ಒಡಿಶಾದ ಬಾಲಸೋರ್ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಸರಣಿ ರೈಲು ಅಪಘಾತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 237ಕ್ಕೆ ಏರಿಕೆಯಾಗಿದೆ. ಸುಮಾರು 900 ಮಂದಿ ಗಾಯಗೊಂಡಿದ್ದಾರೆ. ಕೋರಮಂಡಲ್ ಎಕ್ಸ್ಪ್ರೆಸ್ ಮತ್ತು ಬೆಂಗಳೂರು- ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಚೆನ್ನೈ ಮತ್ತು ಪಶ್ಚಿಮ ಬಂಗಾಳದ ಶಾಲಿಮರ್ ನಡುವೆ ಸಂಚರಿಸುವ ಕೋರಮಂಡಲ್ ಎಕ್ಸ್ಪ್ರೆಸ್ ರೈಲು . ಬೆಂಗಳೂರಿನ ಯಶವಂತಪುರದಿಂದ ಹೌರಾಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ನಡುವೆ ಅಪಘಾತ ಸಂಭವಿಸಿದೆ. ಈ ರೀತಿಯ ದುರಂತಗಳು ಸ್ವಾಂತತ್ರ್ಯ ಭಾರತದ ಇತಿಹಾಸದಲ್ಲಿ ಇದೇ ಮೊದಲಲ್ಲ ಇಂತಹ ಅನೇಕ ಭೀಕರ ರೈಲು ದುರಂತಗಳಿಗೆ ಭಾರತ ಸಾಕ್ಷಿಯಾಗಿದೆ.
ಭಾರತ ಕಂಡ ಭೀಕರ ರೈಲು ಅಪಘಾತಗಳು:
*1964ರ ಡಿಸೆಂಬರ್ 23ರಂದು ಪಂಬನ್-ಧನುಷ್ಕೋಡಿ ಪ್ಯಾಸೆಂಜರ್ ರೈಲು ರಾಮೇಶ್ವರಂ ಸೈಕ್ಲೋನ್ನಿಂದ ಕೊಚ್ಚಿಹೋಗಿ, ಅದರಲ್ಲಿದ್ದ 126 ಪ್ರಯಾಣಿಕರು ಮೃತಪಟ್ಟಿದ್ದರು.
*1981ರ ಜೂನ್ 6ರಂದು ಭಾರತವು ಅತ್ಯಂತ ಭೀಕರ ರೈಲು ದುರಂತಕ್ಕೆ ಸಾಕ್ಷಿಯಾಯಿತು. ಬಿಹಾರದಲ್ಲಿ ಸೇತುವೆಯನ್ನು ದಾಟುವಾಗ ರೈಲು ಬಾಗಮತಿ ನದಿಗೆ ಬಿದ್ದು, ಸುಮಾರು 750ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು.
* 1995ರ ಆಗಸ್ಟ್ 20ರಂದು ಉತ್ತರ ಪ್ರದೇಶದ ಫಿರೋಜಾಬಾದ್ ಬಳಿ ಪುರುಷೋತ್ತಮ್ ಎಕ್ಸ್ಪ್ರೆಸ್ ರೈಲು, ಸ್ಟೇಷನರಿ ಕಾಳಿಂದಿ ಎಕ್ಸ್ಪ್ರೆಸ್ ರೈಲಿಗೆ ಡಿಕ್ಕಿ ಹೊಡೆಯಿತು. ಈ ಭೀಕರ ಅಪಘಾತದಲ್ಲಿ 305ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು.
1988ರ ನೆವೆಂಬರ್ 26ರಂದು ಪಂಜಾಬ್ನ ಖನ್ನಾದಲ್ಲಿ ಫ್ರಂಟಿಯರ್ ಗೋಲ್ಡನ್ ಟೆಂಪಲ್ ರೈಲಿನ ಹಳಿತಪ್ಪಿ ಮೂರು ಬೋಗಿಗಳಿಗೆ ಜಮ್ಮು ತವಿ-ಸೀಲ್ದಾ ಎಕ್ಸ್ಪ್ರೆಸ್ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ 212 ಮಂದಿ ಸಾವನ್ನಪ್ಪಿದರು.
