ಬೆಂಗಳೂರು: ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿದ್ದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವವರ ಮೇಲೆ ಪೋಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಯಾರೋ ಶೇರ್ ಮಾಡಿದ ಮಾಹಿತಿ, ವೀಡಿಯೋಗಳನ್ನು ತಪ್ಪು ಮಾಹಿತಿಯೊಂದಿಗೆ ಶೇರ್ ಮಾಡುವುದು, ತಪ್ಪು ಮಾಹಿತಿ ಹಂಚಿಕೆಯ ವಿರುದ್ದ ಕ್ರಮ ಕೈಗೊಳ್ಳಲು ಪೋಲೀಸ್ ಸೈಬರ್ ಸೆಲ್ ಪೋಲೀಸರು ಸಜ್ಜಾಗಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸೈಬರ್ ಪೋಲೀಸರ ಸಂಖ್ಯೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸಿ ಬರೆಯುವವರ ಸಂಖ್ಯೆ ಹೆಚ್ಚಾಗಿದ್ದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾರಿಗೆ ವಿಳಂಬ ಆಗುತ್ತಿದೆ. ಇದೇ ಕಾರಣಕ್ಕೆ ಸಾಮಾಜಿಕ ತಾಣಗಳಲ್ಲೂ ಸಾಕಷ್ಟು ಟೀಕೆಗಳು ವ್ಯಕ್ತವಾಗುತಿದ್ದು ಸುಳ್ಳು ಮಾಹಿತಿ ನೀಡಿ ಸರ್ಕಾರವನ್ನು ನಿಂದಿಸಿದರೆ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಿದೆ. ಸಾಮಾಜಿಕ ತಾಣಗಳಲ್ಲಿ ಸರ್ಕಾರದ ಪರ -ವಿರುದ್ದ ಬರೆಯುವವರು ಇದ್ದೇ ಇರುತ್ತಾರೆ. ಆದರೆ ಸರ್ಕಾರದ ವಿರುದ್ದ ಕಟು ಟೀಕೆಗೆ ಕ್ರಮಕ್ಕೆ ಯಾವ ಮಾನದಂಡ ಅನುಸರಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಏಕೆಂದರೆ ಪ್ರಜಾ ಪ್ರಭುತ್ವದಲ್ಲಿ ಟೀಕೆ ಟಿಪ್ಪಣಿ ಸಹಜವೇ ಆಗಿದ್ದು ಅಭಿವೈಕ್ತಿ ಸ್ವಾತಂತ್ರ್ಯ ಸಂವಿಧಾನ ಪ್ರತಿಯೊಬ್ಬರಿಗೂ ನೀಡಿದ ಮೂಲಭೂತ ಹಕ್ಕಾಗಿದೆ. ಇದೀಗ ಕಾನೂನು ಕ್ರಮದ ಬೆದರಿಕೆಯ ಮೂಲಕ ಪ್ರಜೆಗಳ ಮೂಲಭೂತ ಸ್ವಾತಂತ್ರ್ಯಕ್ಕೂ ಸರ್ಕಾರ ಬೆದರಿಕೆ ಒಡ್ಡಿದೆಯಾ ಎಂಬ ಪ್ರಶ್ನೆ ಉದ್ಭವವಾಗಿದೆ.
ಸರ್ಕಾರದ ಈ ಎಚ್ಚರಿಕೆಯನ್ನು ಬಿಜೆಪಿ ಗೇಲಿ ಮಾಡಿದೆ. ಕಾಂಗ್ರೆಸ್ ನೀಡಿರುವ ಐದೂ ಗ್ಯಾರಂಟಿಗಳೂ ಸುಳ್ಳುಗಳು ಎಂದು ಟ್ವೀಟ್ ಮಾಡಿರುವ ಬಿಜೆಪಿ ಈ ಸುಳ್ಳು ಭರವಸೆಗಳನ್ನು ನೀಡಿರುವ ಕಾಂಗ್ರೆಸ್ ನಾಯಕರ ವಿರುದ್ದ ಯಾವಾಗ ಕ್ರಮ ಎಂದು ಗೇಲಿ ಮಾಡಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಗುರುವಾರ ನಗರ ಪೋಲೀಸ್ ಕಮಿಷನರ್ ಹಾಗು ಎಲ್ಲ ಡಿಸಿಪಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.