದರ ಯೋಗಕ್ಷೇಮದ ಕಡೆ ಗಮನ ಹರಿಸುತ್ತಿಲ್ಲ. ಇಂತಹ ಮನಸ್ಥಿತಿ ಹೊಂದಿರುವವರಿಗೆ ಲಾತೇಹಾರ್ ಹಳ್ಳಿಯ ಕೃಷಿಕರು ಮಾದರಿಯಾಗಿದ್ದಾರೆ. ಈ ಹಳ್ಳಿ ಜನರು ರೂಢಿಸಿಕೊಂಡು ಬಂದ ಈ ಸಂಪ್ರದಾಯ ಮನುಷ್ಯ ಮತ್ತು ಪ್ರಾಣಿಗಳ ಸಹಜೀವನಕ್ಕೆ ಉತ್ತಮ ಉದಾಹರಣೆಯಾಗಿದೆ. ಇದು ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಗಳಿಗೂ ಸಮಾನ ಹಕ್ಕು ಸಿಗಬೇಕೆನ್ನುವುದನ್ನು ಸಾರಿ ಹೇಳುತ್ತದೆ. ಅಲ್ಲದೆ ಈ ಕ್ರಮವನ್ನು ಎಲ್ಲಾ ಕಡೆಯಲ್ಲಿ ಅನುಸರಿಸಿದರೆ ಪ್ರಾಣಿಗಳಿಗೂ ಕೂಡ ವಿಶ್ರಾಂತಿ ಸಿಕ್ಕಾಗೆ ಆಗುತ್ತದೆ.