ಮೊನ್ನೆ ನಾನು ಬ್ಯಾಂಕನ ಎಟಿಎಂ ನಲ್ಲಿ ಕನ್ನಡದಲ್ಲಿ ಆಪರೇಟ್ ಮಾಡಲು ನೋಡಿದರೆ, ಅದು ಸಾಧ್ಯವಾಗಲಿಲ್ಲ. ಮ್ಯಾನೇಜರಗೆ ಕೇಳಿದರೆ ದೂರು ಸಲ್ಲಿಸಿ ಎಂದರು. ಅದರಂತೆ ನಾನು ಒಂದು ಲಿಖಿತ ದೂರು ಸಲ್ಲಿಸಿ ಬಂದೆ. ನಂತರ ಅವರೇ ಸೂಚಿಸಿದಂತೆ ಆನಲೈನ್ ದೂರನ್ನೂ ಸಲ್ಲಿಸಿದೆ. ಸ್ನೇಹಿತೆಯರೆ/ ಸ್ನೇಹಿತರೇ, ಕನ್ನಡದ ಬಗ್ಗೆ ನಮಗೆಲ್ಲ ನಿಜವಾದ ಪ್ರೀತಿ ಇದ್ದರೆ ನಾವು ಮೊದಲು ಕನ್ನಡ ಬಳಸಬೇಕು. ಇಲ್ಲವಾದರೆ ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡ ಮಾತನಾಡುವವರು, ಓದುವವರು, ಬರೆಯುವವರು ಇರುವುದೇ ಇಲ್ಲವೇನೋ. ಮೊದಲೇ ಎಲ್ಲಾ ಬ್ಯಾಂಕುಗಳಲ್ಲಿ ಬೇರೆ ರಾಜ್ಯಗಳಿಂದ ಬಂದ ಸಿಬ್ಬಂದಿಯೇ ಇರುತ್ತಾರೆ. ಅವರು ತಪ್ಪಿ ಕೂಡ ಕನ್ನಡ ಕಲಿಯಲು ಮನಸ್ಸು ಮಾಡುವುದಿಲ್ಲ. ನಮ್ಮ ಯುವಕ/ ಯುವತಿಯರು ಸಿರಿಯಸ್ಸಾಗಿ ಕುಳಿತು ಅಭ್ಯಾಸ ಮಾಡಿ ಬ್ಯಾಂಕ್ ಪರೀಕ್ಷೆ ಬರೆಯುವುದಿಲ್ಲ. ಮತ್ತೊಂದು ಗಮರ್ನಾಹ ಸಂಗತಿ ಎಂದರೆ ಯಾವುದೇ ಕೇಂದ್ರ ಸರ್ಕಾರದ ಪರೀಕ್ಷೆಗಳು ಕನ್ನಡ ಅಥವಾ ಪ್ರದೇಶಿಕ ಭಾಷೆಯಲ್ಲಿ ಪ್ರಶ್ನೆಪತ್ರಿಕೆಯನ್ನು ನೀಡುವುದಿಲ್ಲ. ಅದು ದ್ವೀಭಾಷೆಯಲ್ಲಿದ್ದರೂ ಕೇವಲ ಇಂಗ್ಲೀ಼ಷ ಮತ್ತು ಹಿಂದಿಯಲ್ಲಿ ಮಾತ್ರವೇ ಮುದ್ರಣವಾಗುತ್ತದೆ.ಇದರಿಂದ ಹಿಂದಿ ಬಾರದ ವಿದ್ಯಾರ್ಥಿಗಳು ಕಷ್ಟಪಡಬೇಕಾಗುತ್ತದೆ.ಇದೇ ಆಯಾ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿ ಪತ್ರಿಕೆಯನ್ನು ನೀಡಿದರೆ ರಾಜ್ಯದ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುತ್ತದೆ. ಮತ್ತು ಆಯಾ ರಾಜ್ಯದಲ್ಲಿ ಆಯಾ ರಾಜ್ಯದ ವಿದ್ಯಾರ್ಥಿಗಳೇ ಕೆಲಸವನ್ನು ಪಡೆಯಬಹುದು ಇದರಿಂದ ಬ್ಯಾಂಕ ಅಥವಾ ಇನ್ನೀತರ ಕ್ಷೇತ್ರಗಳ ವ್ಯವಹಾರದಲ್ಲಿ ಸಮಸ್ಯೆ ಉಂಟಾಗುವುದಿಲ್ಲ. ಮತ್ತು ಇನ್ನು ಮೇಲೆ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಬ್ಯಾಂಕುಗಳಲ್ಲಿ ಕೂಡ ಕನ್ನಡ ಕಾಣೆಯಾಗಿ ಹೋಗುತ್ತದೆ. ಇದಕ್ಕೆ ನನ್ನದೊಂದು ಸಲಹೆ ಎಂದರೆ ದಯವಿಟ್ಟು ಎಲ್ಲರೂ ಎಟಿಎಂ ಬಳಸುವಾಗ ಕನ್ನಡ ಆಪ್ಶನ್ ಆಯ್ದುಕೊಳ್ಳಿ. ಆ ಮೂಲಕ ಕನ್ನಡದಲ್ಲಿ ನಾವು ವ್ಯವಹರಿಸುತ್ತೇವೆ ಎಂದು ತೋರಿಸಿ.
