ಹೈದರಬಾದ್ ನಲ್ಲಿರುವ ವಿಶೇಷ ನಂಬಿಕೆಗಳಲ್ಲಿ ಅಸ್ತಮಾ ನಿವಾರಣೆಗೆ ಮೀನಿನ ಪ್ರಸಾದ ನೀಡುವುದು ಕೂಡಾ ಒಂದು.ಬಥಿನಿ ಹರಿನಾಥಗೌಡ್ ಕುಟುಂಬಸ್ಥರು ನೀಡುವ ಮೀನು ಪ್ರಸಾದದಲ್ಲಿ ಜನರಿಗೆ ಅಪಾರ ನಂಬಿಕೆ ಇದ್ದು, ಪ್ರತಿವರ್ಷ ಮಳೆಗಾಲದಲ್ಲಿ ಮೀನಿನ ಪ್ರಸಾದವನ್ನು ನೀಡಲಾಗುತ್ತದೆ. ಈ ಬಾರಿಯ ಮೀನು ಪ್ರಸಾದ ವಿತರಣಾ ಕಾರ್ಯಕ್ರಮ ಶುಕ್ರವಾರದಂದು ವಸ್ತುಪ್ರದರ್ಶನ ಮೈದಾನದಲ್ಲಿ ಆರಂಭವಾಯಿತು.
ಸುಮಾರು 100 ವರ್ಷಗಳಿಂದ ಬಥಿನಿ ಕುಟುಂಬದವರು ಪ್ರತಿ ವರ್ಷ ಮೀನು ಪ್ರಸಾದ ನೀಡುತ್ತಿದ್ದಾರೆ. ಮೀನುಪ್ರಸಾದವು ಮೂರ್ರೆಲ್ ಮೀನು ಮತ್ತು ಗಿಡಮೂಲಿಕೆಗಳ ಪೇಸ್ಟ್ ಅನ್ನು ಒಳಗೊಂಡಿರುತ್ತದೆ. ಮೀನುಪ್ರಸಾದವೆಂದರೆ ಜೀವಂತ ಮೀನುಗಳನ್ನು ನುಂಗಬೇಕು ಹೀಗೆ ನುಂಗುವುದರಿಂದ ಮೀನಿನ ಸುತ್ತುವ ಚಲನೆಯು ಕಫವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಸಸ್ಯಹಾರಿಗಳಿಗೆ ಪ್ರಸಾದವನ್ನು ಬೆಲ್ಲದೊಂದಿಗೆ ನೀಡಲಾಗುತ್ತದೆ.
ಸತತ ನಾಲ್ಕರಿಂದ ಆರು ವರ್ಷಗಳ ಕಾಲ ಈ ಪ್ರಸಾದವನ್ನು ಸೇವಿಸಿದರೆ ಈ ಉಸಿರಾಟ ಸಂಬಂಧಿ ಕಾಯಿಲೆಗಳು ಬಹುತೇಕ ವಾಸಿಯಾಗುತ್ತದೆ ಎಂದು ಹೇಳಲಾಗುತ್ತದೆ. ಈ ಪ್ರಸಾದ ಸ್ವೀಕರಿಸಲು ಪ್ರತಿ ವರ್ಷ ಲಕ್ಷಗಟ್ಟಲೆ ಜನರು ಹೈದಾರಬಾದ್ಗೆ ಆಗಮಿಸುತ್ತಾರೆ.
