ಕರ್ನಾಟಕದ ನೂತನ ಸರ್ಕಾರ ತಂದಿರುವ ಶಕ್ತಿ ಯೋಜನೆ ಆಟೋ ಚಾಲಕರ ದುಡಿಮೆಗೆ ಬಹಳಷ್ಟು ಅಡ್ಡಿಯಾಗುತ್ತಿದೆ ಅನ್ನೋ ಆರೋಪ ಅಲ್ಲಲ್ಲಿ ಕೇಳಿ ಬರುತ್ತಿದೆ. ಮಹಿಳೆಯರಿಗೆ ಕೊಟ್ಟಿರುವ ಉಚಿತ ಪ್ರಯಾಣದಿಂದ ಮಹಿಳೆಯರು ಸುತ್ತಾಟವನ್ನೇ ರೂಢಿ ಮಾಡಿ ಕೊಳ್ಳುತ್ತಾರೆ, ಗಂಡಂದಿರೆ ಎಚ್ಚರ ನಿಮ್ಮ ಮಹಿಳೆಯರೊಂದಿಗೆ ಜಗಳವಾಡ ಬೇಡಿ, ಹೆಂಡತಿ ತವರಿಗೆ ಹೊಗಲು ನಿಮ್ಮ ಹಣ ಬೇಕಾಗಿಲ್ಲ.
ಸರಕಾರದ ಉಚಿತ ಪ್ರಾಯಣವಿದೆ ಎಂಬ ಹಾಸ್ಯಗಳೂ ಸಾಮಾಜಿಕ ಜಾಲತಾಣದ ತುಂಬಾ ಹರಡಿದೆ. ಮಹಿಳಾ ಸ್ವಾವಲಂಬನೆಯ ಧ್ಯೆಯವನ್ನು ಸಾರಿ ರೂಪಿಸಿರುವ ಶಕ್ತಿ ಯೋಜನೆ, ಮಹಿಳಾ ದಬ್ಬಾಳಿಕೆಯನ್ನು ಒಳಗೊಂಡು ಆಕೆಯ ಸ್ವತಂತ್ರವನ್ನು ಕಸಿದು ಕೊಂಡು, ಆಕೆಯನ್ನು ತನ್ನ ಗುಲಾಮಳಾಗಿ ನಡೆಸುತ್ತಿರುವ ಗಂಡಸಿಗೆ ಅಲ್ಪ ಭೀತಿಯನ್ನು ತಂದಿರದೆ ಇಲ್ಲ.
ಇನ್ನು ‘ನಾನೆಂಬ ಮಹಿಳೆ ಮನೆಯ ನಾಲ್ಕು ಗೋಡೆಗಳಿಗೆ ಮಾತ್ರ ಮೀಸಲಾಗಿ ಅಡುಗೆಯಾವಾಳಾಗಿ ಮಾತ್ರ ಜೀವಿಸ ಬೇಕಾದವಳು’ ಎಂದು ನಂಬಿರುವವರಲ್ಲಿ ಶಕ್ತಿ ಯೋಜನೆ ಮಹಿಳೆಯನ್ನು ಮನೆಯ ಜವಾಬ್ದಾರಿಯಿಂದ ನಿರ್ಲಕ್ಷಿಸುವಂತೆ ಮಾಡುವ ಅಸ್ತ್ರ ಎಂಬ ಕಲ್ಪನೆ ಮೂಡುವುದೂ ಸಹಜ. ಅಷ್ಟಾಗಿಯೂ ಮೂವತ್ತು ರೂಪಾಯಿ ಪಡೆಯುವ ಪ್ರಯಣಕ್ಕೆ ನೂರ ಐವತ್ತು ರೂಪಾಯಿ ವಸೂಲಿ ಮಾಡುವ ಬೆಂಗಳೂರಿನ ಹಲವಾರು ಆಟೋ ಚಾಲಕರು, ಶಕ್ತಿ ಯೋಜನೆಯನ್ನು ‘ದುಡಿಮೆಗೆ ಬಿದ್ದ ಪೆಟ್ಟು’ ಎಂದು ಬಣ್ಣಿಸುವಾಗ ಚಿಂತಿಸಬೇಕಾದ ಸಂಗತಿಗಳು ಹಲವಾರಿದೆ.
