ಬಾಗಲಕೋಟೆ: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಹೀನಾಯ ಸೋಲು ಪಕ್ಷದ ಕಾರ್ಯಕರ್ತರನ್ನು ಕಂಗೆಡಿಸಿದ್ದು, ಅವರ ಅಸಮಧಾನ ಸೋಮವಾರ ನಗರದಲ್ಲಿ ನಡೆದ ಪದಾಧಿಕಾರಿಗಳ ಸಮಾವೇಶದಲ್ಲಿ ಹೊರಬಿದ್ದಿದೆ.
ನಗರದ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 9 ವರ್ಷದ ಸಾಧನೆ ಹಾಗೂ ಪಕ್ಷದ ಸಾಧನೆ ಹಾಗೂ ಪಕ್ಷದ ಪದಾಧಿಕಾರಿಗಳ ಸಮಾವೇಶದಲ್ಲಿ ನಾಯಕರು, ಕಾರ್ಯಕರ್ತರು ತಮ್ಮ ಮಾತಿನ ಮೂಲಕ ಪಕ್ಷವಿರೋಧಿ ಚಟುವಟಿಕೆ ನಡೆಸಿದವರಿಗೆ ಚುಚ್ಚಿ ಮಾತನಾಡಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.
ಶಿಸ್ತಿನ ಪಕ್ಷ ಎಂದೇ ಹೇಳಿಕೊಂಡಿದ್ದ ಬಿಜೆಪಿ ಸಭೆಯಲ್ಲಿ ಅಂತರಿಕ ಕಚ್ಚಾಟ ಬಹಿರಂಗಗೊಂಡಿತು. ಪ್ರತಿಯೊಬ್ಬರ ನಾಯಕರ ಮಾತಿನ ಒಳ ಅರ್ಥವೇ ನಿಗೂಢವಾಗಿತ್ತು. ಒಬ್ಬರ ಮೇಲೆ ಇನ್ನೊಬ್ಬರು ಪರಸ್ಪರ ಆರೋಪಗಳ ಸುರುಮಳೆಗೈದರು. ಸಭೆಯಲ್ಲಿ ಆಗಾಗ್ಗೆ ನಡೆದ ಗಲಾಟೆಗಳು ಪೊಲೀಸರ ಹಾಗೂ ಹಿರಿಯ ನಾಯಕರುಗಳ ಮಧ್ಯಸ್ಥಿಕೆ ಬಳಿಕ ತಿಳಿಗೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿಜಯ ಸಾಧಿಸುವ ಸಂಕಲ್ಪದೊAದಿಗೆ ಸಮಾಪ್ತಿಗೊಂಡಿತು.
ಬಾಗಲಕೋಟೆ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣರಾದವರಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಬಾರದು, ಸ್ವಯಂ ಪ್ರೇರಣೆಯಿಂದ ಹೊರಹೋಗಬೇಕು ಇಲ್ಲವಾದರೆ ನಾವೇ ಸಭೆಯಿಂದ ಹೊರಗೆ ಹೋಗುತ್ತೇವೆ ಎಂದು ಬಿಜೆಪಿ ಮುಖಂಡ ರಾಜು ರೇವಣಕರ್ ಪಟ್ಟು ಹಿಡಿದರು. ಇವರಿಗೆ ಇತರ ಕಾರ್ಯಕರ್ತರು ಧ್ವನಿಗೂಡಿಸಿದರು. ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಡಾ. ಶೇಖರ ಮಾನೆ, ಶಂಭುಗೌಡ ಪಾಟೀಲ, ಚಂದ್ರಕಾ0ತ ಕೆಸನೂರು ಅವರನ್ನು ಹೊರಗೆ ಕಳುಹಿಸಲಾಯಿತು.
ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ನವನಗರದಲ್ಲಿ ಬಸವೇಶ್ವರ, ಶಿವಾಜಿ ಮೂರ್ತಿ ಸ್ಥಾಪನೆಗೆ ಜಾಗ ನಿಗದಿಪಡಿಸಿ ತಲಾ 24 ಲಕ್ಷ ರೂ. ವೆಚ್ಚದಲ್ಲಿ ಮೂರ್ತಿ ಸಿದ್ದಪಡಿಸಿ ಸ್ಥಾಪಿಸಲು ಮುಂದಾಗಿದ್ದೇವು. ಭಾನುವಾರ ಅವುಗಳನ್ನು ಸ್ಥಾಪಿಸಲು ಮುಂದಾದಾಗ ಡಾ. ಶೇಖರ ಮಾನೆ ವಿಧಾನ ಪರಿಷತ್ ಸದಸ್ಯ ಪಿ. ಎಚ್. ಪೂಜಾರ ಅವರಿಂದ ಪೊಲೀಸರಿಗೆ ಕರೆ ಮಾಡಿಸಿ ವಿರೋಧ ಮಾಡಿಸಿದ್ದಾರೆ. ಇಂತಹವರು ಪಕ್ಷದಲ್ಲಿ ಇರಬೇಕಾ? ಅವರನ್ನು ಕೂಡಲೇ ಹೊರಗೆ ಹಾಕಬೇಕು. ನವನಗರದಲ್ಲಿ 46 ಗ್ಯಾಂಗ್ ಹುಟ್ಟಿಕೊಂಡಿವೆ. ಹಿಂದು ಪರ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಇಂತಹ ಘಟನೆಗಳಿಗೆ ಕಡಿವಾಣ ಬೀಳದೆ ಹೋದರೆ ಹೋರಾಟ ನಡೆಸಲಾಗುವುದು ಎಂದು ಗುಡುಗಿದರು.
ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ ನಾವು ಚುನಾವಣೆಯಲ್ಲಿ ಸೋತಿದ್ದೇವೆ ಸತ್ತಿಲ್ಲ. ಸಂಶಯ ದೃಷ್ಠಿಕೋನದಿಂದ ಏನಾದರೂ ಮಾತನಾಡಿದರೆ ಸಹಿಸಲು ಸಾಧ್ಯವಿಲ್ಲ. ಒಂದು ಬೆರೆಳು ಬೇರೊಬ್ಬರತ್ತ ತೋರಿಸಲು ಹೋದರೆ ನಾಲ್ಕು ಬೆರೆಳು ನಮ್ಮತ್ತ ಇರುತ್ತವೆ. ಎನ್ನುವುದನ್ನು ಮರೆಯಬಾರದು. ನಮಗೆ ಅವರಂತೆ ಮಾತನಾಡಲು ಬರುವುದಿಲ್ಲ ಅಂತಲ್ಲ, ನಮಗೂ ಸಾಮರ್ಥ್ಯವಿದೆ. ಇಲಿಗೆ ಪೆಟ್ಟು ಕೊಡಲು ಹೋಗಿ ಗಣಪತಿಗೆ ಪೆಟ್ಟು ಕೊಡಬಾರದು ಅಂತ ಸುಮ್ಮನೆ ಇದ್ದೇವೆ. ತಪ್ಪು ತಿದ್ದಿಕೊಂಡು ಮನ್ನಡೆಯಬೇಕು ಎಂದು ತಮ್ಮದೇ ಮಾತಿನ ಶೈಲಿಯಲ್ಲಿ ಚಾಟಿ ಬೀಸಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಕಸ ತೆಗೆಯುವಾಗ ಕೆಲವು ಕಡೆ ಒಳ್ಳೆಯ ಬೆಳೆ ಕೂಡ ಕತ್ತರಿಸಿಕೊಂಡು ಹೋಗಿದೆ. ಚುನಾವಣೆಯಲ್ಲಿ ಕೆಲವರು. ಸೆಗಣಿ ತಿನ್ನುವ ಕೆಲಸ ಮಾಡಿದ್ದಾರೆ. ನನ್ನನ್ನು ಸೋಲಿಸಲು ಹಣ ಕಳುಹಿಸಿದ್ದರು. ಆದರೆ ನಾನು ಬಿಡಲಿಲ್ಲ ಗೆದ್ದು ಬಂದೆ. ನಾವೇನು ಗೂಂಡಾಗಿರಿ ಮಾಡಲು ಬಂದಿಲ್ಲ ಎಂದರು.
ಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಭೆಯಲ್ಲಿ ತಪ್ಪು-ಸರಿಗಳನ್ನು ಹೇಳಿದ್ದು ಉತ್ತಮವಾದ ಕೆಲಸ. ಗಂಡು ಮೆಟ್ಟಿದ ನಾಡು ಬಾಗಲಕೋಟೆ ಜನ ನೇರವಾಗಿ ಹೇಳುತ್ತಾರೆ. ಇದು ಖುಷಿ ತಂದಿದೆ ಮತ್ತೆ ಬಿಜೆಪಿ ಪುಟಿದೇಳುತ್ತದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಬೇಕು. ಬಿಜೆಪಿಯಲ್ಲಿ ನಿಜವಾಗಿಯೂ ಪ್ಜಾಪ್ರಭುತ್ವ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸರಿ ಸಮಾನ ನಾಯಕ ದೇಶದಲ್ಲಿ ಇಲ್ಲ. ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಜತೆ ಮೋದಿ ಹೋಲಿಕೆ ಸರಿಯಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸೇಡಿನ ರಾಜಕಾರಣ ಮಾಡುತ್ತಿದೆ. ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಗುತ್ತಿದೆ. ಇದು ನಿಲ್ಲದೆ ಹೋದರೆ ಖಂಡಿತ ಹೋರಾಟ ಮಾಡುತ್ತೇವೆ ಎಂದರು.