ಮೌರ್ಯ ಶಾತವಾಹನ ಮೊದಲಾದವರ ನಂತರ ಕನ್ನಡ ನಾಡನ್ನು ಕ್ರಿ.ಶ. ೫ನೆಯ ಶತಮಾನದಿಂದ ೧೮ನೇಯ ಶತಮಾನದವರೆಗೆ ಆಳಿದ ರಾಜಮನೆತನಗಳಲ್ಲಿ ಮಹತ್ವದವರೆಂದರೆ ಬನವಾಸಿಯ ಕದಂಬರು, ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರದ ಅರಸರು, ಬಹಮನಿ ಸುಲ್ತಾನರು, ಮೈಸೂರು ಅರಸರು ಮೊದಲಾದವರು. ಈ ರಾಜವಂಶಗಳು ಕನ್ನಡವನ್ನೇ ಆಡಳಿತದಲ್ಲಿ ಬಳಸುತ್ತಿದ್ದವೆನ್ನುವುದು ಆಯಾಕಾಲದ ಶಾಸನಗಳಿಂದ, ಇತರ ದಾಖಲೆಗಳಿಂದ ವೇದ್ಯವಾಗುತ್ತದೆ. ಉದಾಹರಣೆಗೆ ‘ಹಲ್ಮಿಡಿ ಶಾಸನ’ವೂ ಒಂದು ಕನ್ನಡ ಭಾಷೆಯ ಶಾಸನವಾಗಿದ್ದು ಅಲ್ಲಿಯ ಭಾಷಾ ಬಳಕೆ ಈ ರೀತಿ ಇದೆ.
ಕೇಕಯ ಪಲ್ಲವರಂ ಕಾದೆಳೆದು ಪತ್ತ ಜಯನಾ ವಿಜ
ಅರಸನ್ಗೆ ಬಾಳ್ಗಳ್ಚಿ ಪಲ್ಮಡಿಉಂ ಮೂರುವಳ್ಳಿಉಂ ಕೊಟ್ಟಾರ್
ಬಟಾರಿ ಕುಲದೊನ್ ಅಳಕದಮ್ಬನ್
ಕಳ್ದೋನ್ ಮಹಾಪಾತಕನ್
[ಇದರ ಸರಳ ಅನುವಾದ ಇಂತಿದೆ.
ಕೇಕಯರನ್ನು ಮತ್ತು ಪಲ್ಲವರನ್ನು ದಂಡೆತ್ತಿ ಹೋಗಿ ಸೋಲಿಸಿ ವಿಜಯಶಾಲಿಯಾದ ವಿಜಯ ಅರಸನಿಗೆ ಬಾಳ್ಗಚ್ಚಾಗಿ ಪಲ್ಮಡಿಯನ್ನೂ, ಮೂವಳ್ಳಿಯನ್ನೂ (ಮೃಗೇಶ ಮತ್ತು ನಾಗ ಎಂಬವರು ಬಟ್ಟಾರಿ ಕುಲದ ಅಳಕದಂಬನ ಆಜ್ಞಾನುಸಾರ) ಕೊಟ್ಟರು. ಬಟಾರಿ ಕುಲದವನು ಅಳಕದಂಬನು. (ಈ ಶಾಸನವನ್ನು ಕದ್ದವನು ಮಹಾಪಾತಕನು] ಇಲ್ಲಿ ಬಳಕೆಯಾದ ಭಾಷೆ ಹಳಗನ್ನಡಕ್ಕೂ ‘ಪೂರ್ವದ ಹಳಗನ್ನಡ’ವಾಗಿದೆ, ಇದು ರಾಜಾಜ್ಞೆ ಮಾದರಿಯೂ ಹೌದು. ಮುಖ್ಯವಾಗಿ ಆಗ ಕನ್ನಡವೇ ಆಡಳಿತ ಭಾಷೆಯಾಗಿತ್ತೆಂದು ಇದರಿಂದ ನಿರ್ದೇಶಿತವಾಗಿರುತ್ತದೆ.
