ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ವು ತಲೆ ಮರೆಸಿಕೊಂಡಿರುವ ಆರೋಪಿಗಳ ಮನೆ ಮತ್ತು ಸೊತ್ತುಗಳನ್ನು ಜಪ್ತಿ ಮಾಡಲು ಮೂರು ದಿನಗಳ ಕಾಲಾವಕಾಶ ನೀಡಿದೆ.
ಬುಧವಾರ ಸುಳ್ಯ ಪಟ್ಟಣದಲ್ಲಿ ಎನ್ಐಎ ನ್ಯಾಯಾಲಯದ ಅಧಿಕಾರಿಗಳು ಧ್ವನಿವರ್ಧಕಗಳ ಮೂಲಕ ಘೋಷಣೆ ಮಾಡಿದ್ದು ಜೂನ್ 30 ರೊಳಗೆ ಬೆಂಗಳುರಿನ ಎನ್ಐಏ ನ್ಯಾಯಾಲಯಕ್ಕೆ ಶರಣಾಗದಿದ್ದರೆ ಅವರ ಮನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಘೋಷಿಸಿದೆ. ಎನ್ಐಎ ನ್ಯಾಯಾಲಯದ ಅಧಿಕಾರಿಗಳು ಮತ್ತು ಸುಳ್ಯದ ಪೊಲೀಸ್ ಸಿಬ್ಬಂದಿಗಳು ಪ್ರಕಟಣೆ ಮಾಡಿದ್ದು ಆರೋಪಿಗಳ ಸುಳಿವು ನೀಡಿದರೆ ನಗದು ಬಹುಮಾನ ನೀಡಲಾಗುವುದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಳೆದ ಜುಲೈ 26, 2022 ರಂದು ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ನಡೆದ ಈ ಕೊಲೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. 2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಗುರಿಯನ್ನು ಹೆಚ್ಚಿಸುವ ಗುರಿಯೊಂದಿಗೆ ಸಮಾಜದಲ್ಲಿ ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸುವ ಮತ್ತು ಸಮುದಾಯದ ಸದಸ್ಯರಲ್ಲಿ ಭಯೋತ್ಪಾದನೆಯನ್ನು ಉಂಟುಮಾಡುವ PFI ನ ಕಾರ್ಯಸೂಚಿಯ ಭಾಗವಾಗಿ ನೆಟ್ಟಾರು ಅವರನ್ನು ಹರಿತವಾದ ಆಯುಧಗಳಿಂದ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ನಂತರ ಜನಾಕ್ರೋಶ ತೀವ್ರವಾಗಿ ಭುಗಿಲೆದ್ದಿದ್ದು ರಾಜ್ಯ ಸರ್ಕಾರ ಪ್ರಕರಣವನ್ನು ಎನ್ಐಏ ಗೆ ಒಪ್ಪಿಸಿತ್ತು.
ಸುಳ್ಯ ತಾಲೂಕಿನ ಕಲ್ಲುಮುಟ್ಲು ಗ್ರಾಮದಲ್ಲಿ ವಾಸವಿದ್ದ ಆರೋಪಿ ಉಮರ್ ಫಾರೂಕ್ ಮತ್ತು ಮತ್ತೋರ್ವ ಆರೋಪಿ ಮುಸ್ತಫಾ ಅವರ ಮನೆಗೆ ಮಂಗಳವಾರ ಅಧಿಕಾರಿಗಳು ಭೇಟಿ ನೀಡಿ ನ್ಯಾಯಾಲಯದ ಆದೇಶದ ಪ್ರತಿಯನ್ನು ಅಂಟಿಸಿದ್ದಾರೆ. ಆರೋಪಿಗಳ ಫೋಟೋಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿ ಅವರ ಪತ್ತೆಗೆ ಎನ್ಐಎ ಅಧಿಕಾರಿಗಳು ಪ್ರಯತ್ನ ನಡೆಸಿದ್ದರು. ಆದರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ನಡೆದು 11 ತಿಂಗಳಾದರೂ ಆರೋಪಿಗಳನ್ನು ಪತ್ತೆ ಹಚ್ಚಲು ಎನ್ಐಎಗೆ ಸಾಧ್ಯವಾಗಿಲ್ಲ.
