ಇಲ್ಲಿದೆ ಐದು ಪ್ರಮುಖ ಸುದ್ದಿಗಳ ಕಂಪ್ಲೀಟ್ ರೌಂಡ್ ಅಪ್!
ಫ್ರಾನ್ಸ್ ನಲ್ಲಿ ಭುಗಿಲೆದ್ದ ಹಿಂಸಾಚಾರ: 1,311 ಜನರ ಬಂಧನ
17 ವರ್ಷದ ಯುವಕನನ್ನು ಪೊಲೀಸರು ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಫ್ರ್ಯಾನ್ಸ್ ನಲ್ಲಿ ಕಳೆದ ಮೂರು ದಿನಗಳಿಂದ ಹಿಂಸಾತ್ಮಕ ಕೃತ್ಯಗಳು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸುತ್ತಿದೆ.
ಸಾವಿರಾರು ಪ್ರತಿಭಟನಾಕಾರರು ರಸ್ತೆಗಿಳಿದು ನಡೆಸಿದ ಹಿಂಸಾತ್ಮಕ ಪ್ರತಿಭಟನೆ ವೇಳೆ 500ಕ್ಕೂ ಹೆಚ್ಚು ಕಟ್ಟಡಗಳನ್ನು ಸುಟ್ಟು ಹಾಕಲಾಗಿದ್ದು, 2000ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿಯಾಗಿವೆ.
ಪರಿಸ್ಥಿತಿ ನಿಯಂತ್ರಣಕ್ಕೆ ಸುಮಾರು 45 ಸಾವಿರ ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸುಮಾರು 1,311 ಜನರನ್ನು ಬಂಧಿಸಲಾಗಿದೆ.
ರಷ್ಯಾದ ಹಿರಿಯ ಮಿತ್ರರಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ!
ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಹಿರಿಯ ಮಿತ್ರ, ಅವರ ಮೇಕ್ ಇನ್ ಇಂಡಿಯಾ ಯೋಜನೆಯು ದೇಶದ ಆರ್ಥಿಕತೆಯನ್ನು ಗಮನಾರ್ಯ ಏರಿಕೆ ಕಾಣಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಈ ಬಗ್ಗೆ ರಷ್ಯಾದ ಏಜೆನ್ಸಿ ಫಾರ್ ಸ್ಟ್ರಾಟೆಜಿಕ್ ಇನಿಷಿಯೇಟಿನ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೇಕ್ ಇನ್ ಇಂಡಿಯಾ ಉತ್ತಮ ಫಲಿತಾಂಶ ನೀಡುತ್ತಿದೆ. ಇಂತಹ ಯೋಜನೆಗಳನ್ನು ಅನುಕರಣೆ ಮಾಡುವುದರಿಂದ ಅಪಾಯವೇನಿಲ್ಲ ಎಂದಿದ್ದಾರೆ.
ದೇಶೀಯವಾಗಿ ಉದ್ಪಾದನೆ ಹೆಚ್ಚಿಸಲು ಹಾಗೂ ವಿದೇಶಿ ಬಂಡವಾಳ ಹರಿದುಬರಲು ಮೋದಿ ಸರ್ಕಾರ ಪೂರಕ ವಾತಾವರಣ ನಿರ್ಮಿಸುತ್ತಿದೆ ಎಂದರು.
ಮತ್ತೆ ಕೈಕೊಟ್ಟ ಟೆಕ್ ದೈತ್ಯ ಟ್ವಿಟರ್: ಟ್ವಿಟರ್ ಡೌನ್!
ಟೆಕ್ ದೈತ್ಯ ವೇದಿಕೆಯಾಗಿರುವ ಟ್ವಿಟರ್ ಭಾರತ ಸೇರಿ ಜಾಗತಿಕವಾಗಿ ಇಂದು ಡೌನ್ ಆಗಿದ್ದು, ಸಾವಿರಾರು ಜನರಿಗೆ ಲಾಗ್ ಇನ್ ಸಮಸ್ಯೆ ಎದುರಾಗಿದೆ.