ಇನ್ನು ಕೆಲವೊಂದು ಇಂಗ್ಲೀಷ ಮಾಧ್ಯಮದ ಕಾನ್ವೆಂಟ್ ಶಾಲೆಯಲ್ಲಿ ಮತ್ತೊಂದು ತರಹದ ವರ್ತನೆ ಕಂಡು ಬರುತ್ತದೆ. ಅಲ್ಲಿ ಶಾಲೆ ಅಥವಾ ಕಾಲೇಜಿನ ಕ್ಯಾಂಪಸ್ನಲ್ಲಿ ಕನ್ನಡದಲ್ಲಿ ಮಾತನಾಡಿದರೆ ನಿಮ್ಮ ಮಕ್ಕಳಿಗೆ ದಂಡ ಹಾಕಲಾಗುತ್ತದೆ. ಇದು ಯಾವ ರೀತಿಯ ನ್ಯಾಯ ? ಮಕ್ಕಳು ತಮ್ಮ ಮಿತ್ರರೊಂದಿಗೆ ಖುಷಿಯಲ್ಲಿ ಇರುವಾಗ ಅಥವಾ ದುಖಃದಲ್ಲಿ ಇರುವಾಗ ಸಾಮಾನ್ಯವಾಗಿ ಮಾತೃ ಭಾಷೆಯಿಂದಲೇ ಮಾತುಗಳು ಹೊರಡುತ್ತವೆ. ಅದನ್ನು ಬಿಟ್ಟು ಕನ್ನಡದಲ್ಲಿ ಬೇಡ ಇಂಗ್ಲೀಷ್ ನಲ್ಲಿ ಮಾತನಾಡಿ ಎಂದರೆ ಅದು ಮಕ್ಕಳ ಅಭಿವ್ಯಕ್ತಿತ್ವವನ್ನು ತಡೆದಂತಾಗುವುದಿಲ್ಲವೇ ? ಮಕ್ಕಳು ಇದೇ ವರ್ತನೆಯನ್ನು ಮನೆಯಲ್ಲಿ ಮುಂದುವರೆಸಿದರೆ ಅವರಲ್ಲಿ ಕನ್ನಡ ಅಥವಾ ಅನ್ಯ ಭಾಷೆಯಲ್ಲಿ ಮಾತನಾಡುವವರು ಅನಕ್ಷರಸ್ಥರು ಎಂಬ ಭಾವನೆ ಮೂಡುತ್ತದೆ. ಇದು ಕಡಿಮೆಯಾಗಬೇಕು ಎಂಬ ಉದ್ದೇಶದಿಂದಲೇ ಮಾತೃ ಭಾಷಾನೀತಿಯನ್ನು ಅನುಷ್ಠಾನಕ್ಕೆ ತರಬೇಕು ಮತ್ತು ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ಎಲ್ಲ ಕಡೆ ಆದೇಶವನ್ನು ತರಬೇಕು. ಇಂತಹ ಕಾರ್ಯಕ್ರಮಗಳನ್ನು ಜಾರಿಗೆ ತರುವತ್ತ ಕನ್ನಡ ಪರ ಹೋರಾಟಗಾರರು ಕಾರ್ಯಪ್ರವೃತ್ತರಾಗಬೇಕೆ ವಿನಃ ಕೇವಲ ಒಂದು ಪಕ್ಷ ಅಥವಾ ಸಿದ್ಧಾಂತಗಳಿಗೆ ಜೈಕಾರ ಹಾಕುವುದಲ್ಲ.
ಮುಂದುವರೆಯುತ್ತದೆ.