ಈ ಮಾದರಿಯ ಅಸಂಖ್ಯಾತ ಶಾಸನಗಳು ನಮಗೆ ದೊರೆಯುತ್ತವೆ. ರಾಜಮನೆತನಗಳ ಆಳ್ವಿಕೆಯ ಕಾಲದ ರಾಜ ಶಾಸನಗಳಲ್ಲಿ ಕನ್ನಡವನ್ನು ಬಳಸಿ ಜನರ ಭಾಷೆಗೆ ಆಡಳಿತದಲ್ಲಿ ಮಹತ್ವದ ಸ್ಥಾನ ಕಲ್ಪಿಸಿಕೊಟ್ಟ ರಾಜಮನೆತನಗಳಲ್ಲಿ ಬಾದಾಮಿ ಚಾಲುಕ್ಯರದು ಉಲ್ಲೇಖನೀಯ ಹೆಸರು. ಕ್ರಿ.ಶ.ಸು. ೭೦೦ರ ಕಾಲದ ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದಲ್ಲಿ ಬಳಕೆಯಾದ ಕನ್ನಡ- “ಸಾಧುಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ, ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ಲ’ ಮೊದಲಾದ ಸಾಲುಗಳಲ್ಲಿ ವ್ಯಕ್ತವಾಗುವಂತೆ, ಕನ್ನಡ ಭಾಷೆ ಇಲ್ಲಿ ಕಾವ್ಯಾತ್ಮಕವಾಗಿರುವುದನ್ನು
ಕಾಣುತ್ತೇವೆ. ಅನೇಕ ಆಡಳಿತಾತ್ಮಕ ಪಾರಿಭಾಷಿಕಗಳನ್ನು ಚಾಲುಕ್ಯರ ಕಾಲದ ಇತರ ಶಾಸನಗಳಲ್ಲಿ ಕಾಣಬಹುದು. ಉದಾಹರಣೆಗೆ ಭೂದಾಖಲೆಗಳ ಅಧಿಕಾರಿ ‘ಅಕ್ಷರಾಪಾಲಿಕನಾದರೆ, ಭೂಮಿಯನ್ನು ಅಳೆಯುವ ಅಧಿಕಾರಿ ‘ರುಜ್ಜುಕ’ (ಹಗ್ಗದವ) ನೆನ್ನಿಸುತ್ತಾನೆ. ಮಹಾಪ್ರಧಾನಿ, ಸಂಧಿ ವಿಗ್ರಹಿ ಮೊದಲಾವರ ಜೊತೆಗೆ ‘ದೌವಾರಿಕ’ ‘ಅಂತರವಾಸಿಕ’ ‘ರಹಸ್ಯಾಧಿಕೃತ’ರು ನಿರ್ದಿಷ್ಟ ಜವಾಬ್ದಾರಿಯ ಮಂತ್ರಿಗಳಿಗೆ ಅನ್ವಯಿಸುವ ಹೆಸರುಗಳು. ಸ್ಥಳೀಯ ತೆರಿಗೆಗಳಿಗಾಗಿ ‘ಸಂತೆವಣ’ ‘ಮನೆದರೆ’ ಮೊದಲಾದ ತೆರಿಗೆಗಳ ಹೆಸರು ಬಳಕೆಯಲ್ಲಿದ್ದುವು. ಭೂಕಂದಾಯದಲ್ಲಿ ವಿನಾಯಿತಿಯನ್ನು ‘ಮಾನ್ಯ’ ಅರ್ಧಮಾನ್ಯ’ ‘ಸರ್ವಮಾನ್ಯ’ವೆಂದು ನೀಡಲಾಗುತ್ತಿತ್ತಂತೆ.
ಹೈದರಾಲಿ, ಟಿಪ್ಪು ಸುಲ್ತಾನರೂ ಆಡಳಿತದಲ್ಲಿ ಕನ್ನಡ ಭಾಷೆಯನ್ನು ಉಳಿಸಿಕೊಳ್ಳುತ್ತಾರೆ. ಹೈದರನ ಕಾಲದಲ್ಲಿ ಖಜಾನೆ ಲೆಕ್ಕ ಮತ್ತು ನಗದು ವ್ಯವಹಾರ ಸಂಬಂಧದಲ್ಲಿ ಪೂರ್ಣಯ್ಯ ಕನ್ನಡದಲ್ಲಿ, ಕೃಷ್ಣರಾವ್ ಮರಾಠಿಯಲ್ಲಿ ದಾಖಲೆಗಳನ್ನು ಇಡುತ್ತಿದ್ದರೆಂದು ತಿಳಿಯುತ್ತದೆ. ಟಿಪ್ಪುವಿನ ಕಾಲದಲ್ಲೂ ತರಫ್ದಾರರು ಕನ್ನಡದಲ್ಲಿ ಕಂದಾಯ ವಿವರಗಳನ್ನು