ಅನೇಕ ಬಳಕೆದಾರರಿಗೆ ಟ್ವೀಟ್ ವೀಕ್ಷಿಸಲು ಅಥವಾ ಪೋಸ್ಟ್ ಮಾಡಲು ಪ್ರಯತ್ನಿಸಿದಾಗ ‘ಟ್ವೀಟರ್ ಅನ್ನು ಹಿಂಪಡೆಯಲು ಸಾಧ್ಯವಿಲ್ಲ’ ಎಂಬ ಸಂದೇಶ ಕಾಣಿಸುತ್ತಿದೆ ಎಂದು ದೂರಿದ್ದಾರೆ.
ಆದ್ರೆ, ಟ್ವಿಟರ್ ಈ ಬಗ್ಗೆ ಯಾವುದೇ ವಿವರಣೆಯನ್ನು ನೀಡಿಲ್ಲ. ಆನ್ ಲೈನ್ ಅಡೆತಡೆಗಳನ್ನ ಟ್ರ್ಯಾಕ್ ಮಾಡುವ ವೆಬ್ ಸೈಟ್ ಡೌನ್ ಡಿಟೆಕ್ಟರ್ ಪ್ರಕಾರ, ಟ್ವಿಟರ್’ನ ಸಮಸ್ಯೆಯಾಗಿದೆ ಎಂದು 4,000ಕ್ಕೂ ಹೆಚ್ಚು ಜನರು ದೂರಿದ್ದಾರೆ. 2023ರಲ್ಲಿ ಇದು ಮೂರನೇ ಬಾರಿ ಟ್ವಿಟರ್ ಈ ರೀತಿ ಡೌನ್ ಆಗಿದೆ.
ಇಂದಿನಿಂದ ಗೃಹಜ್ಯೋತಿ ಯೋಜನೆ ಪ್ರಾರಂಭ: ಸಿಎಂ ಸಿದ್ದರಾಮಯ್ಯ
ಗೃಹಜ್ಯೋತಿ ಇಂದಿನಿಂದ ಪ್ರಾರಂಭವಾಗುತ್ತಿದ್ದು, ಈ ತಿಂಗಳು ಉಚಿತವಾಗಿ ನೀಡಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು. ಗೃಹಜ್ಯೋತಿ ಯೋಜನೆಯ ಬಿಲ್ಲು ಆಗಸ್ಟ್ ತಿಂಗಳಲ್ಲಿ ನೀಡಲಾಗುವುದು. ಅನ್ನಭಾಗ್ಯದ ಹಣ ಈ ತಿಂಗಳು 10 ರ ನಂತರ ಪ್ರಾರಂಭ ಮಾಡುತ್ತೇವೆ. ಜುಲೈ ತಿಂಗಳಲ್ಲಿ ಅಕ್ಕಿ ಬದಲಿಗೆ ದುಡ್ಡನ್ನು ಒಂದನೇ ತಾರೀಖು ಕೊಡುತ್ತೇವೆ ಎಂದು ಹೇಳಿಲ್ಲ. ಈ ತಿಂಗಳ ಹಣವನ್ನು ಈ ತಿಂಗಳಲ್ಲಿಯೇ ನೀಡಲಾಗುವುದು ಎಂದರು.
ಕೇಂದ್ರದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವವರೆಗೆ ವಿಶ್ರಮಿಸುವುದಿಲ್ಲ: ಕೆ.ಎಸ್.ಈಶ್ವರಪ್ಪ
ಕೇಂದ್ರದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ವರೆಗೆ ವಿಶ್ರಮಿಸುವುದಿಲ್ಲ ಎಂದು ರಾಜ್ಯದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾತನಾಡಿದ ಅವರು, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಜನರು ಬೆಂಬಲಿಸಲಿದ್ದಾರೆ. ಮೋಸಗಾರರಾದ ಕಾಂಗ್ರೆಸ್ನವರನ್ನು ಬೆಂಬಲಿಸುವುದಿಲ್ಲ; ಬಿಜೆಪಿ ಕಳೆದ ಬಾರಿ 25 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ಸಿಗೆ ಕೇವಲ ಒಂದು ಸ್ಥಾನ ಮಾತ್ರ ಸಿಕ್ಕಿತ್ತು ಎಂದು ತಿಳಿಸಿದರು.