* 1999ರ ಆಗಸ್ಟ್ 2ರಂದು ಪಶ್ಚಿಮ ಬಂಗಾಳದ ಗೈಸಾಲ್ನಲ್ಲಿ ರೈಲು ದುರಂತ ಸಂಭವಿಸಿತು. ಉತ್ತರ ಫ್ರಂಟಿಯರ್ ರೈಲ್ವೆ ಕತಿಹಾರ್ ವಿಭಾಗದ ಗೈಸಾಲ್ ನಿಲ್ದಾಣದಲ್ಲಿ ಬ್ರಹ್ಮಪುತ್ರ ರೈಲು, ಅವಧ್ ಅಸ್ಸಾಂ ಎಕ್ಸ್ಪ್ರೆಸ್ಗೆ ಡಿಕ್ಕಿಹೊಡೆದ ಪರಿಣಾಮ 285 ಮಂದಿ ಮೃತಪಟ್ಟು, 300ಕ್ಕೂ ಅಧಿಕ ಮಂದಿ ಗಾಯಗೊಂಡರು. ಈ ದುರಂತದಲ್ಲಿ ಬಹುತೇಕ ಸಂತ್ರಸ್ತರು ಸೇನೆ, ಬಿಎಸ್ಎಫ್ ಮತ್ತು ಸಿಆರ್ಪಿಎಫ್ ಸಿಬ್ಬಂದಿಯಾಗಿದ್ದರು.
* 2016ರ ನವೆಂಬರ್ 20ರಂದು ಇಂದೋರ್-ರಾಜೇಂದ್ರ ನಗರ ಎಕ್ಸ್ಪ್ರೆಸ್ನ 14 ಬೋಗಿಗಳು ಉತ್ತರ ಪ್ರದೇಶದ ಕಾನ್ಪುರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಪುಖ್ರಾಯನ್ನಲ್ಲಿ ಹಳಿತಪ್ಪಿದವು. ಈ ಅವಘಡದಲ್ಲಿ 152 ಮಂದಿ ಮೃತಪಟ್ಟು, 260ಕ್ಕೂ ಅಧಿಕ ಮಂದಿ ಗಾಯಾಗೊಂಡಿದ್ದರು.
* 2002ರ ಸೆಪ್ಟೆಂಬರ್ 9ರಂದು ಪಶ್ಚಿಮ ಬಂಗಾಳದ ಹೌರಾ ರಾಜಧಾನಿ ಎಕ್ಸ್ಪ್ರೆಸ್ ರೈಲು ಬಿಹಾರ ರಾಜ್ಯದ ಔರಂಗಾಬಾದ್ ಜಿಲ್ಲೆಯ ರಫಿಗಂಜ್ನ ಧಾವೆ ನದಿಯ ಸೇತುವೆಯ ಮೇಲೆ ಹಳಿತಪ್ಪಿ 140ಕ್ಕೂ ಹೆಚ್ಚು ಜನರು ಸಾವಿಗೀಡಾದರು.
* 2009 ಫೆಬ್ರವರಿ 13 ರಂದು ರೈಲು ಜಾಜ್ಪುರ ರಸ್ತೆ ರೈಲು ನಿಲ್ದಾಣವನ್ನು ಅತಿ ವೇಗದಲ್ಲಿ ಹಾದು ಹಳಿ ಬದಲಿಸುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಬೋಗಿಗಳು ಎಲ್ಲಾ ದಿಕ್ಕುಗಳಲ್ಲಿಯೂ ಚದುರಿ ರೈಲಿನ ಇಂಜಿನ್ ಒಂದು ಟ್ರ್ಯಾಕ್ಗೆ ಹೋಗಿ ಪಲ್ಟಿಯಾಗಿತ್ತು. ಅಪಘಾತದಲ್ಲಿ ಸುಮಾರು 16 ಪ್ರಯಾಣಿಕರು ಸಾವನ್ನಪ್ಪಿದ್ದರು.
* 2010ರ ಮೇ 28ರಂದು ಜ್ಞಾನೇಶ್ವರಿ ಎಕ್ಸ್ಪ್ರೆಸ್ ರೈಲು ಹಳಿತಪ್ಪಿ ಭೀಕರ ದುರಂತ ಸಂಭವಿಸಿತು. ಮುಂಬೈಗೆ ತೆರಳುತ್ತಿದ್ದ ರೈಲು ಜಾರ್ಗ್ರಾಮ್ ಬಳಿ ಹಳಿತಪ್ಪಿ, ಮುಂದೆ ಬರುತ್ತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆಯಿತು. ಇದರ ಪರಿಣಾಮ 148 ಪ್ರಯಾಣಿಕರು ಜೀವಕಳೆದುಕೊಂಡಿದ್ದರು.