ಆಟೋ ರಿಕ್ಷಾ ನನ್ನ ಅರಿವಿನಲ್ಲಿ ದುಬಾರಿ ಪ್ರಯಾಣವೇ ಆಗಿತ್ತು. ಬಸ್ ನಲ್ಲಿ ಐದು ರುಪಾಯಿಗೆ ಪ್ರಯಾನಿಸ ಬಹುದಾದ ಸ್ಥಳಕ್ಕೆ ಆಟೋದಲ್ಲಿ ನಲ್ವತ್ತರಿಂದ ಐವತ್ತು ರೂಪಾಯಿ ಅಂತೂ ಪಕ್ಕ. ಇನ್ನು ಕುಟುಂಬ ಸಮೇತವಾಗಿ ಹೋಗುವವರೋ, ವಯಸ್ಕರೋ, ಮಕ್ಕಳನ್ನು ಕರೆದು ಹೋಗುವವರೋ ಬಸ್ ಪ್ರಯಾಣದಿಂದ ಆಗುವ ಅನಾನುಕೂಲತೆಯನ್ನು ತಪ್ಪಿಸಲು ರಿಕ್ಷಾ ಪ್ರವಾಸ ಮಾಡುತ್ತಾರೆ.
ಸಮಯಕ್ಕೆ ಸರಿಯಾಗಿ ಒಂದು ಸ್ಥಳ ತಲುಪಬೇಕಾದವರೂ ಬಸ್ಗಿಂತ ರಿಕ್ಷಾವನ್ನೇ ಆರಿಸುತ್ತಾರೆ. ಈ ಯಾವ ಸಂದರ್ಭಗಳೂ ಶಕ್ತಿ ಯೋಜನೆಯಿಂದ ಇಲ್ಲದಾಗುವುದಿಲ್ಲ. ಪ್ರಾಯೋಗಿಕ ವಾಗಿ ನೋಡುವುದಾದರೆ ಬೆಂಗಳೂರಿನ ಜನ ಸಾಮಾನ್ಯರು ಅಲ್ಲಿನ ರಿಕ್ಷಾ ಚಾಲಕರಿಂದ ರೋಸಿ ಹೋಗಿದ್ದಾರೆ. ಪ್ರತೀ ನಿತ್ಯ ಮೀಟರ್ ಹಾಕದೆ ಆಟೋ ಓಡಿಸುವವರ ಸಂಖ್ಯೆಯೇ ಇಲ್ಲಿ ಹೆಚ್ಚು. ಇನ್ನು ಒಂದು ಸ್ಥಳಕ್ಕೆ ಮೂರು ಪಟ್ಟು ದುಪ್ಪಟ ಪ್ರಯಾಣ ದರ ಹೇರುವುದು ಸಾಮಾನ್ಯ ಸಂಗತಿ ಯಾಗಿದೆ. ಇನ್ನು ಯಾವ ಸ್ಥಳಕ್ಕೆ ಕರೆದರೂ ‘ಇಲ್ಲಮ್ಮ, ರಿಕ್ಷಾ ಅಲ್ಲಿಗ್ ಬರಲ್ಲ’ ಅನ್ನೋ ಮಾತು ಬಾಯಿಪಾಠ ಆದಂತಿದೆ. ಇಲ್ಲಿ ತಮ್ಮ ದುಡಿಮೆಗೆ ಸ್ವಚಾಲಕರೇ ಮುಳ್ಳಾಗುತ್ತಿದ್ದಾರೆ ವಿನಃ ಜನ ಸಾಮಾನ್ಯರೋ, ಆಡಳಿತ ನೀತಿಯೋ ಅಲ್ಲ.
