ದೂರದರ್ಶನದ ಮೊದಲ ಇಂಗ್ಲಿಷ್ ಸುದ್ದಿ ನಿರೂಪಕರಲ್ಲಿ ಒಬ್ಬರಾಗಿದ್ದ ಗೀತಾಂಜಲಿ ಅಯ್ಯರ್(76) ಅವರು ಬುಧವಾರ ದೆಹಲಿಯಲ್ಲಿ ನಿಧನರಾಗಿದ್ದಾರೆ. ಅವರು 30 ವರ್ಷಗಳಷ್ಟು ದೀರ್ಘ ಕಾಲ ದೂರದರ್ಶನದ ಸುದ್ದಿ ನಿರೂಪಕಿಯಾಗಿ ಕಾರ್ಯವನ್ನು ನಿರ್ವಹಿಸಿದ್ದರು.
ಕೆಲ ದಿನಗಳಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಿನ್ನೆ ಸಂಜೆ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
1947ರ ಜನವರಿ 29ರಂದು ಗೀತಾಂಜಲಿ ಅಯ್ಯರ್ ಜನಿಸಿದರು. ಕೋಲ್ಕತ್ತಾದ ಲೊರೆಟೊ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದ ಅವರು ಬಳಿಕ ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಹಾಗೆಯೇ ಗೀತಾಂಜಲಿ ಅಯ್ಯರ್ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಿಂದ ಡಿಪ್ಲೊಮಾವನ್ನೂ ಕೂಡಾ ಪಡೆದಿದ್ದರು.
ಗೀತಾಂಜಲಿ ಅಯ್ಯರ್ ವೃತ್ತಿ ಜೀವನ:
ಗೀತಾಂಜಲಿ ಅಯ್ಯರ್ 1971ರಲ್ಲಿ ದೂರದರ್ಶನವನ್ನು ಸೇರಿದರು. ಬಳಿಕ ಮೂರು ದಶಕಗಳಿಗೂ ಹೆಚ್ಚು ಕಾಲ ಸುದ್ದಿ ನಿರೂಪಕಿಯಾಗಿ ಕಾರ್ಯವನ್ನು ನಿರ್ವಹಿಸಿದ್ದರು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ನಾಲ್ಕು ಬಾರಿ ಅತ್ಯುತ್ತಮ ನಿರೂಪಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ತಮ್ಮ ಅತ್ಯುತ್ತಮ ಕೆಲಸ, ಸಾಧನೆಯಿಂದಾಗಿ 1989 ರಲ್ಲಿ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿಯನ್ನು ಗೆದ್ದಿದ್ದರು.
ದೂರದರ್ಶನ ಮಾತ್ರವಲ್ಲದೆ ಅವರು ಶುಕ್ರವಾರ ರಾತ್ರಿ ಆಕಾಶವಾಣಿಯಲ್ಲಿ ಇಂಗ್ಲಿಷ್ ಹಾಡಿನ ಕೋರಿಕೆ ಕಾರ್ಯಕ್ರಮ `ಎ ಡೇಟ್ ವಿತ್ ಯು’ ಅನ್ನು ನಿರೂಪಿಸಿದ್ದರು.
ದೂರದರ್ಶನದಲ್ಲಿ ಸುದ್ದಿ ನಿರೂಪಕಿಯಾಗಿ ಯಶಸ್ವಿ ವೃತ್ತಿಜೀವನದ ನಂತರ, ಅವರು ಕಾರ್ಪೊರೇಟ್ ಸಂವಹನ, ಸರ್ಕಾರಿ ಸಂಪರ್ಕ ಮತ್ತು ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರು.
ಗೀತಾಂಜಲಿ ಅಯ್ಯರ್ ಅವರು ವರ್ಲ್ಡ್ ವೈಡ್ ಫಂಡ್, ಭಾರತದ ಪ್ರಮುಖ ದಾನಿಗಳ ಮುಖ್ಯಸ್ಥರಾಗಿದ್ದರು. ಹಾಗೂ ಶ್ರೀಧರ್ ಕ್ಷೀರಸಾಗರ ಅವರ ಟಿವಿ ನಾಟಕ ‘ಖಂಡಾನ್’ ನಲ್ಲಿಯೂ ಅವರು ನಟಿಸಿದ್ದಾರೆ.
ಗಣ್ಯರಿಂದ ಸಂತಾಪ:
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗೀತಾಂಜಲಿ ಅಯ್ಯರ್ ಅವರ ನಿಧನಕ್ಕೆ ದೇಶದ ಅನೇಕ ಗಣ್ಯರು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ”ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊದಲ್ಲಿ ಮೊದಲ ಮತ್ತು ಅತ್ಯುತ್ತಮ ಇಂಗ್ಲೀಷ್ ಸುದ್ದಿ ನಿರೂಪಕರಲ್ಲಿ ಒಬ್ಬರಾದ ಗೀತಾಂಜಲಿ ಅಯ್ಯರ್ ಅವರ ನಿಧನದ ವಿಷಯ ತಿಳಿದು ತೀವ್ರ ದುಃಖವಾಗಿದೆ. ಅಂಜಲಿ ಅವರು ಪತ್ರಿಕೋದ್ಯಮ ಮತ್ತು ಪ್ರಸಾರ ಉದ್ಯಮಗಳಲ್ಲಿ ಅಚ್ಚಳಿಯದ ಗುರುತು ಬಿಟ್ಟು ಹೋಗಿದ್ದಾರ”. ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಕಾಂಗ್ರೆಸ್ ನಾಯಕಿ ನೆಟ್ಟಾ ಡಿಸೋಜಾ ಅವರು ಟ್ವಿಟ್ಟರ್ನಲ್ಲಿ “ಗೀತಾಂಜಲಿ ಅಯ್ಯರ್ ಅವರು ನಮ್ಮ ಟಿವಿ ಪರದೆಗಳನ್ನು ಅಲಂಕರಿಸಿದ ದಿನಗಳನ್ನು ನಾವು ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತೇವೆ. ಅವರ ಅಕಾಲಿಕ ನಿಧನದಿಂದ ದುಃಖವಾಗಿದೆ. ಅವರ ಪ್ರೀತಿಪಾತ್ರರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ. ” ಎಂದು ಬರೆದಿದ್ದಾರೆ.