ಎಲ್ಲಿ ಕಳೆದು ಕೊಂಡಿದೆವೋ ಅಲ್ಲಿಂದಲೇ ಶುರು ಮಾಡಬೇಕು. ಕೆಟ್ಟ ಮೇಲೆ ಬುದ್ದಿ ಬಂದಂತಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಕಂಡ ಬಿಜೆಪಿ ಈಗ ತ್ವರಿತವಾಗಿ ಕಾರ್ಯರೂಪಕ್ಕೆ ಇಳಿದಂತಿದೆ. ಚುನಾವಣಾ ಕಣದಲ್ಲಿಯೇ ತನ್ನ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನಗಳು ನಡೆಯುತ್ತಿದೆ.
ಇದರ ಮೊದಲ ಪ್ರಯತ್ನ ಎಂಬಂತೆ ಬಿಜೆಪಿ ಪಕ್ಷವು ಕಾರ್ಯಕರ್ತರು ಮತ್ತು ಮತದಾರರನ್ನು ತಲುಪಲು ಹೊಸ ಯೋಜನೆಯನ್ನು ರೂಪಿಸಿದೆ.ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅನಿರೀಕ್ಷಿತ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತು ಮತದಾರರ ಮನೆ ಬಾಗಿಲಿಗೆ ಭೇಟಿ ನೀಡಲು ಈಗಾಗಲೇ ನಿರ್ಧರಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಗೆಲುವಿಗಾಗಿ ಯೋಜಿಸುತ್ತಿರುವ ಪಕ್ಷವು ಇಂತಹ ಕಾರ್ಯಕ್ರಮವನ್ನು ಆಯೋಜಿಸಿದೆ, ಇಲ್ಲಿ ಪಕ್ಷದ ನಾಯಕರು ಜೂನ್ 25 ರಿಂದ ಐದು ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಐದು ದಿನಗಳಲ್ಲಿ ರಾಜ್ಯಾದ್ಯಂತ 50 ಲಕ್ಷ ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ.
‘ಮನೆ ಮನೆಗೆ ಬಿಜೆಪಿ’ ಎಂಬ ಶೀರ್ಷಿಕೆಯ ಈ ಕಾರ್ಯಕ್ರಮದಲ್ಲಿ ಪಕ್ಷದ ಹಾಲಿ ಮತ್ತು ಮಾಜಿ ಶಾಸಕರು ಮತ್ತು ಸಂಸದರು ಸೇರಿದಂತೆ ಎಲ್ಲಾ ವರ್ಗದ ನಾಯಕರು ಭಾಗವಹಿಸಲಿದ್ದಾರೆ.
ಇಷ್ಟು ದಿನ ಪಕ್ಷದ ಗೆಲುವಿಗಾಗಿ ನಿರಂತರ ದುಡಿದಿರುವ ಕಾರ್ಯಕರ್ತರ ಮನೆಗಳಿಗೆ ಹೋಗಿ ಅವರಲ್ಲಿ ಹೊಸ ವಿಶ್ವಾಸವನ್ನು ಮೂಡಿಸುವ ಪ್ರಯತ್ನ ನಡೆಯಲಿದೆ. ಪಕ್ಷದ ಭವಿಷ್ಯದ ಯಶಸ್ಸಿಗಾಗಿ ಕೆಲಸ ಮಾಡಲು ಕಾರ್ಯಕರ್ತರನ್ನು ಪ್ರೋತ್ಸಾಹಿಸಲಾಗುವುದು.
ಪಕ್ಷದ ಹಿರಿಯ ನಾಯಕರು ಆರೇಳು ತಂಡಗಳಲ್ಲಿ, ಐದು ದಿನಗಳಲ್ಲಿ ರಾಜ್ಯದ ಪ್ರತಿಯೊಂದು ಮನೆಯನ್ನು ತಲುಪುವ ಪ್ರಯತ್ನವನ್ನು ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ನಾಯಕರು ಪ್ರತಿ ಜಿಲ್ಲೆಯಲ್ಲೂ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ನಂತರ ಮನೆ ಮನೆಗೆ ಹೋಗಲಿದ್ದಾರೆ ಮತ್ತು ಮೋದಿ ನೇತೃತ್ವದ ಸರ್ಕಾರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆಗಳು ಮತ್ತು ಕಾರ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ ಒಂದರಿಂದ ಎರಡು ಸಾವಿರ ಪ್ರಮುಖರನ್ನು ಗುರುತಿಸಿ ಅವರೊಂದಿಗೆ ಚರ್ಚಿಸಿ, ಈ ಬಾರಿ ಏನು ತಪ್ಪಾಗಿದೆ ಎಂಬುದನ್ನು ಪರಿಶೀಲಿಸಿ ಮತ್ತು ಮುಂದಿನ ಲೋಕಸಭಾ ಚುನಾವಣೆಗೆ ಏನು ತಯಾರಿ ಮಾಡಬೇಕೆಂದು ಚರ್ಚಿಸಲಿದ್ದಾರೆ.
ಪಕ್ಷದ ಅನುಭವಿ ನಾಯಕರನ್ನು ಕೈ ಬಿಟ್ಟ ಕೆಟ್ಟ ಕ್ಷಣವನ್ನು ಮರೆಯುವಂತಿಲ್ಲ. ಇದರಿಂದ ಆ ನಾಯಕರ ಅಭಿಮಾನಿ ಬಳಗ ಮತ್ತು ಜನರ ಮನೋಬಲವನ್ನು ಕುಗ್ಗಿಸಿದ ಆ ಒಂದು ನಿರ್ಧಾರವನ್ನು ಸರಿಪಡಿಸಲೇ ಬೇಕು. ಇದರಿಂದ ಪಕ್ಷಕ್ಕೆ ಆದ ನಷ್ಟವನ್ನು ಸರಿದೂಗಿಸಲೇ ಬೇಕು.
ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ ಕಾರ್ಯಕರ್ತರ ಮೇಲಾದ ದೌರ್ಜನ್ಯಕ್ಕೆ ಸಮರ್ಥ ಉತ್ತರ ನೀಡಬೇಕಾಗಿದೆ. ಧರ್ಮದೇಟು ತಿಂದಿರುವ ಕಾರ್ಯಕರ್ತರ ಅಸಮಾಧಾನದ ಹೋಗೆಯನ್ನು ಆರಿಸಲೇಬೇಕು.
ಇಷ್ಟು ವರ್ಷ ಪಕ್ಷದಲ್ಲಿ ಇದ್ದು ಟಿಕೇಟು ನೀಡಿಲ್ಲ ಎಂಬ ಕಾರಣಕ್ಕೆ ಪಕ್ಷ ಮತ್ತು ಪಕ್ಷದ ನಾಯಕರ ಬಗ್ಗೆ ಹಾನಿಕಾರಕ ಮಾತುಗಳನ್ನು ಆಡಿ, ಪಕ್ಷದ ವರ್ಚಸ್ಸಿಗೆ ದಕ್ಕೆ ತಂದಿರುವುದನ್ನು ಸರಿಪಡಿಸಲೇ ಬೇಕು.
ಇವೆಲ್ಲವುದಕ್ಕಿಂತ ಮುಖ್ಯವಾಗಿ ಮತದಾರರಲ್ಲಿ ಹೊಸ ವಿಶ್ವಾಸ ಮೂಡುವಂತೆ ಮಾಡುವುದು ಅವಶ್ಯಕ.