ಇಂದು ಆಯುಕ್ತರ ಕಚೇರಿಯಲ್ಲಿ ನಗರ ಪೊಲೀಸ್ ಆಯುಕ್ತರು ಸೇರಿದಂತೆ ನಗರದ ಎಲ್ಲ ವಿಭಾಗದ ಡಿಸಿಪಿಗಳ ಜೊತೆ ಡಿಜಿ ಅಲೋಕ್ ಮೋಹನ್ ಸಭೆ ನಡೆಸಿದ್ದು ಸಭೆಯಲ್ಲಿ ಸಿಟಿ ಕಮಿಷನರ್ ದಯಾನಂದ್, ಅಡಿಷನಲ್ ಕಮಿಷನರ್ ಗಳಾದ ಸತೀಶ್ ಕುಮಾರ್, ರಮಣ್ಗುಪ್ತಾ, ಸಿಸಿಬಿ ಜಾಯಿಂಟ್ ಕಮಿಷನರ್ ಡಾ. ಎಸ್. ಡಿ. ಶರಣಪ್ಪ, ಟ್ರಾಫಿಕ್ ಕಮಿಷನರ್ ಎಂ.ಎನ್. ಅನುಚೇತ್ ಸೇರಿ ನಗರದ ಎಲ್ಲಾ ವಿಭಾಗದ ಡಿಸಿಪಿಗಳು ಭಾಗಿಯಾಗಿದ್ದರು. ಕಳೆದ ಜೂನ್ 25 ರಂದು ಮೊದಲ ಬಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಡಿಜಿ ಅಲೋಕ್ ಮೋಹನ್ ಸಭೆ ನಡೆಸಿದ್ದು ಇಂದು ಎರಡನೇ ಬಾರಿಗೆ ಸಭೆ ನಡೆಸಿ ಕೆಲ ಮಹತ್ವದ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು. ಬಹುಮುಖ್ಯವಾಗಿ ಸಭೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರನ್ನು ಪತ್ತೆ ಹಚ್ಚಬೇಕು. ಸೋಷಿಯಲ್ ಮೀಡಿಯಾದಲ್ಲಿ ನಕಲಿ ಅಕೌಂಟ್ ಗಳನ್ನ ತೆರೆದು ಸರ್ಕಾರದ ಯೋಜನೆಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.ಅಪರಾಧ ಪ್ರಕರಣಗಳನ್ನು ತಡೆಯುವುದಕ್ಕೆ ಡಿಸಿಪಿಗಳು ಡೇ ಬೀಟ್ ಹಾಗೂ ನೈಟ್ ಬೀಟ್ ವ್ಯವಸ್ಥೆಯನ್ನ ಸರಿಯಾಗಿ ಪಾಲನೆ ಮಾಡಬೇಕು. ಹಿರಿಯ ಅಧಿಕಾರಿಗಳ ಮೊಬೈಲ್ ಸಂಖ್ಯೆ ಠಾಣೆಯಲ್ಲಿ ಹಾಕಿರಬೇಕು. ಹಿರಿಯ ಅಧಿಕಾರಿಗಳು ಕೇವಲ ಎಸಿಪಿ ಇನ್ಸ್’ಪೆಕ್ಟರ್ ಗಳನ್ನು ಮಾತ್ರವಲ್ಲದೇ ಠಾಣೆಗಳಿಗೆ ಭೇಟಿಕೊಟ್ಟು ಸಾರ್ವಜನಿಕರಿಂದ ಅಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆಯಬೇಕು. ನಗರದಲ್ಲಿ ರೌಡಿ ಚಟುವಟಿಕೆಗಳನ್ನು ನಿಗ್ರಹಿಸಬೇಕು. ಆ್ಯಕ್ಟಿವ್ ಇರುವ ರೌಡಿಗಳ ಮೇಲೆ ನಿಗಾ ಇಟ್ಟು ಸಿಆರ್ಪಿಸಿ 110 ಸೆಕ್ಷನ್ ಅಡಿ ಬಾಂಡ್ ಬರೆಸಿ ವಾರ್ನ್ ಮಾಡಬೇಕೆಂದು ಸೂಚಿಸಿದರು.
ನಗರದಲ್ಲಿ ಸದ್ಯ ದಾಖಲಾಗಿರುವ ಜಾತಿನಿಂದನೆ ಪ್ರಕರಣಗಳೆಷ್ಟು, ಕೇಸ್ ದಾಖಲಾಗಿ ಚಾರ್ಜ್ ಶೀಟ್ ಆಗದೇ ಪೆಂಡಿಂಗ್ ಇರುವ ಕೇಸ್ ಗಳ ಸಂಖ್ಯೆಯಷ್ಟು, ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಸೈಬರ್ ಕ್ರೈಂ ಪ್ರಕರಣಗಳನ್ನ ತ್ವರಿತಗತಿಯಲ್ಲಿ ಪತ್ತೆ ಹಚ್ಚಬೇಕು. ಈ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುವಂತಹ ಪೋಸ್ಟ್ ಗಳ ಮೇಲೆ ನಿಗಾ ಇಡಲು ಡಿಜಿ ಅಲೋಕ್ ಕುಮಾರ್ ಸೂಚಿಸಿದ್ದಾರೆ.ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವಾರವೇ ಅಧಿಕಾರಿಗಳಿಗೆ ಸೂಚನೆ ನೀಡಿ ಸುಳ್ಳು ಸುದ್ದಿ ಹರಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು.