ಯಕ್ಷಗಾನವನ್ನು ಗಂಡುಕಲೆ ಎಂದು ಹೇಳುವ ಮಾತಿದೆ ಈ ವಾಕ್ಯವು ತಪ್ಪು ಕಲ್ಪನೆಗೆ ಅವಕಾಶ ಮಾಡಿ ಕೊಟ್ಟಿದೆ . ಇಲ್ಲಿ ಗಂಡು ಎಂದರೆ ‘ಬಲಿಷ್ಠ’ ಎಂಬ ಅರ್ಥವೇ ಹೊರತು ಗಂಡಸರು ಮಾತ್ರ ನಿರ್ವಹಿಸಬೇಕಾದ ಕಲೆ ಎಂದು ಅರ್ಥೈಸಬಾರದು.
ಪ್ರಾಕೃತಿಕವಾಗಿ , ಶಾರೀರಿಕವಾಗಿ ಹೆಣ್ಣಿಗಿಂತಲೂ ಗಂಡೇ ಬಲಿಷ್ಠನಾಗಿರುವ ಕಾರಣ “ಶ್ರೇಷ್ಠ ” ಎಂಬ ಅರ್ಥದಲ್ಲಿ “ಗಂಡುಕಲೆ”ಯೇ ಹೊರತು, ಯಕ್ಷಗಾನ ಕೇವಲ ಗಂಡಸರ ಕಲೆ, ಹೆಣ್ಮಕ್ಕಳಿಗಲ್ಲಾ ಎಂಬ ಅರ್ಥದಲ್ಲಿ ಅಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು.
ಯಕ್ಷರಂಗಕ್ಕೆ ಹೆಣ್ಮಕ್ಕಳ ಪ್ರವೇಶ ಇತ್ತೀಚಿನ ಬೆಳವಣಿಗೆಯಲ್ಲ. ಎಷ್ಟೋ ವರ್ಷಗಳ ಹಿಂದಿನಿಂದಲೆ ಹೆಣ್ಣುಮಕ್ಕಳು ಯಕ್ಷಗಾನದಲ್ಲಿ ಅಭಿನಯಿಸುತ್ತಿದ್ದಾರೆ. ಇಂತಹ ಯಕ್ಷಗಾನ ಕಲೆಯಲ್ಲಿ ಮಿಂಚುತ್ತಾ ತುಂಬಾ ಹೆಸರುಗಳಿಸಿರುವ ಒಬ್ಭ ಯಕ್ಷಗಾನ ಕಲಾವಿದೆ ಮತ್ತು ಕಥಾಕರ್ತೆಯೂ ಆದ ಶ್ರೀಮತಿ ಅರ್ಪಿತಾ ಹೆಗಡೆ ಯವರ ಯಕ್ಷಗಾನ ಸಾಧನೆಯ ಬಗ್ಗೆ ತಿಳಿದುಕೊಳ್ಳೋಣ.
30.11.1994 ರಂದು ಶ್ರೀಮತಿ ಶ್ರೀದೇವಿ ಹೆಗಡೆ ಹಾಗೂ ಸುರೇಶ್ ಹೆಗಡೆ ಇವರ ಮಗಳಾಗಿ ಜನಿಸಿದ ಅರ್ಪಿತಾ ಹೆಗಡೆ ಅನಿಮೇಷನ್ ಶಿಕ್ಷಣ ಹಾಗೂ BBA ಇವರ ವಿದ್ಯಾಭ್ಯಾಸವನ್ನು ಮುಗಿಸಿರುತ್ತಾರೆ. ಅರ್ಪಿತಾ ಇವರು ಪ್ರಾಥಮಿಕ ಯಕ್ಷಗಾನ ಶಿಕ್ಷಣವನ್ನು ಯಕ್ಷ ದೇಗುಲ ಸಂಸ್ಥೆಯಲ್ಲಿ ಕಲಿತು, ಶ್ರೀಯುತ ಕೃಷ್ಣಮೂರ್ತಿ ತುಂಗಾ ಇವರ ಯಕ್ಷಗಾನದ ಗುರುಗಳಾಗಿದ್ದಾರೆ. ಇವರು ಯಕ್ಷಗಾನ ಕ್ಷೇತ್ರಕ್ಕೆ ಬರಲು ಇವರ ತಂದೆ ಹಾಗೂ ತಾಯಿ ಪ್ರೇರಣೆಯಾಗಿದ್ದಾರೆ.
