ಮಳೆಗಾಲ ಆರಂಭವಾದ ಕೂಡಲೇ ನೀರು ಹಾಗೂ ಸೊಳ್ಳೆಗಳಿಂದ ಇತ್ತೀಚೆಗೆ ರಾಜ್ಯದ ಕೆಲವೆಡೆ ಮಲೇರಿಯಾ ಲಕ್ಷಣಗಳು ಕಾಣಿಸುತ್ತಿವೆ. ಇದು ಕೂಡ ಮಳೆಗಾಲದಲ್ಲಿ ಕಾಣಿಸುವ ಸಾಮಾನ್ಯ ಸಮಸ್ಯೆ ಆದರೂ, ಇದು ಗಂಭೀರ ಸ್ವರೂಪ ಪಡೆದರೆ ಜೀವಕ್ಕೆ ಹಾನಿಯಾಗಬಹುದು. ಹಾಗಾಗಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗಿರುವುದು ನಮ್ಮ ಕರ್ತವ್ಯ.
ಅನಾಫಿಲಿಸ್ ಎಂಬ ಸೊಳ್ಳೆಯು ಪ್ಲಾಸ್ಮೋಡಿಯಂ ಎಂದು ಕರೆಯಲ್ಪಡುವ ಪರಾವಲಂಬಿಯನ್ನು ಮನುಷ್ಯ ದೇಹಕ್ಕೆ ರವಾನಿಸುತ್ತದೆ. ಇದರಿಂದ ಜ್ವರ ಶೀತ, ತಲೆನೋವು ಕಾಣಿಸಿಕೊಂಡರೆ ಅದನ್ನು ಮಲೇರಿಯಾ ಎಂದು ಕರೆಯುತ್ತಾರೆ.
ಮಲೇರಿಯಾವು ಶೀತ, ಜ್ವರ ಹಾಗೂ ತಲೆನೋವುಗಳನ್ನು ಉಂಟು ಮಾಡುವ ಕಾಯಿಲೆಯಾಗಿದೆ. ಇದು ತೀವ್ರಸ್ವರೂಪ ಹಾಗೂ ಮಾರಂಣಾತಿಕ ತೊಂದರೆಗಳನ್ನು ಉಂಟು ಮಾಡಬಹುದು. ಮಲೇರಿಯಾದ ರೋಗಲಕ್ಷಣಗಳು ಒಂದೇ ರೀತಿ ಇದ್ದರೂ ಇದರ ಸ್ವರೂಪ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೂ ಮಲೇರಿಯಾ ಬಂದ ಕೂಡಲೆ ನಾವು ಅದರ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.
ಕೆಲವು ಸಂದರ್ಭಗಳಲ್ಲಿ ಮಲೇರಿಯಾವು ತೀವ್ರ ಸ್ವರೂಪ ಪಡೆಯಬಹುದು. ದೇಹ ಪ್ರಮುಖ ಅಂಗಗಳ ಮೇಲೆ ಇದರ ಪರಿಣಾಮ ಕಾಣಿಸುತದೆ. ಈ ಹಂತದಲ್ಲಿ, ಮಲೇರಿಯಾ ಪರಾವಲಂಬಿಗಳು ಶೇ 5 ರಷ್ಟು ಕೆಂಪು ರಕ್ತ ಕಣಗಳ ಮೇಲೆ ಪರಿಣಾಮ ಬೀರುತ್ತವೆ.ಅತಿಯಾದ ರಕ್ತಹೀನತೆ, ಮೂತ್ರ ವಿಸರ್ಜನೆಯ ವೇಳೆ ರಕ್ತ ಹೋಗುವುದು, ರಕ್ತ ಹೆಪ್ಪುಗಟ್ಟುವಿಕೆಯ ಬದಲಾವಣೆಗಳು, ಪ್ರಜ್ಞೆ ಇಲ್ಲದಂತಿರುವುದು, ಅತಿಯಾಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು, ಇದೆಲ್ಲ ಮಲೇರಿಯಾದ ಗಂಭೀರ ಸಮಸ್ಯೆಗಳಾಗಿವೆ. ಹಾಗಾಗಿ ಜ್ವರ, ಮೈಕೈ ನೋವು ಕಾಣಿಸಿದ ತಕ್ಷಣ ವೈದ್ಯರ ಬಳಿ ತೋರಿಸುವುದು ಉತ್ತಮ.
ಮಲೇರಿಯಾದಿಂದ ದೇಹದಲ್ಲಿ ಗಂಭೀರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಅಂತಹ ಕೆಲವು ಸಮಸ್ಯೆಗಳು ಹೀಗಿವೆ. ಯಕೃತ್ತಿನ ವೈಫಲ್ಯ, ಮೂತ್ರಪಿಂಡ ವೈಫಲ್ಯ, ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಕಡಿಮೆಯಾಗುವುದು, ತೀವ್ರವಾದ ಉಸಿರಾಟ ಸಮಸ್ಯೆ, ನಿರ್ಜಲೀಕರಣ
ಮಲೇರಿಯಾಕ್ಕೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಹಲವರು ಸಂಪೂರ್ಣವಾಗಿ ಗುಣಮುಖರಾಗುತ್ತಾರೆ.
ತೀವ್ರ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಆಸ್ಪತ್ರೆಗೆ ತೀವ್ರ ನಿಗಾ ಘಟಕಗಳಲ್ಲಿ ಇಟ್ಟುಕೊಂಡು ಚಿಕಿತ್ಸೆ ನೀಡಬೇಕಾಗಬಹುದು.
ಮಲೇರಿಯಾವನ್ನು ತಡೆಗಟ್ಟುವ ವಿಧಾನವೆಂದರೆ:
ಸೊಳ್ಳೆಯ ಕಡಿಯದಂತೆ ನೋಡಿಕೊಳ್ಳಿ.
ಮಲೇರಿಯಾದ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಆಂಟಿಮಲೇರಿಯಾ ಮಾತ್ರೆಗಳನ್ನು ತೆಗೆದುಕೊಳ್ಳಿ.
ಸರಿಯಾದ ಹಾಗೂ ಸರ್ಮಪಕ ಕ್ರಮದಲ್ಲಿ ಔಷಧಿಗಳನ್ನು ಸೇವಿಸಿ.
ಮಲೇರಿಯಾ ಹೆಚ್ಚಿರುವ ಪ್ರದೇಶಗಳ ಮಕ್ಕಳಿಗೆ ಲಸಿಕೆ ನೀಡುವುದು
ಹೀಗೆ ಜ್ವರ ಬಂದ ಕೂಡಲೇ ಮಲೇರಿಯಾ ಟೆಸ್ಟ್ ಮಾಡಿಸಿಕೊಂಡು ಕೆಲವು ಮುನ್ಸೂಚನೆ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.