ಮೂರುವರ್ಷಗಳ ಬಳಿಕ ನಡೆಯುತ್ತಿರುವ ಕಾರ್ಯಕ್ರಮ
ಕೋವಿಡ್ ಕಾರಣದಿಂದಾಗಿ ಮೂರುವರ್ಷಗಳಿಂದ ಈ ಕಾರ್ಯಕ್ರಮವು ನಡೆದಿರಲಿಲ್ಲ. ಈ ವರ್ಷ ಎರಡು ದಿನಗಳ ಕಾರ್ಯಕ್ರಮ ನಡೆಯಲಿದ್ದು, 5 ಲಕ್ಷಜನರು ಭಾಗವಹಿಸುವ ನಿರೀಕ್ಷೆಯಿದೆ. 34 ಕೌಂಟರ್ಗಳ ಮೂಲಕ ಪ್ರಸಾದ ವಿತರಿಸಲಾಗುವುದು. 5 ಕ್ವಿಂಟಾಲ್ ಪ್ರಸಾದ ವಿತರಣೆ ಆಗಲಿದ್ದು, 2.5 ಲಕ್ಷ ಮೂರ್ರೆಲ್ ಮೀನಗಳನ್ನು ಸಿದ್ದಪಡಿಸಲಾಗಿದೆ. ಈ ಬಗ್ಗೆ ಹರಿನಾಥ್ ಗೌಡ ಮಗಳು ಅಲಕನಂದ ದೇವಿ ಮಾಹಿತಿಯನ್ನು ನೀಡಿದ್ದಾರೆ. ಸಣ್ಣಮಕ್ಕಳಿಂದ ಹಿಡಿದು ಹಿರಿಯರವರೆಗೂ ಈ ಪ್ರಸಾದವನ್ನು ನೀಡಲಾಗುತ್ತದೆ. ಹಾಗೆಯೇ ಗರ್ಭಿಣಿಯರು ಪ್ರಸಾದವನ್ನು ಸೇವಿಸುವಂತಿಲ್ಲ. ಇನ್ನೂ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬೇಕು ಎಂದು ತಿಳಿಸಿದ್ದಾರೆ.
ಹೈದರಾಬಾದ್ ಟ್ರಾಫಿಕ್ ಪೊಲೀಸರು ಗುರುವಾರ ಸಂಜೆ 6 ರಿಂದ ಶನಿವಾರ ಮಧ್ಯರಾತ್ರಿಯವರೆಗೆ ನಾಂಪಲ್ಲಿಯ ನುಮಾಯಿಶ್ ಮೈದಾನದಲ್ಲಿ ಮೀನು ಪ್ರಸಾದ ವಿತರಣೆಗೆ ಸಂಬಂಧಿಸಿದಂತೆ ಸಂಚಾರ ನಿರ್ಬಂಧಗಳನ್ನು ಘೋಷಿಸಿದ್ದಾರೆ. ವಿಕಲಚೇತನರು, ವೃದ್ಧರು ಮತ್ತು ಮಹಿಳೆಯರಿಗೆ ವಿಶೇಷ ಸರತಿ ಸಾಲುಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಮೀನು ಪ್ರಸಾದಕ್ಕೆ ವಿರೋಧ
ಮೀನು ಪ್ರಸಾದ ವಿತರಣೆ ಬಗ್ಗೆ ಮೊದಲಿನಿಂದಲೂ ಜನ ವಿಜ್ಞಾನ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಯಾವುದೇ ವೈಜ್ಞಾನಿಕ ದೃಢೀಕರಣವಿಲ್ಲದೆ ಅಕ್ರಮವಾಗಿ ಮೀನು ಪ್ರಸಾದ ವಿತರಿಸಲಾಗುತ್ತಿದೆ ಎಂಬುದು ಅವರ ಆರೋಪ. 2013ರಲ್ಲಿ ಜನ ವಿಜ್ಞಾನ ವೇದಿಕೆ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಔಷಧಿಯಿಂದ ಯಾವುದೇ ಹಾನಿಗಳಾಗಿಲ್ಲ ಎಂಬ ತೀರ್ಮಾನಕ್ಕೆ ಹೈಕೋರ್ಟ್ ಬಂದಿತ್ತು. ಇದರೊಂದಿಗೆ ಇದನ್ನು ‘ಔಷಧ’ ಎಂದು ಕರೆಯಬಾರದು ಎಂದು ಹೈಕೋರ್ಟ್ ಆದೇಶಿಸಿದೆ.