ಖ್ಯಾತ ಬಹುಭಾಷಾ ನಟ ಅರ್ಜುನ್ ಸರ್ಜಾ ಪುತ್ರಿಯ ಮದುವೆ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತದೆ. ಆದರೆ ವರ ಯಾರಿರಬಹುದು.
ಸಿನಿಮಾ ಇಂಡಸ್ಟ್ರಿಯಲ್ಲಿ ಕಳೆದ ಎರಡು ವರ್ಷಗಳಿಂದ ಮದುವೆ ಜೋರಾಗಿಯೇ ನಡೆಯುತ್ತಿದೆ. ಈಗ ಮಕ್ಕಳ ಪರ್ವ ಶುರುವಾಗಿದೆ. ಬಾಲಿವುಡ್ ಸೇರಿದಂತೆ ಬಹುತೇಕ ಎಲ್ಲಾ ಭಾಷೆಗಳ ತಾರೆಯರು ಇಲ್ಲವೇ ಅವರ ಮಕ್ಕಳ ಅದ್ಧೂರಿ ಮದುವೆ ನಡೆದಿದೆ. ಈಗ ಅದರ ಸಾಲಿಗೆ ಸೇರುತ್ತಿರುವವರು ಟಾಲಿವುಡ್, ಸ್ಯಾಂಡಲ್ವುಡ್ ನಟಿ ಐಶ್ವರ್ಯಾ.
ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಐಶ್ವರ್ಯಾ ಅವರು ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ. ತಮಿಳಿನ ಜನಪ್ರಿಯ ಹಾಸ್ಯ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ ಜೊತೆ ಐಶ್ವರ್ಯಾ ಮದುವೆ ಶೀಘ್ರದಲ್ಲೇ ನಡೆಯಲಿದೆ ಎಂಬ ಸುದ್ದಿ ತಮಿಳು ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆ.
ಅಂದಹಾಗೆ, ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ತುಂಬಾ ಚಿತ್ರಗಳಲ್ಲಿ ನಟಿಸಿಲ್ಲವಾದರೂ ತಕ್ಕ ಮಟ್ಟಿಗೆ ಹೆಸರು ಮಾಡಿದ್ದಾರೆ. ಸ್ಟಾರ್ ಕಿಡ್ ಆಗಿದ್ದರಿಂದ ಸಹಜವಾಗಿ ಇವರ ಕೀರ್ತಿ ಹೆಚ್ಚಿದೆ.
ಐಶ್ವರ್ಯಾ 2013 ರಲ್ಲಿ ವಿಶಾಲ್ ನಟನೆಯ ಪತ್ತು ಯಾನೈ ಸಿನಿಮಾ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟರು. ಇದರ ಬಳಿಕ ಹಲವು ವರ್ಷ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸಿರಲಿಲ್ಲ. ಆದರೆ 2018ರಲ್ಲಿ ಕನ್ನಡದ ಪ್ರೇಮ ಬರಹ ಸಿನಿಮಾದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿಯೂ ಕಾಣಿಸಿಕೊಂಡರು. ಕುತೂಹಲದ ಸಂಗತಿ ಎಂದರೆ, ಈ ಸಿನಿಮಾವನ್ನು ಐಶ್ವರ್ಯಾರ ತಂದೆ ಅರ್ಜುನ್ ಸರ್ಜಾ ಅವರೇ ನಿರ್ದೇಶನ ಮಾಡಿದ್ದರು. ಕನ್ನಡದ ಪ್ರೇಮ ಬರಹ ಸಿನಿಮಾವನ್ನು ತಮಿಳಿನಲ್ಲಿ ಸೊಲ್ಲಿವಿಡಾವಾ ಹೆಸರಿನಲ್ಲಿ ಕೆಲ ದೃಶ್ಯಗಳನ್ನು ಮರುಚಿತ್ರೀಕರಿಸಿ ಬಿಡುಗಡೆ ಮಾಡಲಾಗಿತ್ತು.
ತಂಬಿ ರಾಮಯ್ಯ ತಮಿಳಿನ ಜನಪ್ರಿಯ ಹಾಸ್ಯನಟರಾಗಿದ್ದು 1999 ರಿಂದ ಈಗಿನ ವರೆಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರು ರಾಷ್ಟ್ರಪ್ರಶಸ್ತಿ ವಿಜೇತ ನಟ ಕೂಡ. ಇದೀಗ ಅವರ ಪುತ್ರ ಉಮಾಪತಿ ರಾಮಯ್ಯ ಸಹ ನಟರಾಗಿದ್ದು, ತಮಿಳಿನ ಕೆಲವು ಸಿನಿಮಾಗಳಲ್ಲಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಉಮಾಪತಿ ರಾಮಯ್ಯ ಈ ವರೆಗೆ ನಾಲ್ಕು ಸಿನಿಮಾಗಳಲ್ಲಿ ಮಾತ್ರವೇ ಅಭಿನಯಿಸಿದ್ದಾರೆ. 2017ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಉಮಾಪತಿ ಆಗಿನಿಂದ ವರ್ಷಕ್ಕೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಾ ಪ್ರಸಿದ್ಧಿಯಾಗುತ್ತಿದ್ದಾರೆ.
ಉಮಾಪತಿ ರಾಮಯ್ಯ ಹಾಗೂ ಐಶ್ವರ್ಯಾ ಇಬ್ಬರು ಹಲವು ದಿನಗಳಿಂದ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರ ಪ್ರೀತಿಗೆ ಕುಟುಂಬದವರು ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇಬ್ಬರ ಕುಟುಂಬಸ್ಥರಿಂದ ಮದುವೆ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ ಸುದ್ದಿ ಖಚಿತವಾಗಿರುವುದಾಗಿ ಹಲವು ತಮಿಳು ಮಾಧ್ಯಮಗಳು ವರದಿ ಮಾಡಿವೆ. ತಮಿಳು ಚಿತ್ರರಂಗದ ಕೆಲವು ಹಿರಿಯ ಪತ್ರಕರ್ತರು ರಾಮಯ್ಯ ಕುಟುಂಬದ ಆಪ್ತರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಬಳಿಕ ವಿಷಯ ಬೆಳಕಿಗೆ ಬಂದಿರುತ್ತದೆ.