ಗ್ಯಾರಂಟಿಗಳನ್ನು ಕೊಟ್ಟು ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಿದೆ. ಅವರು ಇದೀಗ ವಿದ್ಯುತ್ ದರ ಏರಿಸಿ ಬರೆ ಎಳೆದಿದ್ದಾರೆ. 200 ಯೂನಿಟ್ ವಿದ್ಯುತ್ ಉಚಿತ ಎಂದಿದ್ದರು. ವಿದ್ಯುತ್ ದರ ಏರಿಕೆ, ದಿನ ಬಳಕೆ ವಸ್ತುಗಳ ದರ ಏರಿಕೆಯಿಂದ ಜನಜೀವನ ಕಷ್ಟವಾಗಿದೆ. ನಿರುದ್ಯೋಗ ಭತ್ಯೆ, ಗೃಹಿಣಿಗೆ 2 ಸಾವಿರ ಕೊಡುವುದಾಗಿ ಹೇಳಿದ್ದು, ಅದು ಜಾರಿ ಆಗಿಲ್ಲ ಎಂದು ಆಕ್ಷೇಪಿಸಿದರು.
ಅಕ್ಕಿ ವಿಚಾರದಲ್ಲಿ ಕೇಂದ್ರವನ್ನು ಎಳೆದು ತಂದದ್ದು ಸರಿಯಲ್ಲ. 10 ಕೆಜಿ ಅಕ್ಕಿ ಕೊಡಲಾಗದುದಕ್ಕೆ ಹಣ ಕೊಡಲು ಕೇಳಿದ್ದೆವು. ಈಗ 5 ಕೆಜಿಗೆ 170 ರೂ. ಕೊಡುವುದಾಗಿ ಹೇಳಿದ್ದಾರೆ. ಕೇಂದ್ರದ 5 ಕೆಜಿಗೂ ನಿಮಗೂ ಸಂಬಂಧ ಇಲ್ಲ. ಆದ್ದರಿಂದ ಮಾರುಕಟ್ಟೆ ದರದಂತೆ ಪ್ರತಿ ಮನೆಯ ಪ್ರತಿ ವ್ಯಕ್ತಿಗೂ 10 ಕೆಜಿ ಅಕ್ಕಿಗೆ ಹಣ ಕೊಡಿ ಎಂದು ಆಗ್ರಹಿಸಿದರು. ಈ ವಿಚಾರದಲ್ಲೂ ಟೋಪಿ ಹಾಕದಿರಿ ಎಂದು ತಿಳಿಸಿದರು.
ಕೇಂದ್ರದ ಬಿಜೆಪಿ ಸರಕಾರಕ್ಕೆ 9 ವರ್ಷ ತುಂಬುವ ಹಿನ್ನೆಲೆಯಲ್ಲಿ ನಮ್ಮ ಕಾರ್ಯವೈಖರಿ, ಬಿಬಿಎಂಪಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಲೋಕಸಭೆ ಚುನಾವಣೆ ಚುನಾವಣೆಯಲ್ಲಿ ನಮ್ಮ ಕಾರ್ಯತಂತ್ರದ ಕುರಿತು 3ರ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು. ಪಕ್ಷದೊಳಗಿನ ವಿಚಾರಗಳನ್ನು ಪಕ್ಷದಲ್ಲೇ ಚರ್ಚಿಸಲು ಸೂಚಿಸಿದ್ದು, ಅದನ್ನು ಮುಖಂಡರು ಒಪ್ಪಿಕೊಂಡಿದ್ದಾರೆ ಎಂದರು.