ಅಹಮದಾಬಾದ್: ಗುಜರಾತ್ ರಾಜ್ಯದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಘಟಕವು ಹೋಟೆಲ್ಗಳು ಮತ್ತು ಗೆಸ್ಟ್ಹೌಸ್ಗಳಿಗೆ ಎಚ್ಚರಿಕೆ ನೀಡಿದ್ದು, ಹಿಂದೂ ಯುವತಿಯರೊಂದಿಗೆ ಬರುವ ಹಿಂದೂಯೇತರ ಯುವಕರಿಗೆ ಹೋಟೆಲ್ ಗಳಲ್ಲಿ ಕೊಠಡಿಗಳನ್ನು ನೀಡಿದರೆ ಮುಂದಾಗುವ ಪರಿಣಾಮಗಳನ್ನು ಹೋಟೆಲ್ ಮಾಲೀಕರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ದಿನೇ ದಿನೇ ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕರಣಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಎಚ್ಪಿ ಹೇಳಿದೆ. ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್ಎಚ್ಆರ್ಎಐ), ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ವೆಸ್ಟರ್ನ್ ಇಂಡಿಯಾ (ಎಚ್ಆರ್ಎವೈಐ), ಮತ್ತು ಇಂಡಿಯನ್ ಹೋಟೆಲ್ಸ್ ಅಂಡ್ ರೆಸ್ಟೊರೆಂಟ್ಸ್ ಅಸೋಸಿಯೇಷನ್ (ಎಎಚ್ಎಆರ್) ಅನ್ನು ಟ್ಯಾಗ್ ಮಾಡುವ ಮೂಲಕ ವಿಎಚ್ಪಿ ಗುಜರಾತ್ ವಕ್ತಾರ ಹಿತೇಂದ್ರಸಿನ್ಹ್ ರಜಪೂತ್ ಈ ರೀತಿ ಟ್ವೀಟ್ ಮಾಡಿದ್ದಾರೆ,
“ಹೋಟೆಲ್ ಮಾಲೀಕರು ಗಮನವಿಟ್ಟು ಕೇಳಬೇಕು. ಹಿಂದೂ ಹುಡುಗಿಯರೊಂದಿಗೆ ಬರುವ ಹಿಂದೂಯೇತರ ಯುವಕರಿಗೆ ಕೊಠಡಿಗಳನ್ನು ನೀಡಕೂಡದು. ಲವ್ ಜಿಹಾದ್ ಅಥವಾ ಹಿಂದೂ ಹುಡುಗಿಯರ ಶೋಷಣೆಯ ನಿದರ್ಶನಗಳಲ್ಲಿ ಭಾಗಿಯಾಗಿರುವ ಹೋಟೆಲ್ ಅಥವಾ ಅತಿಥಿಗೃಹದ ಮಾಲೀಕರು ಮುಂದಾಗುವ ಪರಿಣಾಮಗಳಿಗೆ ಸಿದ್ಧರಾಗಿರಬೇಕು.
ಈ ಕುರಿತು ಪತ್ರಕರ್ತರು ರಜಪೂತ್ ಅವರನ್ನು ಸಂಪರ್ಕಿಸಿದಾಗ, ರಜಪೂತ್,ಇತ್ತೀಚಿನ ದಿನಗಳಲ್ಲಿ ಹಿಂದೂ ಯುವತಿಯರನ್ನು ವಂಚಿಸಿ ಹಣ ಸುಲಿಗೆ , ಮೋಸದಿಂದ ಮದುವೆ ಆಗುವುದು, ಅತ್ಯಾಚಾರ ಎಸಗಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದನ್ನು ತಡೆಯಲು ನಾವು ಸಜ್ಜಾಗಿದ್ದೇವೆ ಎಂದರು.ಅಲ್ಲದೆ “ಪೊಲೀಸ್ ಕ್ರಮವನ್ನು ಕಾಯದೆ ಬಜರಂಗ ದಳವು ಇಂತಹ ಕೃತ್ಯಕ್ಕೆ ಬೆಂಬಲ ನೀಡುವ ಹೋಟೆಲ್ ಲಾಡ್ಜ್ ಮಾಲೀಕರೊಂದಿಗೆ ವ್ಯವಹರಿಸಲಿದೆ ಎಂದು ಹೇಳಿದರು.