ಲೆಕ್ಕಗಳನ್ನು ನೀಡುತ್ತಿದ್ದರು. ಅವುಗಳ ಮರಾಠಿ ಪಾರಸಿ ಪ್ರತಿಗಳನ್ನು ತಯಾರಿಸುತ್ತಿದ್ದರು. ಹೈದರಾಲಿ, ಟಿಪ್ಪು ಸುಲ್ತಾನರು ಶೃಂಗೇರಿ ಮಠದೊಂದಿಗೆ ನಡೆಸುತ್ತಿದ್ದ ಪತ್ರ ವ್ಯವಹಾರಗಳಲ್ಲಿ ಬಳಕೆಯಾಗುತ್ತಿದ್ದ ಕನ್ನಡ ಆಗಿನ ಆಡಳಿತ ಕನ್ನಡದ ಸ್ವರೂಪವನ್ನು ಮನದಟ್ಟು ಮಾಡುತ್ತದೆ. ರುಸಂ, ಅಹವಾಲು, ಖಾವಂದರು, ಜಬರು ಮೊದಲಾದ ಅನೇಕ ಪದಗಳು ಆ ಕಾಲಮಾನದಲ್ಲಿ ಆಡಳಿತ ಕನ್ನಡಕ್ಕೆ ಸೇರಿಕೊಳ್ಳುತ್ತವೆ
ವಿವಿಧ ರಾಜಮನೆತನಗಳ ಕಾಲದಲ್ಲಿ ರಚಿತವಾದ ಶಿಲಾಶಾಸನ, ತಾಮ್ರ ಶಾಸನಗಳಲ್ಲಿ ಚರಿತ್ರೆ ಇತರ ದಾಖಲೆಗಳಲ್ಲಿ ಕನ್ನಡ ಭಾಷೆ ಆಡಳಿತ ಕ್ಷೇತ್ರದಲ್ಲಿ ಬಳಕೆಗೊಳ್ಳುತಿದ್ದ ಬಗೆಯನ್ನು, ಅದರ ಸ್ವರೂಪವನ್ನು ಪರಿಚಯ ಮಾಡಿಕೊಡುತ್ತದೆ. ಅವುಗಳನ್ನು ಆಧರಿಸಿ, ಆಡಳಿತದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಪಾರಿಭಾಷಿಕ ಪದಗಳು ಇಂತಿವೆ: ಪ್ರಧಾನ, ಮಹಾಪ್ರಧಾನ. ಸಂಧಿವಿಗ್ರಹಿ, ಗೂಢಚಾರ ಮೊದಲಾದವು ಆ ಕಾಲದ ಉನ್ನತಾಧಿಕಾರ ಸ್ಥಾನವುಳ್ಳವರ ಹೆಸರುಗಳು. ಮಹಾಮಂಡಲೇಶ್ವರ, ವಿಷಯಾಧಿಪತಿ, ಮಹಾಸಾಮಂತಾಧಿಪತಿ, ದೌವಾರಿಕ, ಅಂತರವಾಸಿಕ, ನಗರಾಧ್ಯಕ್ಷ, ಗವುಂಡ, ತಳಾರ ಅಧಿಕಾರಿಗಳ ಹೆಸರುಗಳು, ಅಧಿಕಾರಿಗಳ ಕಾರ್ಯ ಕ್ಷೇತ್ರವನ್ನು ‘ವೆರ್ಗಡೆ’ ಸಹಿತವಾಗಿ ಮನೆವೆರ್ಗಡೆ, ಸುಂಕವೆರ್ಗಡೆ, ಬಾಣಸವೆರ್ಗಡೆ, ಅಂತಃಪುರವೆರ್ಗಡೆ ಮೊದಲಾದ ಪದಗಳು ಸೂಚಿಸುತ್ತವೆ. ಪಟ್ಟಣಶೆಟ್ಟಿ, ಪಟ್ಟಣಸ್ವಾಮಿ ಪ್ರಥಮರು ಮಹಾಜನರು ಮೊದಲಾದವು ಜನತಾಮುಖಂಡರ ಹೆಸರುಗಳು. ಮತ್ತರು, ಕೋಲು, ಭೂ ಅಳತೆಯ ಹೆಸರುಗಳು, ಸಿದ್ದಾಯ, ದಂಡಾಯ, ಪನ್ನಾಯ ಭತ್ತಾಯ, ನೀರುಣಿಸುಂಕ ತಿಪ್ಪೆಸುಂಕ ಕುಳಿಯಸುಂಕ, ದವಸಾಯದ ಸುಂಕ, ಮನೆವಣ, ಸೂಳೆವಣ, ಕನ್ನಡಿವಣ, ಕುರಿದರೆ, ಬಂಡಿದರೆ, ಡೊಂಬದರೆ ಮೊದಲಾದ ತೆರಿಗೆ ಸೂಚಕ ಪದಗಳು ರಾಜರುಗಳು ವಿಧಿಸುತ್ತಿದ್ದ ವಿವಿಧ ರೀತಿಯ ತೆರಿಗೆಗಳನ್ನು ತಿಳಿಸುತ್ತದೆ.