ಇನ್ನು ಪರಿಪೂರ್ಣವಾಗಿ ಎಲ್ಲಾ ಮಹಿಳೆಯರಿಗೂ ಶಕ್ತಿ ಯೋಜನೆಯ ಅವಶ್ಯಕತೆ ಇತ್ತಾ ಎಂದರೆ, ಖಂಡಿತವಾಗಿಯೂ ಇಲ್ಲ. ರಾಜ್ಯ ಸರ್ಕಾರ ಈಗಾಗಲೇ ವಿದ್ಯಾರ್ಥಿಗಳಿಗೆ ಪಾಸ್ ಮೂಲಕ ಬಸ್ ಪ್ರಯಾಣದ ವ್ಯವಸ್ಥೆಯನ್ನು ಮಾಡಿತ್ತು. ವರ್ಷಕ್ಕೆ ಅಲ್ಪ ಹಣವನ್ನು ಪಡೆಯುತ್ತಿದ್ದ ಪಾಸ್ ಅನ್ನು ಯಾವುದೇ ಹಣವಿಲ್ಲದೆ ಉಚಿತ ಮಾಡಿದರೆ ಸಾಕಿತ್ತು, ಯಾಕೆಂದರೆ ವಿದ್ಯಾರ್ಥಿಗಳು ಅವಲಂಭಿತ ವರ್ಗಕ್ಕೆ ಸೇರಿದ್ದಾರೆ. ಮತ್ತೊಂದು ಅವಲಂಭಿತ ವರ್ಗ ಹಿರಿಯ ನಾಗರಿಕರದ್ದು, ಕನ್ಸೆಶನ್ ಇರುವ ಹಿರಿಯ ನಾಗರಿಕರ ಪ್ರಯಾಣ ಉಚಿತವಾಗಿಸಿದರೆ ಅವರಿಗೂ ನೆಮ್ಮದಿ ಮತ್ತು ಇಲ್ಲಿ ಗಂಡಸು ಮಹಿಳೆ ಎಂಬ ಬೆರ್ಪಡಿಕೆಯು ಇರುವುದಿಲ್ಲ. ಗೃಹ ಲಕ್ಷ್ಮಿ ಯೋಜನೆಗೆ ಇಟ್ಟ ನಿಭಂದನಯಂತೆ ಪ್ರತೀ ವ್ಯಕ್ತಿಯ ವಾರ್ಷಿಕ ಆದಾಯಕ್ಕನುಗಿನವಾಗಿ ಉಚಿತ ಪ್ರಯಾಣದ ಯೋಜನೆ ಇತ್ತರೂ ಉತ್ತಮವಿತ್ತು.
ಇವ್ಯಾವ ನಿಬಂಧನೆ ಇಲ್ಲದೆ ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಮಾಡಿದ ಕಾರಣವೇ, ಶಕ್ತಿ ಯೋಜನೆಯಲ್ಲಿ ಮಹಿಳಾ ಸ್ವಾವಲಂಭನಗಿಂತ ರಾಜಕೀಯದ ನೆರಳು ಗೋಚರಿಸುತ್ತಿರುವುದು.
ಏನೇ ಆದರೂ ತಿಂಗಳಿಗೆ ಹತ್ತು ಸಾವಿರ ದುಡಿದು ಪ್ರಯಾಣಕ್ಕಾಗಿ ನಾಲ್ಕು ಸಾವಿರ ಮೀಸಲಿಡಬೇಕಾಗಿದ್ದ ಮಹಿಳೆಯರಿಗೆ ಈ ಯೋಜನೆ ಶಕ್ತಿಯೇ ಆಗಿದೆ. ಯೋಜನೆಯ ಯಶಸ್ಸು, ಸಾರಕಾರಕ್ಕಾಗುವ ಗುಣ, ಹೊರೆ ಮುಂತಾದ ವರದಿ ಬರುವ ಆರು ತಿಂಗಳಲ್ಲಿ ಕಾದು ನೋಡಬೇಕಿದೆ.