ಲವ ಕುಶ ಕಾಳಗ, ಚಕ್ರವ್ಯೂಹ ಇವರ ನೆಚ್ಚಿನ ಪ್ರಸಂಗಗಳು. ಕೃಷ್ಣ, ಅಭಿಮನ್ಯು, ಲವ, ಕುಶ, ಅಂಬೆ, ದಾಕ್ಷಾಯಣಿ, ರಾಧಾಂತರಂಗ ರಾಧೆ, ಬಬ್ರುವಾಹನ, ಚಿತ್ರಾಂಗದೆ, ಸಾಲ್ವ ಇವರ ನೆಚ್ಚಿನ ವೇಷಗಳು. ಸಾಲಿಗ್ರಾಮ, ಪೆರ್ಡೂರು, ಅಮೃತೇಶ್ವರಿ, ಸೌಕೂರು ಹಾಗೂ ಇವರದೆ ಮೇಳವಾದಂತಹ ಸಿರಿಕಲಾ ಮೇಳದಲ್ಲಿ ಇವರು ಅಭಿನಯ ಮಾಡಿರುತ್ತಾರೆ.
ರಂಗಕ್ಕೆ ಬರುವ ಮೊದಲು ಇವರು ಆ ದಿನದ ಪ್ರಸಂಗದ ಬಗ್ಗೆ ಓದಿ ತಿಳಿದುಕೊಂಡು, ಹಾಗೂ ಪ್ರಸಂಗದ ಬಗ್ಗೆ ಅನುಭವ ಇರುವ ಕಲಾವಿದರ ಹತ್ತಿರ ಹೋಗಿ ಪ್ರಸಂಗದ ಬಗ್ಗೆ ಕೇಳುವುದು ಹಾಗೂ ತಾನು ಮಾಡಿರುವ ಪಾತ್ರವೇ ಮತ್ತೊಮ್ಮೆ ಸಿಕ್ಕಿದಲ್ಲಿ ಅ ಪಾತ್ರದಲ್ಲಿ ಇನ್ನು ಏನು ಹೊಸ ವಿಷಯಗಳನ್ನು ಮಾಡಬಹುದು ಎಂದು ಯೋಚನೆ ಮಾಡಿ ಮತ್ತೆ ಯಕ್ಷಗಾನದಲ್ಲಿ ಅಭಿನಯವನ್ನು ಪ್ರಾರಂಭಿಸುತ್ತಾರೆ.
ಕೋರೊನಾ ಬಂದಾಗಿನಿಂದ ಯಕ್ಷಗಾನ ಕಾರ್ಯಕ್ರಮಗಳು ಕಮ್ಮಿ ಆಗುತ್ತಿದ್ದು, ಇವಾಗ ಸ್ವಲ್ಪ ಮಟ್ಟಿಗೆ ಯಕ್ಷಗಾನ ಮತ್ತೆ ಪ್ರಾರಂಭವಾಗಿದೆ. ಯಕ್ಷಗಾನ ಕ್ಷೇತ್ರಕ್ಕೆ ಯುವ ಕಲಾಭಿಮಾನಿಗಳು ಬರುವುದು ಸ್ವಲ್ಪ ಕಮ್ಮಿ ಆಗಿದೆ ಎಂದು ಇವರ ಅಭಿಪ್ರಾಯಪಡುತ್ತಾರೆ. ಒಂದು ಕಾಲದಲ್ಲಿ ಯಕ್ಷಗಾನ ರಂಗಕ್ಕೆ ಅನೇಕ ಯುವ ಪೀಳಿಗೆಯ ಕಲಾಭಿಮಾನಿಗಳು ಬರುತ್ತಿದ್ದರು ಆದರೆ ಇವಾಗ ಯುವ ಕಲಾಭಿಮಾನಿಗಳು ಬರುವುದು ಕಮ್ಮಿ ಆಗಿದೆ. ಮುಂದಿನ ದಿನಗಳಲ್ಲಿ ಇನ್ನು ಅನೇಕ ಯುವ ಕಲಾಭಿಮಾನಿಗಳು ಯಕ್ಷಗಾನ ರಂಗಕ್ಕೆ ಬರಬೇಕು ಎಂಬುವುದು ಇವರ ಅಭಿಪ್ರಾಯ.