ಎನ್ ಐಎ ಚೆನ್ನೈ ವಿಭಾಗದ ಇನ್ಸ್ ಪೆಕ್ಟರ್ ಷಣ್ಮುಗಂ ನೇತೃತ್ವದ ಮೂವರು ಅಧಿಕಾರಿಗಳ ತಂಡ ಮಂಗಳವಾರ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ದಾಳಿ ನಡೆಸಿದೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡಂಗಡಿ ಗ್ರಾಮದ ಪೊಯೆ ಗುಡ್ಡೆಯಲ್ಲಿರುವ ನೌಶಾದ್ ಎಂಬುವರ ಮನೆಗೆ ದಾಳಿ ನಡೆಸಲಾಗಿದ್ದು, ಆ ವೇಳೆ ಮನೆಯಲ್ಲಿ ಇರಲಿಲ್ಲ. ಪಿಎಫ್ಐ ಸದಸ್ಯನಾಗಿದ್ದ ನೌಶಾದ್ ಈ ಹಿಂದೆ ಉಡುಪಿಯ ಹೋಟೆಲ್ ಒಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ನಂತರ ಲಾರಿ ಚಾಲಕನಾಗಿದ್ದ. ತನಿಖೆ ಚುರುಕುಗೊಳ್ಳುತಿದ್ದಂತೆ ನಾಪತ್ತೆ ಆಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಬೆಳ್ಳಾರೆ, ಸುಳ್ಯ ಸೇರಿದಂತೆ ಇತರ ಪ್ರಮುಖ ಆರೋಪಿಗಳಾದ ಮುಸ್ತಫಾ ಪೈಚಾರ್, ಅಬೂಬಕರ್ ಸಿದ್ದೀಕ್, ಉಮರ್ ಫಾರೂಕ್, ಸುಳ್ಯದ ಮಸೂದ್ ಅಗ್ನಾಡಿ ಸೇರಿದಂತೆ ಇನ್ನೂ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗಿದೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಒಟ್ಟು 20 ಆರೋಪಿಗಳ ವಿರುದ್ಧ ಕಳೆದ ಜನವರಿ 20 ರಂದು ಬೆಂಗಳೂರಿನ ಎನ್ಐಎ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮೇ 2 ರಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಿದೆ. ಪೂರಕ ಆರೋಪ ಪಟ್ಟಿ ಸಲ್ಲಿಕೆಯಾದ ಇಬ್ಬರು ಆರೋಪಿಗಳಾದ – ತುಫೈಲ್ ಎಂ.ಎಚ್. ಮತ್ತು ಮಹಮ್ಮದ್ ಜಬೀರ್ ವಿರುದ್ದ – ಐಪಿಸಿ ಮತ್ತು ಯುಎ (ಪಿ) ಆಕ್ಟ್, 1967 ರ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಆರೋಪಿ ಎಂ ಹೆಚ್ ತುಫೈಲ್ ಮಡಿಕೇರಿಯ ಗದ್ದುಗೆ ಸಮೀಪದ ನಿವಾಸಿಯಾಗಿದ್ದು ಪ್ರಮುಖ ನಾಯಕರನ್ನು ಹತ್ಯೆ ಮಾಡಿ, ಭಯ ಸೃಷ್ಟಿಸಿ ಕೋಮುಗಲಭೆ ಸೃಷ್ಟಿಸಲು ನಿಷೇಧಿತ ಪಿಎಫ್ಐ ರಚಿಸಿದ್ದ ರಹಸ್ಯ ಹಿಟ್ ಸ್ಕ್ವಾಡ್ನ ಕರ್ನಾಟಕ ರಾಜ್ಯ ಮುಖ್ಯಸ್ಥ ಆಗಿ ಕೆಲಸ ನಿರ್ವಹಿಸುತಿದ್ದ. ಈತನನ್ನು ಮಾಸ್ಟರ್ ಟ್ರೇನರ್ ಎಂದೂ ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದ್ದು ಈತನನ್ನು ಬಂಧಿಸಲು ಸುಳಿವು ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿತ್ತು. ನಂತರ ಬೆಂಗಳೂರಿನ ಅಡಗುತಾಣದಿಂದ ಈತನನ್ನು ಮಾರ್ಚ್ 5 ರಂದು ಬಂಧಿಸಲಾಯಿತು.
ಪ್ರವೀಣ್ ಅವರನ್ನು ಹತ್ಯೆ ಮಾಡಿದ ಮುಖ್ಯ ಉದ್ದೇಶವೇ ಭಯ ಸೃಷ್ಟಿಸುವುದಾಗಿದ್ದು , ರಾಜ್ಯಾದ್ಯಂತ ಈ ಹತ್ಯೆಯ ಕುರಿತ ಜನಾಕ್ರೋಶ ವ್ಯಕ್ತವಾಗದೇ ಇದ್ದಿದ್ದರೆ ಆರೋಪಿಗಳಲ್ಲಿ ಕೆಲವರನ್ನು ಪೋಲೀಸರಿಗೆ ಶರಣಾಗಿಸಲು ಯೋಜನೆ ಹಾಕಿಕೊಂಡಿದ್ದರು. ನಂತರ ಪುನಃ ಇದೇ ರೀತಿಯ ಹತ್ಯೆ ಮಾಡಲು ತರಬೇತಿಯನ್ನೂ ನೀಡಲಾಗುತಿತ್ತು. ಆದರೆ ಇಡೀ ದೇಶಾದ್ಯಂತ ಈ ಹತ್ಯೆ ದೊಡ್ಡ ಸುದ್ದಿ ಆದ ಕಾರಣದಿಂದಾಗಿ ಅನೇಕ ಆರೋಪಿಗಳು ನಾಪತ್ತೆ ಆಗಿದ್ದಾರೆ ಎನ್ನಲಾಗಿದೆ.