ಅರ್ಪಿತಾ ಹೆಗಡೆ ಅವರು, ಸಿರಿ ಕಲಾ ಮೇಳದ ಅಡಿಯಲ್ಲಿ “ಯಕ್ಷ ರಥ” ಎಂಬ ಸಂಸ್ಥೆಯ ಹೆಸರಿನಲ್ಲಿ ಯಕ್ಷಗಾನ ಶಿಕ್ಷಣವನ್ನು ಹೇಳಿಕೊಡುತ್ತಿದ್ದಾರೆ. ಮುಂದೆ ಅದನ್ನು ಮುಂದುವರಿಸಿಕೊಂಡು ಹೋಗುವುದು ಹಾಗೂ ಯಕ್ಷಗಾನ ಪ್ರಸಂಗಗಳನ್ನು ಬರೆಯುವುದು ಮುಂದುವರೆಸಬೇಕು ಎಂಬ ಯೋಜನೆ ಇದೆ ಎಂದು ಆವರು ತಮ್ಮ ಕನಸಿನ ಯೋಜನೆಯನ್ನು ಹಂಚಿಕೊಂಡಿದ್ದಾರೆ.
ಅರ್ಪಿತಾ ಅವರಿಗೆ, ಕೆಂಪೇಗೌಡ ಪ್ರಶಸ್ತಿ, ಭಾರತ ರತ್ನ ಬಾಪೂಜಿ ಪ್ರಶಸ್ತಿ ಹಾಗೂ ಅನೇಕ ಸನ್ಮಾನ ಹಾಗೂ ಪ್ರಶಸ್ತಿಗಳು ಇವರಿಗೆ ಲಭಿಸಿರುತ್ತದೆ. ಪ್ರಸಂಗ ಬರೆಯುವುದು, ಪುಸ್ತಕ ಓದುವುದು, ಸಂಗೀತ ಕೇಳುವುದು ಇವರ ಹವ್ಯಾಸಗಳಾಗವೆ.
ಇವರು ಪೂರ್ಣ ಚಂದ್ರ, ನಾಗ ಪಂಚಮಿ, ಪ್ರೇಮ ಸಾರಂಗ, ಗಂಡುಗಲಿ ದೇವರಾಯ ಹಾಗೂ ಚಕ್ರ ಪೂರ್ಣಿಮೆ ಎನ್ನುವ ಪ್ರಸಂಗಗಳನ್ನು ಬರೆದಿದ್ದಾರೆ.
ನಾಗ ಪಂಚಮಿ, ಪ್ರೇಮ ಸಾರಂಗ, ಗಂಡುಗಲಿ ದೇವರಾಯ ಪೆರ್ಡೂರು ಮೇಳದಲ್ಲಿ ಪ್ರದರ್ಶನವನ್ನು ಕಂಡಿದೆ ಹಾಗೂ ಚಕ್ರ ಪೂರ್ಣಿಮೆ ಪ್ರಸಂಗ ಸಾಲಿಗ್ರಾಮ ಮೇಳದಲ್ಲಿ ಪ್ರದರ್ಶನ ಕಂಡಿದೆ.
ಇವರು 1೦.11.2019 ರಂದು ಮನೋಜ್ ಅವರನ್ನು ವಿವಾಹವಾಗಿ ಓರ್ವ ಮಗಳು ಪರ್ಣಿಕಾ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.